
ಹೊಸದಿಲ್ಲಿ, ಜುಲೈ 09: ಭಾರತ ವಿಶ್ವಕಪ್ ತಂಡದಲ್ಲಿ ಅವಕಾಶ ವಂಚಿತರಾದ ಬೇಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಅಂಬಾಟಿ ರಾಯುಡು, ನಿವೃತ್ತಿ ಹಿಂಪಡೆದು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಬೇಕು ಎಂದಿರುವ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಧೋನಿ ಅವರಂತಹ ಕೊಳಕು ವ್ಯಕ್ತಿ ತಂಡದಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದೆಲ್ಲಾ ಜರಿದಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಆಲ್ರೌಂಡರ್ ವಿಜಯ್ ಶಂಕರ್ ಗಾಯಗೊಂಡು ವಿಶ್ವಕಪ್ನಿಂದ ಹೊರಬಿದ್ದ ಬಳಿಕ ರಾಯುಡು ಬದಲಾಗಿ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.
ಇದಕ್ಕೂ ಮುನ್ನ ವಿಶ್ವಕಪ್ಗೆ ಪ್ರಕಟಿಸಲಾದ ಪ್ರಾಥಮಿಕ 15 ಆಟಗಾರರ ತಂಡದಿಂದಲೂ ರಾಯುಡು ಅವರನ್ನು ಕೈ ಬಿಡಲಾಗಿತ್ತು. ಆದರೆ, ವಿಶ್ವಕಪ್ಗೆ ಪ್ರಕಟಿಸಲಾದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ರಾಯುಡು ಮುಂಚೂಣಿಯಲ್ಲಿದ್ದರು. ಬಳಿಕ ಶಿಖರ್ ಧವನ್ ಗಾಯಗೊಂಡಾಗ ಅವರ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಸೂಚಿಸಲಾಯಿತು.
ಬಳಿಕ ತಂಡಕ್ಕೆ ವಿಜಯ್ ಶಂಕರ್ ಸ್ಥಾನದಲ್ಲಿ ಬ್ಯಾಟ್ಸ್ಮನ್ನ ಅಗತ್ಯವಿದ್ದಾಗ ರಾಯುಡು ಬದಲಾಗಿ ಮಯಾಂಕ್ ಅವರನ್ನು ನೀಡುವಂತೆ ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ (ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ) ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ರಾಯುಡು ಮತ್ತೊಮ್ಮೆ ಅವಕಾಶ ವಂಚಿತರಾದರು. ಇದರಿಂದ ಬೇಸರಗೊಂಡು ಹಠಾತ್ ನಿವೃತ್ತಿ ಪ್ರಕಟಿಸಿದರು. ಅಂದಹಾಗೆ 33 ವರ್ಷದ ಅನುಭವಿ ಬ್ಯಾಟ್ಸ್ಮನ್ ರಾಯುಡು, ಕಳೆದ ವರ್ಷ ಏಕದಿನ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ಪ್ರಥಮ ದರ್ಜೆ ಕ್ರಿಕೆಟ್ಗೂ ನಿವೃತ್ತಿ ಹೇಳಿದ್ದರು.
ರಾಯುಡು ನಿವೃತ್ತಿ ಬಳಿಕ ಐಸ್ಲ್ಯಾಂಡ್ ಕ್ರಿಕೆಟ್ ಟ್ವಿಟರ್ ಮೂಲಕ ರಾಯುಡು ಕಾಲೆಳೆದಿತ್ತು. ಅಷ್ಟೇ ಅಲ್ಲದೆ ತಮ್ಮ ದೇಶದ ಪೌರತ್ವ ನೀಡುವುದಾಗಿ ಆಹ್ವಾನಿಸಿ ತಮ್ಮ ತಂಡ ಸೇರಿಕೊಳ್ಳುವಂತೆ ಕೇಳಿಕೊಂಡಿತ್ತು.
"ರಾಯುಡು ಆಟವನ್ನು ಮುಂದುವರಿಸಬೇಕಿತ್ತು. ರಣಜಿ, ಇರಾನಿ, ದುಲೀಪ್ ಟ್ರೋಫಿ ಎಲ್ಲದರಲ್ಲೂ ಆಡಿ 100, 200, 300 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿಯಬೇಕಿತ್ತು. ಅವರಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಬಾಕಿ ಇದೆ," ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಕೂಡ ಆಗಿರುವ ಯೋಗರಾಜ್ ಸಿಂಗ್ ಹೇಳಿದ್ದಾರೆ.
"ನೀವು ಹತಾಶೆಯಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೀರಿ. ನಿವೃತ್ತಿಯಿಂದ ಹೊರಬಂದು ನಿಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿ," ಎಂದಿದ್ದಾರೆ.
ಇನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಯುವ ಪ್ರತಿಭೆಗಳಿಗೆ ಯಾವ ರೀತಿಯಲ್ಲಿ ಅವಕಾಶ ನೀಡಿ ಬೆಳೆಸಿದರೂ ಎಂಬುದರ ಕುರಿತಾಗಿಯೂ ಮಾತನಾಡಿದ ಯೋಗರಾಜ್, ಧೋನಿ ವಿಚಾರವಾಗಿ ಮಾತುಗಳನ್ನು ಆರಂಭಿಸಿ ಅವರಂತಹ ಕೊಳಕು ವ್ಯಕ್ತಿ ತಂಡದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿದ್ದಾರೆ.
"ಎಂ.ಎಸ್ ಧೋನಿ ಅವರಂತಹ ವ್ಯಕ್ತ ಹೆಚ್ಚು ಕಾಲ ಉಳಿಯುವುದಿಲ್ಲ. ಈ ರೀತಿಯ ಕೊಳಕು ವ್ಯಕ್ತಿತ್ವದವರು ಖಂಡಿತಾ ಉಳಿಯುವುದಿಲ್ಲ," ಎಂದು ಜರಿದಿದ್ದಾರೆ.