ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಭಾರತ ಕ್ರಿಕೆಟ್ ತಂಡದ ಮುಂದಿರುವ ದೊಡ್ಡ ಸವಾಲು. ಆಸ್ಟ್ರೇಲಿಯಾ ತಂಡವನ್ನು ಈ ಪ್ರತಿಷ್ಠಿತ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಎದುರಿಸಲಿದ್ದು ಇದಕ್ಕಾಗಿ ತಂಡವನ್ನು ಪ್ರಕಟಿಸಲಾಗಿದೆ. ಹಲವು ಪ್ರಮುಖ ಆಟಗಾರರು ಗಾಯಾಳುಗಳಾಗಿರುವ ಕಾರಣ ಆಯ್ಕೆ ಮಂಡಳಿಯ ಮುಂದೆ ಸವಾಲುಗಳಿತ್ತು. ಕಡೆಗೂ ಆಯ್ಕೆ ಸಮಿತಿ ಈ ಎಲ್ಲಾ ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜೂನ್ 7ರಿಂದ 11ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕಾಗಿ ಮಂಗಳವಾರ ಬಿಸಿಸಿಐ 15 ಆಟಗಾರರ ಬಳಗವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದ 15 ಆಟಗಾರರ ಪಡೆಯಲ್ಲಿ ಸುದೀರ್ಘ ಕಾಲದ ಬಳಿಕ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಶಾರ್ದೂಲ್ ಠಾಕೂರ್ ಅವರು ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಮಿಂಚಿದ ರಹಾನೆ
ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಭಾರತದ ಪರವಾಗಿ ಕೊನೆಯ ಬಾರಿಗೆ ಆಡಿದ್ದು 2022ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ. ಸತತವಾಘಿ ವೈಫಲ್ಉ ಅನುಭವಿಸಿದ ಕಾರಣ ರಹಾನೆ ತಂಡದಿಂದ ಹೊರಬಿದ್ದಿದ್ದರು. ಆದರೆ ಅದಾದ ಬಳಿಕ ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಹಾನೆ ಪ್ರಸ್ತಿತ ನಡೆಯುತ್ತಿರುವ ಐಪಿಎಲ್ನಲ್ಲಿಯೂ ತಮ್ಮ ಲಯವನ್ನು ಪ್ರದರ್ಶಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಶ್ರೇಯಸ್ ಐಯ್ಯರ್ ಹಾಗೂ ರಿಷಭ್ ಪಂತ್ ಅಲಭ್ಯವಾಗುತ್ತಿರುವ ಕಾರಣ ರಹಾನೆ ಈ ತಂಡದಲ್ಲಿ ಅವಕಾಶ ದೊರೆತಿದೆ.
ಸ್ಥಾನ ಉಳಿದಿಕೊಂಡ ಉನಾದ್ಕಟ್
ಇನ್ನು ಐದು ಮಂದಿ ವೇಗಿಗಳನ್ನು ಒಳಗೊಂಡಿರುವ ಈ ತಂಡದಲ್ಲಿ ಡೆಗೈ ವೇಗಿ ಜಯ್ದೇವ್ ಉನಾದ್ಕಟ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಉಮೇಶ್ ಯಾದವ್ ಉಳಿದ ಮೂವರು ವೇಗಿಗಳಾಗಿದ್ದರೆ ಶಾರ್ದೂಲ್ ಠಾಕೂರ್ ಆಲ್ರೌಂಡರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಕೆಎಲ್ ರಾಹುಲ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು ವಿಕೆಟ್ ಕೀಪರ್ ಬ್ಯಾಟರ್ ಆಗಿ ಶ್ರೀಕರ್ ಭರತ್ ಸ್ಥಾನ ಉಳಿದಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದ ಇಶಾನ್ ಕಿಶನ್ ತಂಡದಿಂದ ಹೊರಬಿದ್ದಿದ್ದಾರೆ.
WTC ಫೈನಲ್ಗೆ ಆಯ್ಕೆಯಾದ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್ದೇವ್ ಉನಾದ್ಕಟ್