ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಮುಂದಿನ ಚಕ್ರದಲ್ಲಿ ಮೂರು ಪಂದ್ಯಗಳ ಸರಣಿಯನ್ನು ಆಡುವ ರೋಹಿತ್ ಶರ್ಮಾ ಅವರ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಮೂರು ಪಂದ್ಯಗಳ ಸರಣಿ ಸಲಹೆ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಭಾರತ ತಂಡವನ್ನು ಟೀಕಿಸಿದ್ದಾರೆ. ಅಂತಹ ದೊಡ್ಡ ಪಂದ್ಯಗಳನ್ನು ಆಡುವ ಮೊದಲು ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದಿದ್ದಾರೆ.

ಭಾನುವಾರ, ಜೂನ್ 11ರಂದು ಲಂಡನ್ನ ಓವಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 209 ರನ್ಗಳಿಂದ ಸೋಲು ಕಂಡಿತು. 444 ರನ್ಗಳ ಬೃಹತ್ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ 234 ರನ್ಗಳಿಗೆ ಸರ್ವಪತನ ಕಂಡಿತು.
ಫೈನಲ್ ಪಂದ್ಯದ ನಂತರ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್, "ನಾನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಬಯಸುತ್ತೇವೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಮತ್ತು ನಾವು ಹೋರಾಡಿದ್ದೇವೆ. ಆದರೆ ನಾವು ಕೇವಲ 1 ಪಂದ್ಯವನ್ನು ಆಡಿದ್ದೇವೆ. ಮುಂದಿನ ಡಬ್ಲ್ಯುಟಿಸಿ ಚಕ್ರದಲ್ಲಿ 3 ಪಂದ್ಯಗಳ ಸರಣಿ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ," ಎಂದಿದ್ದರು.
ರೋಹಿತ್ ಶರ್ಮಾ ಅವರ ಈ ಸಲಹೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್. "ಇಲ್ಲ. ಈ ಪಂದ್ಯವನ್ನು ಬಹಳ ಸಮಯದ ಹಿಂದೆಯೇ ನಿರ್ಧರಿಸಲಾಗಿದೆ. ನೀವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚಕ್ರದ ಮೊದಲ ಪಂದ್ಯವನ್ನು ಆಡುವ ಮೊದಲೇ ನಿಮಗೆ ತಿಳಿದಿರುತ್ತದೆ. ಫೈನಲ್ನಲ್ಲಿ ಒಂದೇ ಪಂದ್ಯವನ್ನು ಆಡಲಾಗುತ್ತದೆ. ಹೀಗಾಗಿ, ಮೊದಲೇ ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು," ಎಂದು ಅಭಿಪ್ರಾಯಪಟ್ಟರು.

"ನೀವು ಐಪಿಎಲ್ಗೆ ತಯಾರಿ ನಡೆಸುವಾಗ, ಫೈನಲ್ಗೆ ನೀವು ಮೂರು ಪಂದ್ಯಗಳು ಉತ್ತಮವೆಂದು ಹೇಳುವುದಿಲ್ಲ. ಪ್ರತಿಯೊಬ್ಬರೂ ಕೆಟ್ಟ ದಿನ ಅಥವಾ ಒಳ್ಳೆಯ ದಿನಗಳನ್ನು ಹೊಂದಬಹುದು. ಪಂದ್ಯಾವಳಿಯ ಮೊದಲೇ ಅದು ಏನೆಂದು ನಿಮಗೆ ತಿಳಿದಿರುತ್ತದೆ. ಆದ್ದರಿಂದ, ನೀವು ಮೂರು ಪಂದ್ಯಗಳ ಫೈನಲ್ ಕೇಳಲು ಸಾಧ್ಯವಿಲ್ಲ. ನಾಳೆ, ನೀವು ಐದು ಪಂದ್ಯಗಳು ಅತ್ಯುತ್ತಮ ಎಂದು ಹೇಳಬಹುದು," ಎಂದು ರೋಹಿತ್ ಶರ್ಮಾ ಸಲಹೆಗೆ ಸುನಿಲ್ ಗವಾಸ್ಕರ್ ಕಿಡಿಕಾರಿದರು.
ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಒಂದೇ ಓವರ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ವಿಕೆಟ್ ಪಡೆದು ಗುಣಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದರು. ನಂತರ ನಾಥನ್ ಲಿಯಾನ್ ಅವರ ಅದ್ಭುತ ಬೌಲಿಂಗ್ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು.
