ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ನಲ್ಲಿ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದ್ದು ಸಂಕಷ್ಟದಲ್ಲಿದೆ. ಮೊದಲಿಗೆ ಬೌಲಿಂಗ್ನಲ್ಲಿ ಹಿನ್ನಡೆ ಕಂಡಿದ್ದ ಟೀಮ್ ಇಂಡಿಯಾ ನಂತರ ಬ್ಯಾಟಿಂಗ್ನಲ್ಲಿಯೂ ಕಳಪೆ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ಈ ಸ್ಥಿತಿಯಿಂದ ಹೊರಬರುವುದು ಬಹಳ ಕಷ್ಟ ಎಂಬ ಸ್ಥಿತಿಯಿದೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಟೀಮ್ ಇಂಡಿಯಾ ಪರವಾಗಿ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದು ಈ ಹಿಂದೆ ಟೀಮ್ ಇಂಡಿಯಾ ಇಂಥಾ ಸ್ಥಿತಿಯನ್ನು ಎದುರಿಸಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಉದಾಹರಣೆಯಿದೆ ಎಂದಿದ್ದಾರೆ.
"ಭಾರತ ಈ ಪರಿಸ್ಥಿತಿಯಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತ ಆಸ್ಟ್ರೇಲಿಯಾ ವಿರುದ್ಧವೇ ಇದನ್ನು ಮಾಡಿದ್ದು ಪಂತ್ ಜಡೇಜಾ ಅವರಂಥಾ ಆಟಗಾರರೊಂದಿಗೆ ಈ ಪರಿಸ್ಥಿತಿಯಿಂದ ಹೊರಬಂದಿದೆ. ವಿಶೇಷವಾಗಿ ಪಂತ್ ಅವರಿಂದ ಇಂಥಾ ಸನ್ನಿವೇಶದಲ್ಲಿ ಅದ್ಭುತವಾದ ಪ್ರದರ್ಶನ ಹೊರಬಂದಿತ್ತು. ಅದನ್ನು ಅವರು ಮತ್ತೆ ಮಾಡಲು ಸಾಧ್ಯವೇ ಎಂಬುದು ಗೊತ್ತಿಲ್ಲ. ಈ ಹಂತದಲ್ಲಿ ಸ್ಕೋರ್ಬೋರ್ಡ್ ಬಗ್ಗೆ ಗಮನಹರಿಸುವುದು ಬಿಟ್ಟು ಉತ್ತಮ ಜೊತೆಯಾಟ ನೀಡುವುದರತ್ತ ಗಮನಹರಿಸುವುದು ಉತ್ತಮ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ.

ಇನ್ನು ಇದೇ ಸಂದರ್ಭದಲ್ಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ತಂಡಕ್ಕಿಂತ ಎರಡು ಸೆಶನ್ಗಳಷ್ಟು ಹಿಂದಿರುವ ಕಾರಣ ಈ ಟೆಸ್ಟ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವುದು ಬಹಳ ಕಠಿಣ ಎಂಬ ಮಾತನ್ನು ಹೇಳಿದ್ದಾರೆ. ಎರಡನೇ ದಿನದಾಟದ ಅಂತ್ಯದಲ್ಲಿ ಭಾರತ ತಂಡ ತನ್ನ ಅಗ್ರ ಕ್ರಮಾಂಕದ ಎಲ್ಲಾ ಆಟಗಾರರನ್ನು ಕೂಡ ಕಳೆದುಕೊಂಡಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿ ಬಳಿಕ ಹಠಾತ್ ಕುಸಿತಕ್ಕೆ ಒಳಗಾಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಕೂಡ ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲಲಿಲ್ಲ.

ಇನ್ನು ನಂತರ ಜೊತೆಯಾದ ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟದ ಮೂಲಕ ಚೇತರಿಕೆ ನೀಡುವ ಪ್ರಯತ್ನದಲ್ಲಿದ್ದಾಗ ಈ ಜೋಡಿಯನ್ನು ಕೂಡ ಆಸಿಸ್ ಸ್ಪಿನ್ನರ್ ನಥನ್ ಲಿಯಾನ್ ಬೇರ್ಪಡಿಸಿದರು. 48 ರನ್ಗಳಿಸಿದ್ದ ಜಡೇಜಾ ಅವರನ್ನು ಲಿಯಾನ್ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್