
ಟಿ20 ವಿಶ್ವಕಪ್ ಬಳಿಕ ಇದೀಗ ಎಲ್ಲರ ಚಿತ್ತ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನ ಮೇಲೆ ನೆಟ್ಟಿದೆ. ಈ ಪ್ರತಿಷ್ಠಿತ ಟೂರ್ನಿಗೆ ಟೀಮ್ ಇಂಡಿಯಾ ಸಿದ್ದತೆಯನ್ನು ಆರಂಭಿಸಿದ್ದು ಯಾವ ಕ್ರಮಾಂಕಕ್ಕೆ ಯಾವ ಆಟಗಾರ ಸೂಕ್ತ ಎಂಬ ತಯಾರಿಯಲ್ಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಭಾರತದ ಯುವ ಆಟಗಾರ ಸೂಕ್ತ ಎಂದಿದ್ದಾರೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಯುವ ಆಟಗಾರ ಶುಬ್ಮನ್ ಗಿಲ್ ಭಾರತದ ಆರಂಭಿಕ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎಂದಿದ್ದು ಯುವ ಆಟಗಾರನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಅಂತ್ಯವಾಗಿರುವ ನ್ಯೂಜಿಲೆಮಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಶುಬ್ಮನ್ ಗಿಲ್ ಬಾಂಗ್ಲಾ ಪ್ರವಾಸಕ್ಕೆ ಆಯ್ಕೆಯಾಗದೆ ನಿರಾಸೆ ಅನುಭವಿಸಿದ್ದಾರೆ.
ಶುಬ್ಮನ್ ಗಿಲ್ 2022ರಲ್ಲಿ ಏಕದಿನ ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. 12 ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡ ಶುಬ್ಮನ್ ಗಿಲ್ 70.88ರ ಅದ್ಭುತ ಸರಾಸರಿಯಲ್ಲಿ 638 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ODIನಲ್ಲಿ ಗಿಲ್ ಅರ್ಧಶತಕ ಮತ್ತು ಎರಡನೇ ಪಂದ್ಯದಲ್ಲಿ ಔಟಾಗದೆ 45 ರನ್ ಗಳಿಸಿದರು. ಅಲ್ಲದೆ ಶಿಖರ್ ಧವನ್ ಅವರೊಂದಿಗೆ ಆರಂಭಿಕರಾಗಿ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.
"ನನ್ನ ಪ್ರಕಾರ ಶುಬ್ಮನ್ ಗಿಲ್ ಅತ್ಯುತ್ತಮವಾಗಿ ಆಡುತ್ತಿದ್ದು ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ನಲ್ಲಿ ಆರಂಬಿಕ ಸ್ಥಾನಕ್ಕೆ ಆತ ಕೂಡ ಬಲಿಷ್ಠವಾದ ಸ್ಪರ್ಧಿ ಎಂದು ನಾನು ಅಭಿಪ್ರಾಯಪಡುತ್ತೇನೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್.
2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡ ಯುವರಾಜ್ ಸಿಂಗ್ ಪ್ರಸ್ತುತ ಶುಬ್ಮನ್ ಗಿಲ್ ಸೇರಿದಂತೆ ತ್ಮ ರಾಜ್ಯದ ಕೆಲ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿದ್ದಾರೆ. 2020ರ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಶುಬ್ಮನ್ ಗಿಲ್ ಆಲ್ರೌಂಡರ್ ಅಭಿಶೇಷ ಶರ್ಮಾ ಅವರೊಂದಿಗೆ ಯುವರಾಜ್ ಅವರೊಂದಿಗೆ ಉಳಿದುಕೊಂಡಿದ್ದು ತರಬೇತಿಯನ್ನು ಪಡೆದುಕೊಂಡಿದ್ದರು.
"ಶುಬ್ಮನ್ ತುಂಬಾ ಶ್ರಮಜೀವಿ ಮತ್ತು ಅಗತ್ಯವಿರುವ ಎಲ್ಲಾ ಪೂರಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ಮುಂದಿನ 10 ವರ್ಷಗಳಲ್ಲಿ ಶ್ರೇಷ್ಠ ಆಟಗಾರ ಎನಿಸಿಕೊಳ್ಳಬಲ್ಲ ಕ್ರಿಕೆಟಿಗ" ಎಂದು ಯುವರಾಜ್ ಹೇಳಿದರು. ಇನ್ನು ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ಹಾಗೂ ಬಳಿಕ ರಾಷ್ಟ್ರೀಯ ಆಯ್ಕೆಗಾರರನ್ನು ಬಿಸಿಸಿಐ ವಜಾಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.