ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ನಂತರ ಬಾಬರ್ ಅಜಮ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ಪಾಕಿಸ್ತಾನದ ಕ್ರಿಕೆಟ್ನಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಬಾಬರ್ ಅಜಮ್ ಕೆಳಗಿಳಿಸಿದ ನಂತರ ವೇಗದ ಬೌಲರ್ ಶಾಹೀನ್ ಅಫ್ರಿದಿ ಮತ್ತು ಶಾನ್ ಮಸೂದ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು.
ಇದಾದ ಬಳಿಕ ಶಾಹೀನ್ ಅವರನ್ನು ತೆಗೆದು ಹಾಕಿ ಬಾಬರ್ಗೆ ಮತ್ತೆ ನಾಯಕನ ಜವಾಬ್ದಾರಿ ನೀಡಲಾಯಿತು. ಇದೀಗ ಮತ್ತೊಮ್ಮೆ ಬಾಬರ್ ಅಜಮ್ ಮತ್ತು ಶಾನ್ ಮಸೂದ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪಾಕಿಸ್ತಾನ ತಂಡವು ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿದೆ. ಈ ಸರಣಿಯಲ್ಲಿ ಮಾಜಿ ನಾಯಕ ಬಾಬರ್ ಅಜಮ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡದರು. ತಂಡದ ಪರ ಹೆಚ್ಚು ರನ್ ಗಳಿಸ ಬೇಕಿದ್ದ ಅವರು ವಿಕೆಟ್ ಕಳೆದುಕೊಂಡು ಹೊರ ನಡೆದಿದ್ದರು. ಇದಾದ ನಂತರ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ.
ಈಗ ಪಾಕಿಸ್ತಾನ ಮಾಜಿ ಆಟಗಾರ ಯೂನಿಸ್ ಖಾನ್ ಅವರು ಬಾಬರ್ ಅಜಮ್ಗೆ ಸಲಹೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾಯಕತ್ವದ ಆಕರ್ಷಣೆಯನ್ನು ಬಿಟ್ಟು ದೇಶಕ್ಕಾಗಿ ಆಡುವಂತೆ ಬಾಬರ್ ಅಜಮ್ಗೆ ಹೇಳಿದ್ದಾರೆ.
'ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಏಕೆ ಬಾಬರ್ ಅಜಮ್ ಅವರನ್ನು ನಾಯಕನನ್ನಾಗಿ ಮಾಡಿದೆ ಎಂದರೆ ಅವರು ತಂಡದ ಅತ್ಯುತ್ತಮ ಆಟಗಾರ. ಹೀಗಾಗಿ ಅವರನ್ನು ನಾಯಕನ್ನಾಗಿ ಮಾಡಲಾಗಿದೆ. ಈ ನಿರ್ಧಾರ ಕೈಗೊಳ್ಳುವಾಗ ನಾನು ಅಲ್ಲಿಯೇ ಇದ್ದೆ. ಅವರು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಆದರೆ ಬಾಬರ್ ಅವರು ಭವಿಷ್ಯದಲ್ಲಿ ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ನಾಯಕತ್ವ ಬಹಳ ಸಣ್ಣ ವಿಷಯ. ತಂಡಕ್ಕಾಗಿ ಆಡುವುದು ಮತ್ತು ಉತ್ತಮ ಪ್ರದರ್ಶನವನ್ನು ಮುಂದುವರಿಸುವುದು ಮುಖ್ಯ. ಮತ್ತೆ ಪಾಕಿಸ್ತಾನದ ಪರ ಆಡುವ ಅವಕಾಶ ಸಿಗುವುದಿಲ್ಲ. ನೀವು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಬೇಕು. ವಾಕ್ಚಾತುರ್ಯಕ್ಕಿಂತ ನಿಮ್ಮ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಗಮನಹರಿಸಬೇಕು. ಒಬ್ಬರು ಫಿಟ್ನೆಸ್ಗೆ ಒತ್ತು ನೀಡಬೇಕು' ಎಂದು ಬಾಬರ್ ಅಜಮ್ಗೆ ಯೂನಿಸ್ ಖಾನ್ ತಿಳಿಸಿದ್ದಾರೆ.
'ವಿರಾಟ್ ಕೊಹ್ಲಿಯನ್ನು ನೋಡಿ. ಅವರು ತಮ್ಮದೇ ಆದ ನಿಯಮಗಳ ಮೇಲೆ ನಾಯಕತ್ವವನ್ನು ತೊರೆದರು. ಈಗ ಅವರು ತಮ್ಮ ತಂಡದ ಪರ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ನಿರಂತರವಾಗಿ ದಾಖಲೆಗಳನ್ನು ಮುರಿಯುತ್ತಿದ್ದಾರೆ. ದೇಶಕ್ಕಾಗಿ ಆಡುವುದು ಆದ್ಯತೆಯಾಗಿರಬೇಕು ಎಂಬುದನ್ನು ಇದು ತೋರಿಸುತ್ತದೆ. ನಾಯಕತ್ವವು ಸಣ್ಣ ವಿಷಯ. ಆದರೆ ನಿಮ್ಮ ದೇಶಕ್ಕಾಗಿ ಪಂದ್ಯಗಳನ್ನು ಗೆಲ್ಲಿಸುವುದು ದೊಡ್ಡ ವಿಷಯ. ಹೀಗಾಗಿ ಇಂತಹ ವಿಷಯಗಳನ್ನು ಬಾಬರ್ ಅಜಮ್ ನೋಡಿ ಕಲಿಯಬೇಕು ಎಂದು ಯೂನಿಸ್ ಖಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.