ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮುಕ್ತಾಯದ ನಂತರ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನಾಡಲಿದೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು, ಆದರೆ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಆದರೆ, ಭಾರತ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ತಲೆನೋವಾಗಿ ಕಾಡುತ್ತಿದೆ.
ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಈಗಾಗಲೇ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಹಲವು ಆಟಗಾರರು ಗಾಯಗೊಳ್ಳುವ ಭಯ ಎದುರಾಗಿದೆ. ಇದರಿಂದ ಹತಾಶೆಗೊಂಡಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಎನ್ಸಿಎಯ ಕ್ರೀಡಾ ವಿಜ್ಞಾನ ಮುಖ್ಯಸ್ಥ ನಿತಿನ್ ಪಟೇಲ್ ಅವರನ್ನು ಭೇಟಿಯಾಗಲಿದ್ದಾರೆ.

ಎನ್ಸಿಎ ತಪ್ಪು ನಿರ್ವಹಣೆಯ ಪರಿಣಾಮ ಹಲವು ಆಟಗಾರರು ದೀರ್ಘಕಾಲದವರೆಗೆ ಕ್ರಿಕೆಟ್ನಿಂದ ತಪ್ಪಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಹೊರತುಪಡಿಸಿ ಉಳಿದ ಆಟಗಾರರ ಗಾಯದ ನಿರ್ವಹಣೆಯಲ್ಲಿ ಎನ್ಸಿಎ ಎಡವಿದೆ. ದೀಪಕ್ ಚಹಾರ್ ಕೂಡ ಗಾಯದಿಂದ ಚೇತರಿಸಿಕೊಂಡಿಲ್ಲ, ಏಕೆಂದರೆ ಅವರ ಹೋರಾಟವು ಮಂಡಿರಜ್ಜು ಸಮಸ್ಯೆಯೊಂದಿಗೆ ಮುಂದುವರೆದಿದೆ. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ದ್ರಾವಿಡ್ ಮತ್ತು ಅವರ ಸಿಬ್ಬಂದಿ ಎನ್ಸಿಎ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಆಟಗಾರರ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಬಗ್ಗೆ ಚರ್ಚೆ
ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಇತರ ಸಹಾಯಕ ಸಿಬ್ಬಂದಿ ವಿವಿಎಸ್ ಲಕ್ಷ್ಮಣ್ ನೇತೃತ್ವದ ಎನ್ಸಿಎ ತಂಡವನ್ನು ಭೇಟಿಯಾಗಿ ಹಿರಿಯ ತಂಡಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಫ್ರಾಂಚೈಸಿಗಳು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಯೋಜನೆಯನ್ನು ಹಾಕುವಂತೆ ಕೇಳಿದ್ದರೂ, ಬಿಸಿಸಿಐ ಅಂತಹ ಸೂಚನೆ ನೀಡಲಿಲ್ಲ. ಬದಲಿಗೆ ಎನ್ಸಿಎಗೆ ಆಟಗಾರರ ಕೆಲಸದ ಹೊರೆ ನಿರ್ವಹಣೆ ಮಾಡಲು ಕೇಳಿತ್ತು.

ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಕೇಂದ್ರೀಯ ಗುತ್ತಿಗೆ ಆಟಗಾರರ ಗಾಯ ಮತ್ತು ಕೆಲಸದ ಹೊರೆ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯು ವಿಶ್ವಕಪ್ಗೆ 20 ಆಟಗಾರರು ಮತ್ತು ಉದಯೋನ್ಮುಖ ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡುವುದರೊಂದಿಗೆ, ಎನ್ಸಿಎ ಕೂಡ ಆಟಗಾರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಬೌಲರ್ ಗಳ ಮೇಲೆ ಹೆಚ್ಚಿನ ಕಾಳಜಿ
ಕ್ರಿಕೆಟ್ನಲ್ಲಿ ಬ್ಯಾಟರ್ಗಳಿಗಿಂತ ಬೌಲರ್ ಗಳು ಬೇಗನೆ ಗಾಯಗೊಳ್ಳುವ ಭಯ ಇರುವುದರಿಂದ ಅವರ ಕೆಲಸದ ಹೊರೆ ನಿರ್ವಹಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಜಯದೇವ್ ಉನದ್ಕತ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಇವರು ಗಾಯಗೊಳ್ಳದಂತೆ ನೋಡಿಕೊಳ್ಳುವುದು ಈಗ ಬಹಳ ಮುಖ್ಯವಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸಹಾಯಕ ಸಿಬ್ಬಂದಿಯಾಗಿರುವ ಒಬ್ಬ ಖ್ಯಾತ ಕೋಚ್, ಇದು ಒಂದು ಸಮಸ್ಯೆ ಎಂದು ಒಪ್ಪಿಕೊಂಡಿದ್ದಾರೆ. "ಪ್ರಸ್ತುತ ಎಲ್ಲಾ ಭಾರತೀಯ ವೇಗಿಗಳು ವಾರಕ್ಕೆ ಕನಿಷ್ಠ 200 ಎಸೆತಗಳನ್ನು (ಅಂದಾಜು 33 ಓವರ್ಗಳು) ಬೌಲ್ ಮಾಡಬೇಕಾಗಿದೆ. ಇದರೊಂದಿಗೆ ಆಟಗಾರರ ಫಿಟ್ನೆಸ್ ಕಾಪಾಡಬೇಕು" ಎಂದು ಅವರು ಹೇಳಿದರು. ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಸರಣಿಯ ನಂತರ ಎಲ್ಲಾ ಮೊದಲ ತಂಡದ ಬೌಲರ್ಗಳಿಗೆ ತರಬೇತಿ ನೀಡಲು ಕೆಂಪು ಡ್ಯೂಕ್ಸ್ ಬಾಲ್ ನೀಡಲಾಗುವುದು ಎಂದು ಹೇಳಿದ್ದರು.