ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 3ನೇ ದಿನದಾಟದ ಅಂತ್ಯದ ವೇಳೆಗೆ ಭಾರತ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 469 ರನ್ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 196 ರನ್ಗಳಿಗೆ ಸರ್ವಪತನ ಕಂಡಿತು. 173 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ಪಡೆ 4 ವಿಕೆಟ್ಗೆ 123 ರನ್ ಗಳಿಸಿ ಒಟ್ಟು 296 ರನ್ಗಳ ಮುನ್ನಡೆ ಸಾಧಿಸಿದೆ.

ಇನ್ನು ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮುಂಚಿತವಾಗಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬೇಕೆಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಮನಾರ್ಹ ಅಂಶವೆಂದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯು ಫೆಬ್ರವರಿಯಿಂದ ನಿರಂತರ ಕ್ರಿಕೆಟ್ ಆಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಐಪಿಎಲ್ 2023 ಟೂರ್ನಿಯಲ್ಲಿ ಆಡಿದ್ದಾರೆ.
2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ (15) ಮತ್ತು ವಿರಾಟ್ ಕೊಹ್ಲಿ (14) ಇಬ್ಬರೂ ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾಗಿದ್ದಾರೆ.

ಇವರಿಬ್ಬರ ಭವಿಷ್ಯದ ಬಗ್ಗೆ ಮಾತನಾಡಿದ ಮಾಜಿ ಕೋಚ್ ರವಿಶಾಸ್ತ್ರಿ, ಇಬ್ಬರು ಆಟಗಾರರು ಎಲ್ಲಾ ಮೂರು ಸ್ವರೂಪಗಳನ್ನು ಆಡಬಹುದು. ಆದರೆ ಸದ್ಯ ಅವರು ಅಗತ್ಯವಿಲ್ಲ. ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ವಿಶ್ರಾಂತಿ ನೀಡಿ ಮತ್ತು ಐಸಿಸಿ ಟೂರ್ನಿಗೆ ಮುಂಚಿತವಾಗಿ ಯುವ ಆಟಗಾರರಿಗೆ ಅವಕಾಶಗಳನ್ನು ನೀಡಿ ಎಂದು ಹೇಳಿದರು.
"ನಿರಂತರವಾಗಿ ಎಲ್ಲಾ ಮೂರು ಸ್ವರೂಪದ ಆಟಗಳನ್ನು ಆಡಲು ತುಂಬಾ ಕಠಿಣವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇನ್ನೂ ಎಲ್ಲಾ ಮೂರು ಸ್ವರೂಪಗಳನ್ನು ಆಡಬಹುದು," ಎಂದು ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಆರಂಭದ ಸಮೀಪದಲ್ಲಿ ಈ ಹಿರಿಯ ಆಟಗಾರರನ್ನು ತಂಡಕ್ಕೆ ಮರಳಿ ತರಬಹುದು ಎಂದು ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
"ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಎಲ್ಲಾ ಪಂದ್ಯಗಳನ್ನು ಆಡುವ ಅಗತ್ಯವಿಲ್ಲ. ಇತರ ಯುವ ಆಟಗಾರರಿಗೆ ಅವಕಾಶ ನೀಡಿ. ಮುಂದೆ ವಿಶ್ವಕಪ್ನಂತಹ ದೊಡ್ಡ ಪಂದ್ಯಾವಳಿ ಬರಲಿದೆ. ಆಗ ಹಿರಿಯ ಆಟಗಾರರನ್ನು ತಂಡದೊಂದಿಗೆ ಸಮಯ ಕಳೆಯಲು ಮತ್ತು ಆಟವಾಡಲು ತಂಡಕ್ಕೆ ಮರಳಿ ತನ್ನಿ. ಸದ್ಯ ವಿಶ್ರಾಂತಿ ನೀಡಿ," ಎಂದು ರವಿಶಾಸ್ತ್ರಿ ತಿಳಿಸಿದರು.
2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತಕ್ಕೆ ಮತ್ತೊಮ್ಮೆ ಸೋಲು?
ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಅಂದಿನಿಂದ ಭಾರತ ತಂಡ 2021ರ ಟಿ20 ವಿಶ್ವಕಪ್ ಹೊರತುಪಡಿಸಿ ಪ್ರತಿ ಐಸಿಸಿ ಟೂರ್ನಮೆಂಟ್ನಲ್ಲಿ ಕನಿಷ್ಠ ಸೆಮಿಫೈನಲ್ ತಲುಪಿದ್ದಾರೆ.
ಹೀಗಾಗಿ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಪ್ರಮುಖವಾಗಿರುತ್ತದೆ. ತಮ್ಮ ಹತ್ತು ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಲು ನೋಡುತ್ತಿರುವ ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಈ ಮಧ್ಯೆ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಅಜಿಂಕ್ಯ ರಹಾನೆ 89 ರನ್, ಶಾರ್ದೂಲ್ ಠಾಕೂರ್ 51 ರನ್ ಮತ್ತು ರವೀಂದ್ರ ಜಡೇಜಾ 48 ರನ್ ಹೊರತುಪಡಿಸಿ ಉಳಿದವರು ವಿಫಲರಾಗಿದ್ದಾರೆ.
ಉಳಿದ ಎರಡು ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ನೀಡುವ ಗುರಿಯನ್ನು ಭಾರತ ತಂಡ ಯಶಸ್ವಿಯಾಗಿ ಚೇಸ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ವೇಳೆ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಂದ ದೊಡ್ಡ ಮೊತ್ತ ನಿರೀಕ್ಷಿಸಲಾಗುತ್ತಿದೆ.