ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್. ಈ ಸ್ಟಾರ್ ಪ್ಲೇಯರ್ ಮೊದಲ ಪ್ರಕಟಿತ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಫೆಬ್ರವರಿ 11 ರಂದು ಪರಿಷ್ಕೃತ ತಂಡದಲ್ಲಿ ಇವರು ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಈಗ ಮತ್ತೆ ಯಶಸ್ವಿ ಜೈಸ್ವಾಲ್ ತಂಡ ಸೇರುವ ಸಾಧ್ಯತೆ ಇದೆ. ಏನಪ್ಪಾ, ತಂಡದಿಂದ ಕೈ ಬಿಟ್ಟ ಮೇಲೆ ಹೇಗೆ ಮತ್ತೆ ತಂಡವನ್ನು ಸೇರುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಸ್ಥಾನವನ್ನು ಪಡೆದಿದ್ದರು. ಆದರೆ ವರುಣ್ ಚಕ್ರವರ್ತಿ ತಂಡಕ್ಕೆ ಬರುತ್ತಿದ್ದಂತೆ ಯಶಸ್ವಿಗೆ ಕೈ ಬಿಡಲಾಯಿತು. ಐಸಿಸಿ ಮೆಗಾ ಟೂರ್ನಿಯಲ್ಲಿ ಯಶಸ್ವಿ ಭಾರತವನ್ನು ಪ್ರತಿನಿಧಿಸ ಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಈ ಕನಸು ನುಚ್ಚು ನೂರಾಗಿದೆ. ಆದರೆ ಅವರು ಕಾಯ್ದಿರಿಸಿದ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಯಶಸ್ವಿ ದೇಶೀಯ ಟೂರ್ನಿಯಲ್ಲಿ ತವರಿನ ತಂಡದ ಪರ ಆಡುವುದನ್ನು ಕಾಣಬಹುದಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿತ ತಂಡದಲ್ಲಿ ಮೀಸಲು ಆಟಗಾರರಿಗೆ ಅವಶ್ಯಕತೆ ಇದ್ದರೆ ಮಾತ್ರ ದುಬೈಗೆ ಕಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಈ ಬೆನ್ನಲ್ಲೆ ಯಶಸ್ವಿ ಜೈಸ್ವಾಲ್ ಮುಂಬೈ ಪರ ಫೆಬ್ರವರಿ 17 ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಆಡುವುದನ್ನು ನೋಡಬಹುದಾಗಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಮುಂಬೈ ತಂಡ ಹರಿಯಾಣ ತಂಡವನ್ನು 152 ರನ್ಗಳಿಂದ ಸೋಲಿಸಿ ಸೆಮಿಫೈನಲ್ನಲ್ಲಿ ಸ್ಥಾನ ಪಡೆದಿತ್ತು. ಇನ್ನು ಈ ಬಾರಿ ಮುಂಬೈ ಉಪಾಂತ್ಯ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ನಾಗ್ಪುರ್ ಮೈದಾನ ಸಾಕ್ಷಿಯಾಗಲಿದೆ.
ಈಗಾಗಲೇ ಯಶಸ್ವಿ ಜೈಸ್ವಾಲ್ ರಣಜಿ ಟ್ರೋಫಿಯಲ್ಲಿ ಈ ವರ್ಷ ಒಂದು ಪಂದ್ಯವನ್ನು ಆಡಿದ್ದಾರೆ. ಇವರು ಆಡಿದ ಒಂದು ಪಂದ್ಯದ ಎರಡೂ ಇನಿಂಗ್ಸ್ಗಳನ್ನು ಸೇರಿಸಿದರೆ, 30 ರನ್ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 2024ರಲ್ಲಿ ಟೆಸ್ಟ್ ಫಾರ್ಮೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪ್ಲೇಯರ್ ಈಗ ಮತ್ತೊಮ್ಮೆ ರಣಜಿ ಟೂರ್ನಿಯಲ್ಲಿ ಆಡುವುದುನ್ನು ನೋಡಬಹುದಾಗಿದೆ.

ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ರಣಜಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ಹಾಗೂ ಕೇರಳ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಫೆಬ್ರವರಿ 17 ರಿಂದ 21ರ ವರೆಗೆ ನಡೆಯಲಿದೆ. ಈ ಋತುವಿನ ಫೈನಲ್ ಪಂದ್ಯ ಫೆಬ್ರವರಿ 26 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ.