
ತಂಡದ ಅನುಭವಿ ಆಟಗಾರರು ಮತ್ತು ಗ್ಯಾರಿ ಕ್ರಿಸ್ಟನ್ ನಡುವೆ ಚರ್ಚೆ ನಡೆದಿತ್ತು
2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತಮ್ಮ ಬದಲು ಎಂಎಸ್ ಧೋನಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು ಮ್ಯಾನೇಜ್ಮೆಂಟ್ನ ತೀರ್ಮಾನವಾಗಿತ್ತು ಎಂದು ಯುವರಾಜ್ ಸಿಂಗ್ ನ್ಯೂಸ್ 18 ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಜತೆಯಾಟ ನಡೆಯುತ್ತಿದ್ದಾಗಲೇ ಡ್ರೆಸಿಂಗ್ ರೂಮ್ನಲ್ಲಿ ಈ ಕುರಿತಾಗಿ ತಂಡದ ಆಟಗಾರರಾದ ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ಕೋಚ್ ಗ್ಯಾರಿ ಕ್ರಿಸ್ಟನ್ ನಡುವೆ ಚರ್ಚೆ ನಡೆದಿತ್ತು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

ಯುವಿ ಬದಲು ಧೋನಿ ಬೇಗನೇ ಕಣಕ್ಕಿಳಿಯಲು ಕಾರಣವಿದು
ಇನ್ನು ಮುಂದುವರೆದು ಮಾತನಾಡಿರುವ ಯುವರಾಜ್ ಸಿಂಗ್ ಶ್ರೀಲಂಕಾ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್ಗಳು ಇದ್ದ ಕಾರಣ ಪಂದ್ಯದ ಮಧ್ಯಮ ಓವರ್ಗಳಲ್ಲಿ ಓರ್ವ ಎಡಗೈ ಬ್ಯಾಟ್ಸ್ಮನ್ ಹಾಗೂ ಓರ್ವ ಬಲಗೈ ಬ್ಯಾಟ್ಸ್ಮನ್ಗಳ ಜೋಡಿ ಆಟವಾಡಬೇಕಾದ ಅಗತ್ಯವಿತ್ತು ಎಂದಿದ್ದಾರೆ. ಹೀಗಾಗಿ ಕಣದಲ್ಲಿದ್ದ ಆಟಗಾರರ ಪೈಕಿ ಗೌತಮ್ ಗಂಭೀರ್ ಔಟ್ ಆದರೆ ಯುವರಾಜ್ ಸಿಂಗ್ ಕಣಕ್ಕಿಳಿಯಬೇಕು ಅಥವಾ ವಿರಾಟ್ ಕೊಹ್ಲಿ ಔಟ್ ಆದರೆ ಎಂಎಸ್ ಧೋನಿ ಕಣಕ್ಕಿಳಿಯಬೇಕು ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಈ ಕಾರಣದಿಂದ ವಿರಾಟ್ ಕೊಹ್ಲಿ ಔಟ್ ಆದ ನಂತರ ತನಗೂ ಮೊದಲೇ ಎಂಎಸ್ ಧೋನಿ ಕಣಕ್ಕಿಳಿದರು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಬ್ಬರಿಸಿದ್ದ ಯುವಿ
ಇನ್ನು ಈ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಸಹ ಯುವರಾಜ್ ಸಿಂಗ್ ಅಬ್ಬರದ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮಿಂಚಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಿದ್ದ ಯುವರಾಜ್ ಸಿಂಗ್ ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಸಹಿತ 362 ರನ್ ಕಲೆಹಾಕಿದ್ದರು ಹಾಗೂ 15 ವಿಕೆಟ್ಗಳನ್ನು ಉರುಳಿಸಿದ್ದರು.


Click it and Unblock the Notifications












