ನವದೆಹಲಿ: 2017ರ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೊಳ್ಳಲಿದೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನ ಈ ಟೂರ್ನಿಯನ್ನು ಆಯೋಜಿಸಲಿದೆ. ಈ ಟೂರ್ನಿಗೆ ಇನ್ನೂ 6 ತಿಂಗಳು ಬಾಕಿ ಇದ್ದರೂ ಅದರ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಪಾಕಿಸ್ತಾನ ಆಯೋಜನೆ ಮತ್ತು ತಂಡಗಳ ಬದಲಾವಣೆಗಳ ಬಗ್ಗೆ ಕ್ರಿಕೆಟ್ ಪಂಡಿತರು ಮಾತನಾಡುತ್ತಿದ್ದಾರೆ. ಇದೀಗ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಈ ಟೂರ್ನಿ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದ್ಭುತ ಆರಂಭವನ್ನು ಮಾಡಿದ್ದಾರೆ. ಅವರು ಟಿ20 ಮತ್ತು ಟೆಸ್ಟ್ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ಇನ್ನೂ ಏಕದಿನ ಕ್ಯಾಪ್ ಧರಿಸುವ ಭಾಗ್ಯ ದೊರೆತು ಬಂದಿಲ್ಲ.
ಮುಂಬರುವ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ವಿ ಓಪನರ್ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಆರಂಭಿಕನಾಗುವುದಿಲ್ಲ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕ್ರಿಕ್ಬಝ್ ಶೋನಲ್ಲಿ ಕಾರ್ತಿಕ್ಗೆ, "ರೋಹಿತ್ ಜೊತೆಯಲ್ಲಿ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುತ್ತಾರೋ ಇಲ್ಲವೋ? ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಡಿಕೆ, "ಹೌದು, ಜೈಸ್ವಾಲ್ಗೆ ಬ್ಯಾಕಪ್ ಓಪನರ್ ಆಗಲು ಉತ್ತಮ ಅವಕಾಶವಿದೆ. ಒಂದು ವೇಳೆ ಶುಭಮನ್ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡದಿದ್ದರೆ, ಜೈಸ್ವಾಲ್ಗೆ ಶೀಘ್ರದಲ್ಲೇ ಅವಕಾಶ ಸಿಗಲಿದೆ. ಭಾರತ ಕೂಡ ಬಲಿಷ್ಠ ಮಧ್ಯಮ ಕ್ರಮಾಂಕವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಆರಂಭದಿಂದಲೂ 47 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆಗೆ ಶುಭಮನ್ ಗಿಲ್ ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ, ಇತ್ತೀಚಿಗೆ ಅವರು ಫಾರ್ಮಾ ಸಮಸ್ಯೆ ಎದುರಿಸುತ್ತಿದ್ದಾರೆ.
ಅದರಲ್ಲೂ ಟೆಸ್ಟ್ ಮತ್ತು ಟಿ20ಯಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ ಬಳಿಕ ಗಿಲ್ ಹೆಚ್ಚು ಚರ್ಚೆಯಾಗುತ್ತಿದ್ದಾರೆ. ಅವರ ಇತ್ತೀಚಿನ ಫಾರ್ಮ್ ಉತ್ತಮವಾಗಿಲ್ಲ. ಫಾರ್ಮ್ ಕಂಡು ಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ.