
ಭಾರತ ಅಂಡರ್ - 19 ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸೌರಾಷ್ಟ್ರ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾದ ಅವಿ ಬರೋಟ್ 29ನೇ ವಯಸ್ಸಿಗೆ ತಮ್ಮ ಜೀವನ ಪಯಣವನ್ನು ಮುಗಿಸಿದ್ದಾರೆ. ಇನ್ನೂ ಬಾಳಿ ಬದುಕಿ, ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನು ತುಳಿಯಬೇಕಾಗಿದ್ದ ಕ್ರಿಕೆಟಿಗ ಅವಿ ಬರೋಟ್ ಅಕ್ಟೋಬರ್ 15ರ ಶುಕ್ರವಾರದಂದು ಹೃದಯ ಸ್ತಂಭನದಿಂದ ಅಸುನೀಗಿದ್ದಾರೆ.
ಕಿರಿಯ ವಯಸ್ಸಿಗೇ ಹೃದಯ ಸ್ತಂಭನದಿಂದ ಕ್ರಿಕೆಟಿಗನೊಬ್ಬ ಸಾವಿಗೀಡಾಗಿರುವುದನ್ನು ಕಂಡ ಹಲವಾರು ಕ್ರಿಕೆಟ್ ಅಭಿಮಾನಿಗಳು, ಜನಸಾಮಾನ್ಯರು ಮತ್ತು ಮಾಜಿ ಕ್ರಿಕೆಟಿಗರು ಆಶ್ಚರ್ಯಕ್ಕೊಳಗಾಗಿದ್ದು ಸಂತಾಪ ಸೂಚಿಸಿದ್ದಾರೆ. ಅಕ್ಟೋಬರ್ 15ರ ಶುಕ್ರವಾರದಂದು ಮನೆಯಲ್ಲಿಯೇ ಇದ್ದ ಅವಿ ಬರೋಟ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗೆ ಅಸ್ವಸ್ಥರಾದ ಅವಿ ಬರೋಟ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸನಿಹದ ಆಸ್ಪತ್ರೆಗೆ ಸಾಗಿಸುವ ಯತ್ನವನ್ನು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಅವಿ ಬರೋಟ್ ತಮ್ಮ ಕೊನೆ ಉಸಿರು ಎಳೆದಿದ್ದಾರೆ.
ಅವಿ ಬರೋಟ್ ಚಿಕ್ಕವಯಸ್ಸಿನಿಂದಲೂ ಓರ್ವ ಪ್ರತಿಭಾವಂತ ಕ್ರಿಕೆಟಿಗನಾಗಿದ್ದರು. ಹೀಗಾಗಿಯೇ ಭಾರತ ಅಂಡರ್ - 19 ತಂಡದ ನಾಯಕತ್ವವನ್ನು ಪಡೆದುಕೊಂಡಿದ್ದರು. ನಂತರ ಹರ್ಯಾಣ ಪರ ರಣಜಿ ಟೂರ್ನಿಗಳಲ್ಲಿ ಆಡುತ್ತಿದ್ದ ಅವಿ ಬರೋಟ್ ಅವರ ಪ್ರತಿಭೆಯನ್ನು ಗುರುತಿಸಿದ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷ ಜಯದೇವ್ ಶಾ ಆತನನ್ನು ಸೌರಾಷ್ಟ್ರ ಕ್ರಿಕೆಟ್ ತಂಡಕ್ಕೆ ಕರೆತಂದರು. ಇನ್ನು ಅವಿ ಬರೋಟ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಜಯದೇವ್ ಶಾ 'ಆತ ಓರ್ವ ಪ್ರತಿಭಾವಂತ ಕ್ರಿಕೆಟಿಗ, ಆತನನ್ನು ನಾನೇ ಹರಿಯಾಣ ತಂಡದಿಂದ ಸೌರಾಷ್ಟ್ರ ತಂಡಕ್ಕೆ ಕರೆತಂದಿದ್ದೆ. ಶುಕ್ರವಾರದಂದು ಮನೆಯಲ್ಲಿದ್ದ ಆತ ಅಸ್ವಸ್ಥವಾದಾಗ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಅವಿ ಬರೋಟ್ ಅವರ ತಂದೆ ಕೂಡ 42 ವರ್ಷದವರಾಗಿದ್ದಾಗಲೇ ಸಾವನ್ನಪ್ಪಿದ್ದರು. ತನ್ನ ತಾಯಿ ಮತ್ತು ಪತ್ನಿಗೆ ಅವಿ ಬರೋಟ್ ಆಧಾರ ಸ್ತಂಭವಾಗಿದ್ದರು. ಇದೀಗ ಅವಿ ಬರೋಟ್ ಅವರನ್ನು ಕಳೆದುಕೊಂಡಿರುವ ಆತನ ತಾಯಿ ಮತ್ತು ಪತ್ನಿಗೆ ಸುಧಾರಿಸಿಕೊಳ್ಳಲು ತುಂಬಾ ದಿನಗಳೇ ಬೇಕಾಗಬಹುದು ಮತ್ತು ಆ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ. ಅವಿ ಬರೋಟ್ ಅವರ ಪತ್ನಿ 4 ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಈ ಅನಿರೀಕ್ಷಿತ ಘಟನೆಯನ್ನು ಸ್ವೀಕರಿಸಲು ತುಂಬಾ ದೊಡ್ಡ ಸಮಯದ ಅಗತ್ಯವಿದೆ' ಎಂದು ಜಯದೇವ್ ಶಾ ಹೇಳಿಕೆ ನೀಡಿದ್ದಾರೆ.
ಇನ್ನು ಅವಿ ಬರೋಟ್ ಅಕಾಲಿಕ ಮರಣದ ಕುರಿತು ಸೌರಾಷ್ಟ್ರ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಅಷ್ಟೇ ಅಲ್ಲದೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಇನ್ನೂ ಮುಂತಾದ ಹಲವಾರು ಮಾಜಿ ಕ್ರಿಕೆಟಿಗರು ಅವಿ ಬರೋಟ್ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.