
ಪಂಜಾಬ್, ಏಪ್ರಿಲ್ 4: ಕೊರೊನಾವೈರಸ್ ಸೋಂಕಿಗೆ ಇಡೀ ಜಗತ್ತೇ ತತ್ತರಿಸಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ, ಮೃತರ ಸಂಖ್ಯೆ ದಿನೇ ದಿನೇ ಏರುತ್ತಾ ಹೋಗುತ್ತಿದೆ. ಕರೊನಾವೈರಸ್ ಹತ್ತಿಕ್ಕುವುದಕ್ಕಾಗಿ ಭಾರತದಾದ್ಯಂತ ಸದ್ಯ 21 ದಿನಗಳ ನಿಷೇಧ ವಿಧಿಸಲಾಗಿದೆ. ನಿಷೇಧದ ಈ ಹೊತ್ತು ಬಡವರ, ದುರ್ಬಲ ಪಾಡು ಇನ್ನೂ ತೊಂದರೆಗೀಡಾಗಿದೆ.
ಲಾಕ್ಡೌನ್ ಜಾರಿಯಲ್ಲಿರುವಾಗ ಸಂಕಷ್ಟಕ್ಕೀಡಾಗಿರುವ ಬಡವರಿಗೆ ನೆರವಾಗುತ್ತಿರುವ ಪೊಲೀಸರ ನಡೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಬೀದಿ ಬದಿಯ ಬಡಪಾಯಿಗೆ ಪೊಲೀಸರು ಆಹಾರ ನೀಡುತ್ತಿರುವ ವೀಡಿಯೋವನ್ನು ಟ್ವಿಟರ್ನಲ್ಲಿ ಹಾಕಿಕೊಂಡಿರುವ ಯುವಿ, ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.
'ಈ ಪೊಲೀಸರ ಮಾನವೀಯ ನಡೆ ನೋಡುವಾಗ ಹೃದಯ ಕರಗುತ್ತದೆ. ಇಂಥ ಕಷ್ಟದ ಸಂದರ್ಭದಲ್ಲಿ ತಮ್ಮ ಊಟವನ್ನೇ ಬಡವರೊಂದಿಗೆ ಹಂಚಿಕೊಳ್ಳುತ್ತಿರುವ ಈ ಪೊಲೀಸರ ಕೆಲಸವನ್ನು ಎಲ್ಲರೂ ಗೌರವಿಸಬೇಕಾದ್ದು,' ಎಂದು ಶೇರ್ ಮಾಡಿಕೊಂಡಿರುವ ವೀಡಿಯೋ ಜೊತೆ ಸಿಂಗ್ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಶುಕ್ರವಾರ (ಏಪ್ರಿಲ್ 4) ಕೊರೊನಾ ಸೋಂಕಿತರ ಸಂಖ್ಯೆ 2547ಕ್ಕೆ ಏರಿತ್ತು. ಇದರಲ್ಲಿ 163 ಮಂದಿ ಗುಣಮುಖರಾಗಿದ್ದರೆ, 62 ಮಂದಿ ಸಾವನ್ನಪ್ಪಿದ್ದರು. ವಿಶ್ವದಲ್ಲಿ ಒಟ್ಟಿಗೆ 52172 ಮಂದಿ ಮಾರಕ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ.