ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಒಂದು ದಿನ ಉಳಿದಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ, ಸ್ಟೀವ್ ಸ್ಮಿತ್ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ತಂಡದ ವಿರುದ್ಧ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಆದರೂ, ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಸಿರಾಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೈನಲ್ ಪಂದ್ಯಕ್ಕೆ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತದ ವೇಗಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಮಿ ಮತ್ತು ಸಿರಾಜ್ ಅವರಿಗೆ ಡ್ಯೂಕ್ ಬಾಲ್ ಸೂಕ್ತವಾಗಿರುತ್ತದೆ. ಭಾರತದ ತಂಡ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ ಎಂದು ಅವರು ಶ್ಲಾಘಿಸಿದರು.

ಭಾರತದ ತಂಡದಲ್ಲಿ ಉತ್ತಮ ವೇಗದ ಬೌಲಿಂಗ್ ಪಡೆ ಇದೆ. ಆಸ್ಟ್ರೇಲಿಯಾದ ಬಲಿಷ್ಟ ಬ್ಯಾಟಿಂಗ್ ಕ್ರಮಾಂಕಕ್ಕೆ ಅವರು ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಮ್ಮ ತಂಡದ ಬ್ಯಾಟರ್ ಗಳಿಗೂ ಎಚ್ಚರಿಕೆ ನೀಡಿದರು. 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಭಾರತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ.
"ನಾವು ಭಾರತ ತಂಡವನ್ನು ಸೋಲಿಸಬಹುದು. ಎರಡು ವರ್ಷ ಉತ್ತಮವಾಗಿ ಆಡಿದ್ದೇವೆ, ಆದ್ದರಿಂದಲೇ ಫೈನಲ್ಗೆ ಬಂದಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಉತ್ತಮವಾಗಿ ತಯಾರಿ ಮಾಡಿಕೊಂಡಿದ್ದೇವೆ" ಎಂದು ಸ್ಟೀವ್ ಸ್ಮಿತ್ ಹೇಳಿದರು.
"ಭಾರತ ತಂಡದಲ್ಲಿ ವೇಗಿಗಳು ಮಾತ್ರವಲ್ಲ ಸ್ಪಿನ್ ಬೌಲಿಂಗ್ ಕೂಡ ಉತ್ತಮವಾಗಿದೆ. ಎಲ್ಲಾ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಬೌಲ್ ಮಾಡುವ ಅನುಭವ ಅವರಿಗೆ ಇದೆ. ಭಾರತದ ಬೌಲಿಂಗ್ ಉತ್ತಮವಾಗಿ ಎಂದು ನಾನು ಭಾವಿಸುತ್ತೇನೆ. ನಾವು ಅವರ ವಿರುದ್ಧ ಉತ್ತಮವಾಗಿ ಆಡಬೇಕಿದೆ" ಎಂದು ಹೇಳಿದರು.
"ನಾನಿನ್ನೂ ಪಿಚ್ ಹೇಗಿದೆ ಎಂದು ನೋಡಿಲ್ಲ, ಅದರ ಬಗ್ಗೆ ಹೆಚ್ಚಿಗೆ ಏನು ಹೇಳಲು ಸಾಧ್ಯವಿಲ್ಲ, ಬೇಸಿಗೆ ಆಗಿರುವುದರಿಂದ ಪಿಚ್ ಸ್ವಲ್ಪ ಒಣಗಿರುತ್ತದೆ. ಆಟ ಸಾಗಿದಂತೆ ಸ್ಪಿನ್ ಬೌಲಿಂಗ್ಗೆ ಸಹಾಯ ಸಿಗಬಹುದು, ಆದ್ದರಿಂದ ನಾವು ಕಾಯುತ್ತಿದ್ದೇವೆ, ಪಿಚ್ ಹೇಗಿರುತ್ತದೆ ನೋಡಿ ಪ್ಲೇಯಿಂಗ್ 11 ನಿರ್ಧರಿಸುತ್ತೇವೆ" ಎಂದು ಹೇಳಿದರು.
ಇಂಗ್ಲೆಂಡ್ನ ಪರಿಸ್ಥಿತಿಯಲ್ಲಿ ಭಾರತ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಎರಡು ಆಯ್ಕೆಯಾಘಿದ್ದು, ಮೂರನೇ ವೇಗಿಯಾಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆಡಲಿದ್ದಾರೆ, ಆದರೆ ಅಶ್ವಿನ್ ಬದಲಾಗಿ ಉಮೇಶ್ ಯಾದವ್ ಆಯ್ಕೆಯಾಗುತ್ತಾರಾ ಎನ್ನುವ ಕುತೂಹಲ ಕೂಡ ಇದೆ.