ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ದೇಶೀಯ ಕ್ರಿಕೆಟ್ನಲ್ಲೂ ಸಹ ಯಶಸ್ಸನ್ನು ಸಾಧಿಸಲು ಅರ್ಜುನ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಐಪಿಎಲ್ ಮಧ್ಯೆ ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅಚ್ಚರಿ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಕ್ರೀಸ್ ಗೇಲ್ ತರಹ ಅರ್ಜುನ್ ತೆಂಡೂಲ್ಕರ್ ಆಗಲು ಸಲಹೆ ನೀಡಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದರು. ಆದರೆ ಐಪಿಎಲ್ 2025ರ ಹರಾಜಿನ ಮೊದಲು, ಅವರು ದೇಶೀಯ ಕ್ರಿಕೆಟ್ನಲ್ಲಿ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

ಐಪಿಎಲ್ 2025 ರ ಮೆಗಾ ಹರಾಜಿನ ಮೊದಲಾರ್ಧದಲ್ಲಿ ಅರ್ಜುನ್ ಮಾರಾಟವಾಗದೆ ಉಳಿದರು. ಆದರೆ ದ್ವಿತೀಯಾರ್ಧದಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 30 ಲಕ್ಷ ರೂ.ಗೆ ಸೇರಿಸಿಕೊಂಡಿತು. ಈ ಸೀಸನ್ನಲ್ಲಿ ಅವರಿಗೆ ಇನ್ನೂ ಆಡಲು ಅವಕಾಶ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜುನ್ ಅವರಿಗೆ ಯೋಗರಾಜ್ ಸಿಂಗ್ ಸಲಹೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಯೋಗರಾಜ್ ಸಿಂಗ್, "ಯುವರಾಜ್ ಮತ್ತು ಸಚಿನ್ ತುಂಬಾ ಆತ್ಮೀಯರು. ಯುವಿ ಸಚಿನ್ ಮಗನನ್ನು ಮೂರು ತಿಂಗಳು ತನ್ನ ತೆಕ್ಕೆಗೆ ತೆಗೆದುಕೊಂಡರೆ, ಮತ್ತೊಬ್ಬ ಕ್ರಿಸ್ ಗೇಲ್ ಹೊರಹೊಮ್ಮುತ್ತಾರೆ ಎಂದು ನಾನು ಬಾಜಿ ಕಟ್ಟಬಲ್ಲೆ. ಕೆಲವೊಮ್ಮೆ, ಒತ್ತಡದಿಂದಾಗಿ ಚೆನ್ನಾಗಿ ಬೌಲಿಂಗ್ ಮಾಡುತ್ತಿಲ್ಲ. ಹಾಗಾದರೆ, ನಮ್ಮ ಈ ಪ್ರೀತಿಯ ಪುಟ್ಟ ಸಚಿನ್ನನ್ನು ಯುವಿಗೆ ಒಪ್ಪಿಸಬೇಕು. ಯುವರಾಜ್ ಸಿಂಗ್ ಅವರಿಂದ ಅರ್ಜುನ್ ತೆಂಡೂಲ್ಕರ್ ತರಬೇತಿ ಪಡೆದರೆ, ನಾವು ಅವರಲ್ಲಿ ಕ್ರಿಸ್ ಗೇಲ್ ಅವರನ್ನು ನೋಡಲು ಪ್ರಾರಂಭಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಅರ್ಜುನ್ ತೆಂಡೂಲ್ಕರ್ ಜೂನಿಯರ್ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಅರ್ಜುನ್ 2020-21 ಸೀಸನ್ನಲ್ಲಿ ಮುಂಬೈ ಪರ ಹಿರಿಯ ಕ್ರಿಕೆಟ್ ಆಡಿದ್ದರು. ನಂತರ ಅವರು 2022-23 ಸೀಸನ್ಗೂ ಮುನ್ನ ಗೋವಾ ತಂಡಕ್ಕೆ ವಲಸೆ ಹೋದರು. ಅವರು ಗೋವಾ ಪರ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಾದಾರ್ಪಣೆ ಮಾಡಿದರು. ಅರ್ಜುನ್ ರೆಡ್ ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಆರಂಭವನ್ನು ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇಲ್ಲಿವರೆಗೆ ಅವರು 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ವಿಕೆಟ್ ಮತ್ತು 532 ರನ್ ಕಲೆ ಹಾಕಿದ್ದಾರೆ.