ಯುವರಾಜ್ ಸಿಂಗ್ ಕಡೆಗಣನೆ, ಯಾವ ತಂಡಕ್ಕೂ ಆಯ್ಕೆ ಇಲ್ಲ
ಬೆಂಗಳೂರು, ಸೆಪ್ಟೆಂಬರ್ 08: ದುಲೀಪ್ ಟ್ರೋಫಿಯಲ್ಲಿ ದೇಶದ ಟಾಪ್ ಆಟಗಾರರೆಲ್ಲರೂ ತೊಡಗಿಕೊಂಡಿರುವಾಗ ಹಿರಿಯ ಆಟಗಾರ ಯುವರಾಜ್ ಸಿಂಗ್ ಮಾತ್ರ ಅವಕಾಶ ವಂಚಿತರಾಗಿ ಮನೆಯಲ್ಲಿ ಕೂರುವಂತಾಗಿದೆ. ದುಲೀಪ್ ಟ್ರೋಫಿಯ ಮೂರು ತಂಡಗಳ ಪೈಕಿ ಒಂದು ತಂಡಕ್ಕೂ ಯುವರಾಜ್ ರನ್ನು ಆಯ್ಕೆ ಮಾಡದೆ ಬಿಸಿಸಿಐ ಆಯ್ಕೆದಾರರು ಕಡೆಗಣಿಸಿದ್ದಾರೆ.
ಸೆಪ್ಟೆಂಬರ್ 07 ರಿಂದ 29ರ ವರೆಗೆ ಕಾನ್ಪುರ ಹಾಗೂ ಲಕ್ನೋದಲ್ಲಿ ಪಂದ್ಯಗಳು ನಡೆಯಲಿವೆ. ಇದಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಅಧ್ಯಕ್ಷರ ಮಂಡಳಿ ಎಲೆವನ್ ತಂಡಕ್ಕೂ ಯುವರಾಜ್ ರನ್ನು ಪರಿಗಣಿಸಿಲ್ಲ.

ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿದ್ದ ಯುವರಾಜ್ ಸಿಂಗ್ ಅವರು 'ಯೋ ಯೋ 'ಟೆಸ್ಟ್ ನಲ್ಲಿ ಪಾಸಾಗದ ಕಾರಣ ತಂಡದಿಂದ ಹೊರಗುಳಿಯಬೇಕಾಯಿತು.
ಇದೇ ಟೆಸ್ಟ್ ನಲ್ಲಿ ಫೇಲ್ ಆಗಿದ್ದ ಸುರೇಶ್ ರೈನಾ ಅವರನ್ನು ಇಂಡಿಯಾ ಬ್ಲೂ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. ಪಾರ್ಥಿವ್ ಪಟೇಲ್ ಇಂಡಿಯಾ ಗ್ರೀನ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಇಂಡಿಯಾ ರೆಡ್ ತಂಡದ ಸಾರಥ್ಯವನ್ನು ಅಭಿನವ್ ಮುಕುಂದ್ ವಹಿಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಶ್ರೀಲಂಕಾ ವಿರುದ್ಧ ಆಡಿದ ತಂಡವನ್ನೇ ಮುಂದುವರೆಸುವ ಸಾಧ್ಯತೆಯಿದೆ. 37 ವರ್ಷ ವಯಸ್ಸಿನ ಯುವರಾಜ್ ಸಿಂಗ್ ಅವರಿಗೆ ಈ ವರ್ಷ ನಡೆಯಲಿರುವ 23ಕ್ಕೂ ಅಧಿಕ ಪಂದ್ಯಗಳ ಪೈಕಿ ಆಡುವ ಅವಕಾಶ ಸಿಗುವುದು ಅನುಮಾನ ಎನಿಸಿದೆ.
ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಮೊದಲ ಆಯ್ಕೆಯಂತೂ ಯುವ ಆಟಗಾರರ ಮೇಲಿರುತ್ತದೆ. ಜತೆಗೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಯುವರಾಜ್, ಸುರೇಶ್ ರೈನಾ ಅವರಿಗೆ ಟೀಂ ಇಂಡಿಯಾಕ್ಕೆ ಮರಳುವುದು ಸ್ವಲ್ಪ ಕಷ್ಟವಾಗಲಿದೆ.
ಮನೀಶ್ ಪಾಂಡೆ, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವುದು ಪೈಪೋಟಿಯನ್ನು ಹೆಚ್ಚಿಸಿದೆ.
304ಏಕದಿನ ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ ಅವರು 305ನೇ ಪಂದ್ಯ ಆಡುವರೇ ಅಥವಾ ವೃತ್ತಿ ಬದುಕಿಗೆ ಅಂತ್ಯ ಹೇಳುವ ಸಮಯ ಬಂದಿದೆಯೇ ಕಾದು ನೋಡೋಣ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications