ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಕ್ಯಾಮೆರಾನ್ ಗ್ರೀನ್ ಪಡೆದ ಕ್ಯಾಚ್ಗೆ ಔಟಾಗಿದ್ದು ಶನಿವಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಭಾರತದ ದಾಖಲೆಯ 444 ರನ್ ಚೇಸಿಂಗ್ ವೇಳೆ ಎಂಟನೇ ಓವರ್ನಲ್ಲಿ ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್ ಬ್ಯಾಟ್ಗೆ ಸವರಿ ಹೋದ ಚೆಂಡನ್ನು ಪಡೆಯಲು ಕ್ಯಾಮೆರಾನ್ ಗ್ರೀನ್ ಎಡಕ್ಕೆ ಡೈವ್ ಮಾಡಿದರು. ಚೆಂಡು ಕ್ಯಾಮೆರಾನ್ ಗ್ರೀನ್ ಕೈಬೆರಳಿನಲ್ಲಿ ಎತ್ತಿಕೊಂಡರು. ಆನ್-ಫೀಲ್ಡ್ ಅಂಪೈರ್ಗಳಾದ ಕ್ರಿಸ್ ಗಫಾನಿ ಔಟ್ ಎಂದು ತೀರ್ಪು ನೀಡಿದರು.

ಆಗ ಶುಭ್ಮನ್ ಗಿಲ್ ಅವರು ಥರ್ಡ್ ಅಂಪೈರ್ ಮೊರೆ ಹೋದರು. ಹಲವು ಮರು ವೀಕ್ಷಣೆಯ ವೇಳೆ ಚೆಂಡು ನೆಲಕ್ಕೆ ಸವರಿರುವುದು ಸ್ಪಷ್ಟವಾಗಿತ್ತು. ಆದರೂ ಮೂರನೇ-ಅಂಪೈರ್ ರಿಚರ್ಡ್ ಕೆಟಲ್ಬರೋ ಕ್ಲೀನ್ ಕ್ಯಾಚ್ ಎಂದು ಅಂತಿಮ ತೀರ್ಪು ನೀಡಿದರು.
ಈ ವೇಳೆ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು. ಕ್ಯಾಮೆರಾನ್ ಗ್ರೀನ್ ಪಡೆದ ಚೆಂಡು ನೆಲಕ್ಕೆ ಸವರಿತ್ತೇ ಎಂಬ ಬಗ್ಗೆ ಲೈವ್ ವೀಡಿಯೊ ಅಸ್ಪಷ್ಟವಾಗಿತ್ತು. ಭಾರತವು 7.1 ಓವರ್ಗಳಲ್ಲಿ 41 ರನ್ ಗಳಿಸಿ ಮೊದಲ ವಿಕೆಟ್ ಕಳೆದುಕೊಂಡಿತು. ಈ ವಿವಾದಾತ್ಮಕ ಕ್ಯಾಚ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.
"ಬಾಲ್ ಅನ್ನು ಕ್ಯಾಮೆರಾನ್ ಗ್ರೀನ್ ಪಡೆದರು ಮತ್ತು ನೆಲದಿಂದ 6-8 ಇಂಚುಗಳಷ್ಟು ಮೇಲಿರಬಹುದು ಅನಿಸುತ್ತದೆ. ಆದರೆ ನನಗೆ ಸಿಕ್ಕಿರುವ ಮಾಹಿತಿ ಎಂದರೆ, ಕ್ಯಾಚ್ ಅನ್ನು ಪೂರ್ಣಗೊಳಿಸಿದ ನಂತರ ಚೆಂಡಿನ ಒಂದು ಭಾಗವು ನೆಲಕ್ಕೆ ತಗುಲಿತು. ರೋಹಿತ್ ಶರ್ಮಾ ಅಂಪೈರ್ಗಳೊಂದಿಗೆ ವಾದಿಸುತ್ತಿರುವುದು ನನಗೆ ಖಚಿತವಾಗಿದೆ. ಅದಕ್ಕಾಗಿಯೇ ಶುಭ್ಮನ್ ಗಿಲ್ ನಿರಾಶೆಗೊಂಡಿದ್ದಾರೆ," ಎಂದು ರಿಕಿ ಪಾಂಟಿಂಗ್ ಐಸಿಸಿ ಫೀಡ್ನ ವೀಕ್ಷಕ ವಿವರಣೆಯಲ್ಲಿ ಹೇಳಿದರು.
