ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರುನೋಡುತ್ತಿದ್ದಾರೆ. ಇಂಗ್ಲೆಂಡ್ನ ಓವಲ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಯಾವ ತಂಡ ಗೆದ್ದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಕುತೂಹಲ ಕ್ಷಣಕ್ಷಣಕ್ಕೆ ಹೆಚ್ಚಾಗುತ್ತಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ತಂಡಗಳ ಬಲಾಬಲಗಳ ಆಧಾರದಲ್ಲಿ ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದು ಕುತೂಹಲಕಾರಿ ಉತ್ತರ ನೀಡಿದ್ದಾರೆ.
ಓವಲ್ನ ಬೌನ್ಸಿ ಪಿಚ್ನಲ್ಲಿ ಆಸ್ಟ್ರೇಲಿಯಾ ತಂಡ ನೋಡಲು ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಅದ್ಭುತ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಟೀಮ್ ಇಂಡಿಯಾದ ಮಾಜಿ ಜೋಚ್ ರವಿ ಶಾಸ್ತ್ರಿ ಮಾತ್ರವಲ್ಲದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಒಪ್ಪಿಕೊಂಡಿದ್ದಾರೆ.

ಬೂಮ್ರಾ ಇದ್ದಿದ್ದರೆ ಸಮಬಲದ ಹೋರಾಟವಾಗುತ್ತಿತ್ತು
ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶ ಪಡೆದುಕೊಂಡಿತ್ತು. ಈ ಬಾರಿಯ ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಜಸ್ಪ್ರಿತ್ ಬೂಮ್ರಾ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. "ವೇಗದ ಬೌಲಿಂಗ್ ವಿಭಾಗವನ್ನು ಗಮನಿಸಿದರೆ ಜಸ್ಸಪ್ರೀತ್ ಬೂಮ್ರತಾ ಇದ್ದಿದ್ದರೆ ಇದು ಸಮಬಲದ ಹೋರಾಟವಾಗಿರುತ್ತಿತ್ತು. ಶಮಿ, ಬೂಮ್ರಾ, ಸಿರಾಜ್ ದಾಳಿಗಿಳಿಯುತ್ತಿದ್ದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯಲ್ಲಿ ಸ್ಟಾರ್ಕ್, ಕಮ್ಮಿನ್ಸ್ ಇದ್ದಾರೆ. ಇಲ್ಲಿ ಮ್ಯಾಚ್ ಫಿಟ್ನೆಸ್ ಬಹಳ ಮುಖ್ಯ ಪಾತ್ರವಹಿಸುತ್ತದೆ" ಎಂದಿದ್ದಾರೆ ರವಿ ಶಾಸ್ತ್ರಿ.
ಇನ್ನು ಇದೇ ಸಂದರ್ಭದಲಿ ಭಾರತೀಯ ತಂಡದ ಆಟಗಾರರು ಬಹುತೇಕ ಐಪಿಎಲ್ನಲ್ಲಿ ಆಡಿರುವ ಹಿನ್ನೆಲೆಯಲ್ಲಿ ಅದು ಕೂಡ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ. ಎರಡು ತಿಂಗಳ ಕಾಲ ಆಟಗಾರರು ಟಿ20 ಮಾದರಿಯಲ್ಲಿ ಆಡಿದ್ದರು ಕೂಡ ಅವರು ನಿತ್ಯವೂ ಸಾಕಷ್ಟು ಅಭ್ಯಾಸವನ್ನು ನಡೆಸುತ್ತಿರುತ್ತಾರೆ. ಭಿನ್ನ ಬೌಲರ್ಗಳನ್ನು ಎದುರಿಸುವ ಅವಕಾಶ ಹೊಂದಿರುತ್ತಾರೆ. ಇದು ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ. ಭಾರತದ ಮಾಜಿ ಕೋಚ್ ಅವರ ಈ ಅಭಿಪ್ರಾಯಕ್ಕೆ ರಿಕಿ ಪಾಂಟಿಂಗ್ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಕೂಡ ಸಮ್ಮತಿ ಸೂಚಿಸಿದ್ದಾರೆ.
ಇನ್ನು ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕೆಲ ಟೀಮ್ ಇಂಡಿಯಾದ ಪ್ರಮುಖ ಸದಸ್ಯರು ಲಭ್ಯವಿಲ್ಲ. ರಿಷಭ್ ಪಂತ್, ಶ್ರೇಯಸ್ ಐಯ್ಯರ್ ಹಾಗೂ ಜಸ್ಪ್ರೀತ್ ಬೂಮ್ರಾ ಪ್ರಮುಖವಾಗಿ ಈ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ. ಆದರೆ ಈ ಮೂವರನ್ನು ಹೊರತುಪಡಿಸಿದರೂ ಟೀಮ್ ಇಂಡಿಯಾ ಬಲಿಷ್ಠವಾಗಿಯೇ ಇದೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲುವು ಸಾಧಿಸಲು ಬಲಿಷ್ಠ ಪಡೆಯೊಂದಿಗೆ ಭಾರತ ಕಣಕ್ಕಿಳಿಯುತ್ತಿರುವುದರಲ್ಲಿ ಅನುಮಾನವಿಲ್ಲ.