ಇಂಗ್ಲೆಂಡ್ನ ಓವಲ್ನಲ್ಲಿ ನಡೆಯುತ್ತಿರುವ 2021-23ರ ಚಕ್ರದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸಂಪೂರ್ಣ ಹಿನ್ನಡೆ ಅನುಭವಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿದ್ದು, ಮೊದಲೆರಡು ದಿನದಾಟದ ಅಂತ್ಯದ ವೇಳೆಗೆ ಆಸೀಸ್ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ.
ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 151 ರನ್ಗಳಿಗೆ ಅಗ್ರಕ್ರಮಾಂಕದ 5 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಲು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಕಾರಣ ನೀಡಿದ್ದು, ಮೊದಲ ದಿನದಂದು ಪಿಚ್ ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಭಾರತೀಯ ಬೌಲರ್ಗಳು ಪೂರ್ಣವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಹೇಳಿದ್ದಾರೆ.
ಇವರೆಗಿನ ಎರಡು ದಿನಗಳ ಆಟದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಕೇವಲ ಐದು ವಿಕೆಟ್ಗಳು ಬಾಕಿ ಉಳಿದಿರುವಂತೆಯೇ ಭಾರತ ಇನ್ನೂ 318 ರನ್ಗಳ ಹಿನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಸ್ಕೋರ್ ಬೋರ್ಡ್ನಲ್ಲಿ 469 ರನ್ಗಳ ಬೃಹತ್ ಸ್ಕೋರ್ ಕಲೆಹಾಕಿದ ನಂತರ, ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು 38 ಓವರ್ಗಳಲ್ಲಿ ಐದು ವಿಕೆಟ್ಗೆ 151 ರನ್ಗಳಿಗೆ ನಿಯಂತ್ರಿಸಿದೆ.

"ಮೊದಲ ದಿನದ ಮೊದಲ ಗಂಟೆಯಲ್ಲಿ ಭಾರತದ ಬೌಲರ್ಗಳು ತಮ್ಮನ್ನು ನಿರಾಸೆಗೊಳಿಸಿದರು. ಬೌಲಿಂಗ್ ತುಂಬಾ ಕಡಿಮೆಯಾಗಿತ್ತು ಎಂದು ನಾನು ಭಾವಿಸುತ್ತೇನೆ," ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಐಸಿಸಿಗೆ ತಿಳಿಸಿದ್ದಾರೆ.
"ವಿಕೆಟ್ನ ಪರಿಸ್ಥಿತಿಗಳು, ಓವರ್ಹೆಡ್ ಪರಿಸ್ಥಿತಿಗಳು ಮತ್ತು ಹೊಚ್ಚಹೊಸ ಡ್ಯೂಕ್ಸ್ ಬಾಲ್ನೊಂದಿಗೆ ಭಾರತೀಯ ಬೌಲರ್ಗಳು ಪೂರ್ಣವಾಗಿ ಬೌಲ್ ಮಾಡಬೇಕಾಗಿತ್ತು. ಚೆಂಡನ್ನು ನೆಲ ಮಟ್ಟದಲ್ಲಿ ಹಾಕಬೇಕಾಗಿತ್ತು. ಭೋಜನ ವಿರಾಮದ ವೇಳೆ ಆಸ್ಟ್ರೇಲಿಯಾದ ನಾಲ್ಕು ಅಥವಾ ಐದು ವಿಕೆಟ್ ಕಬಳಿಸಬೇಕಿತ್ತು. ಆದರೆ ಕೇವಲ ಎರಡು ವಿಕೆಟ್ ಮಾತ್ರ ಪಡೆದರು. ಇದು ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಫಲಿತಾಂಶವಾಯಿತು," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.
ಟಾಸ್ ಗೆದ್ದ ನಂತರ ಭಾರತ ಏನು ಮಾಡಲಿದೆ ಎಂಬುದರ ಕುರಿತು ನಾಯಕ ರೋಹಿತ್ ಶರ್ಮಾ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸುವುದನ್ನು ತಾನು ನೋಡಿದ್ದೇನೆ ಎಂದು ರಿಕಿ ಪಾಂಟಿಂಗ್ ಹೇಳಿದರು.

"ಭಾರತ ತಂಡವು ರವಿಚಂದ್ರನ್ ಅಶ್ವಿನ್ ಅವರನ್ನು ಬಿಟ್ಟು ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ರೂಪದಲ್ಲಿ ನಾಲ್ಕು ಸ್ಪೆಷಲಿಸ್ಟ್ ವೇಗದ ಬೌಲರ್ಗಳನ್ನು ಆಡಿಸಿದೆ. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಶತಕಗಳನ್ನು ಗಳಿಸಿ ನಾಲ್ಕನೇ ವಿಕೆಟ್ಗೆ 285 ರನ್ಗಳ ಬೃಹತ್ ಜೊತೆಯಾಟದಿಂದ ಭಾರತದ ತಂತ್ರವು ಕಾರ್ಯರೂಪಕ್ಕೆ ಬರಲಿಲ್ಲ," ಎಂದರು.
"ನಾಯಕನು ಟೀಕೆಗಳನ್ನು ಎದುರಿಸುತ್ತಾನೆ ಎಂದು ನನಗೆ ತಿಳಿದಿದೆ. ಆದರೆ ಟಾಸ್ ಗೆದ್ದು ಬೌಲಿಂಗ್ ಮಾಡುವ ನಿರ್ಧಾರ ಅವರದ್ದು ಮಾತ್ರವಲ್ಲ ಎಂದು ನನಗೆ ತಿಳಿದಿದೆ. ಬುಧವಾರ ಬೆಳಿಗ್ಗೆ ನಾನು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡುವಿನ ಮಾತುಕತೆ ನೋಡಿದೆ. ಟಾಸ್ ಗೆದ್ದ ನಂತರ ಏನು ಮಾಡಬೇಕೆಂಬುದರ ಕುರಿತು ಸುದೀರ್ಘ ಚರ್ಚೆ ನಡೆಸಿದರು," ರಿಕಿ ಪಾಂಟಿಂಗ್ ತಿಳಿಸಿದ್ದಾರೆ.