"ಹೌದು ನೀವು ಅದನ್ನು ಹೇಗೆ ನೋಡುತ್ತೀರಿ ಎಂಬುದರ ಮೇಲೆ ನಿಂತಿದೆ. ಕ್ಯಾಮೆರಾನ್ ಗ್ರೀನ್ ಚೆಂಡಿನ ಕೆಳಗೆ ಬೆರಳುಗಳಿಂದ ಚೆಂಡನ್ನು ಹಿಡಿದಿದ್ದಾನೆ. ಆದರೆ ಚೆಂಡಿನ ಯಾವುದೇ ಭಾಗವು ನೆಲವನ್ನು ಮುಟ್ಟಿದರೆ ಅದು ಚೆಂಡು ಕೈಯಲ್ಲಿ ಉಳಿಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅಂಪೈರ್ಗಳು ಯಾವಾಗಲೂ ನಾಟೌಟ್ ಎಂದು ಅರ್ಥೈಸಬಹುದು," ಎಂದು ಮತ್ತೊಬ್ಬ ವೀಕ್ಷಕ ವಿವರಣೆಗಾರ ಕುಮಾರ್ ಸಂಗಕ್ಕಾರ ತಿಳಿಸಿದರು.
ಇದೇ ವೇಳೆ ರವಿಶಾಸ್ತ್ರಿ ಕೂಡ, ""ಮೂರನೇ ಅಂಪೈರ್ ಬೆರಳುಗಳು ಕೆಳಗಿವೆ ಎಂದು ಭಾವಿಸಿದರು. ಆದರೆ ಅವರು ಕ್ಯಾಚ್ ಅನ್ನು ಪೂರ್ಣಗೊಳಿಸಿದ ನಂತರ ಚೆಂಡು ನೆಲಕ್ಕೆ ತಾಗಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ,'' ಎಂದರು.
"ಮೊದಲ ಅಂಪೈರ್ ನಿಮ್ಮನ್ನು ಔಟ್ ಮಾಡಿದಾಗ, ಮೂರನೇ ಅಂಪೈರ್ ಅದನ್ನು ರದ್ದುಗೊಳಿಸಲು ನಿರ್ಣಾಯಕ ಸಾಕ್ಷ್ಯವನ್ನು ಕಂಡುಹಿಡಿಯಬೇಕು," ಎಂದು ಸುನಿಲ್ ಗವಾಸ್ಕರ್ ಚಹಾ ವಿರಾಮದ ಸಮಯದಲ್ಲಿ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.

ಶುಭ್ಮನ್ ಗಿಲ್ ಅವರ ಕ್ಯಾಚ್ ಪಡೆದ ಕ್ಯಾಮೆರಾನ್ ಗ್ರೀನ್ ಚೆಂಡನ್ನು ಹುಲ್ಲಿಗೆ ತಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಲು ಲೈವ್ ವಿಡಿಯೋ ಅಸ್ಪಷ್ಟವಾಗಿತ್ತು ಹಾಗೂ ಚೆಂಡು ನೆಲಕ್ಕೆ ತಾಗಿರುವುದು ಮೇಲ್ನೋಟಕ್ಕೆ ಕಂಡುಬಂತು. ಆದರೂ ಔಟ್ ಎಂದು ತೀರ್ಪು ನೀಡಿದ ಥರ್ಡ್ ಅಂಪೈರ್ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಕ್ಯಾಮೆರಾನ್ ಗ್ರೀನ್ ಪಡೆದ ಕ್ಯಾಚ್ನ ಚಿತ್ರ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿ ಮೋಸಗಾರ, ಮೋಸಗಾರ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ವಿವಾದಾತ್ಮಕ ತೀರ್ಪಿಗೆ ಶುಭ್ಮನ್ ಗಿಲ್ ಔಟಾದರು.