WTC Final: 2ನೇ ಇನ್ನಿಂಗ್ಸ್ನಲ್ಲಿ ಭಾರತದ ಬ್ಯಾಟಿಂಗ್ ಬಗ್ಗೆ ಸುನಿಲ್ ಗವಾಸ್ಕರ್ ಅಸಮಾಧಾನ

ಸೌಥಾಂಪ್ಟನ್ ಜೂನ್ 24: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಕೇನ್ ವಿಲಿಯಮ್ಸನ್ ಬಳಗ ಚಾಂಪಿಯನ್ ಪಟ್ಟಕ್ಕೇರಿದೆ. ಈ ಸಂದರ್ಭದಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
32 ರನ್ಗಳ ಅಲ್ಪ ಮುನ್ನಡೆಯನ್ನು ಸಾಧಿಸಿದ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ನ ಆರಂಭದ ಕೆಲವೇ ಹೊತ್ತಿನಲ್ಲಿ ಭಾರತದ ಆರಂಭಿಕರಿಬ್ಬರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ನಂತರ ಮೀಸಲು ದಿನಕ್ಕೆ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಆಟವನ್ನು ಕಾಯ್ದುಕೊಂಡಿದ್ದರು. ಅಂತಿಮ ದಿನದ ಆರಂಭದಲ್ಲಿಯೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ನಂತರ ಚೇತೇಶ್ವರ್ ಪೂಜಾರ ಹಾಘೂ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಳ್ಳುವ ಮೂಲಕ ಕುಸಿತವನ್ನು ಕಂಡಿತ್ತು.
ಒಂದೆಡೆ ಯುವ ಆಟಗಾರ ರಿಷಭ್ ಪಂತ್ ಏಕಾಂಗಿಯಾಗಿ ಹೋರಾಡುವ ಪ್ರಯತ್ನ ನಡೆಸಿದರಾದರೂ ಅವರಿಗೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ದೊರೆಯಲಿಲ್ಲ. 88 ಎಸೆತಗಳನ್ನು ಎದುರಿಸಿದ ಪಂತ್ 41 ರನ್ಗಳ ಕಾಣಿಕೆಯನ್ನು ನೀಡಿದರು. ಅಂತಿಮವಾಗಿ ನಿರ್ಣಾಯಕ ಹಂತದಲ್ಲಿ ಭಾರತ ಕ್ರಿಕೆಟ್ ತಂಡ 170 ರನ್ಗಳನ್ನು ಮಾತ್ರವೇ ಗಳಿಸಿತ್ತು. ಈ ಮೂಲಕ 139 ರನ್ಗಳ ಗುರಿಯನ್ನು ಪಡೆಯಿತು ಕಿವೀಸ್.
ಈ ಬಗ್ಗೆ ಸುನಿಲ್ ಗವಾಸ್ಕರ್ "ಭಾರತ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿತ್ತು. ಭಾರತದ ಪರವಾಗಿದ್ದ ಬೆಳಕು ಸರಿದಿದೆ. ಯಾವುದೇ ಹೋರಾಟ ಕಾಣಲಿಲ್ಲ. ಕೇವಲ 170 ರನ್ಗಳಿಗೆ ಭಾರತ ಆಲೌಟ್ ಆಗಿದೆ" ಎಂದು ಕಾಮೆಂಟರಿ ಬಾಕ್ಸ್ನಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ನಲ್ಲಿ ಪಾದದ ಚಲನೆ ಉತ್ತಮವಾಗಿರಲಿಲ್ಲ ಎಂದಿದ್ದಾರೆ. "ಜೇಮಿಸನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಹಿಂಗಾಲುಗಳ ಚಲನೆಯಿರಲಿಲ್ಲ. ಹೀಗಾಗಿ ಔಟಾಗುವ ಸಂದರ್ಭ ಉಂಟಾಯಿತು" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications