ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಇರುವುದು ಬೆರಳೆಣಿಕೆಯ ದಿನಗಳು ಮಾತ್ರ. ಟೀಮ್ ಇಂಡಿಯಾ ಈಗಾಗಲೇ ತನ್ನ ತಂಡವನ್ನು ಕೂಡ ಅಂತಿಮಗೊಳಿಸಿದೆ. ಕೊನೆಯ ಹಂತದಲ್ಲಿ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದು ಅಕ್ಷರ್ ಪಟೇಲ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತ ಟೂರ್ನಿಗೆ ಸರ್ವ ಸನ್ನಧವಾಗಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ತಂಡದಲ್ಲಿ ಓರ್ವ ಆಟಗಾರನನ್ನು ಕಡೆಗಣಿಸಿರುವುದನ್ನು ಯುವರಾಜ್ ಸಿಂಗ್ ಉಲ್ಲೇಖಿಸಿದ್ದಾರೆ. ಆತನನ್ನು ತಂಡದಿಂದ ಹೊರಗಿಟ್ಟಿರುವುದು ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಹಿನ್ನಡೆಗೂ ಕಾರಣವಾಗಬಹುದು ಎಂದು ಯುವಿ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಯುವರಾಜ್ ಸಿಂಗ್ ಹೇಳಿದ ಆ ಕ್ರಿಕೆಟಿಗ ಯಾರು? ಮುಂದೆ ಓದಿ..

ಯುವರಾಜ್ ಸಿಂಗ್ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಅನುಭವಿ ಸ್ಪಿನ್ನರ್ ಚಾಹಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ತಂಡಕ್ಕೆ ಅಪಾಯವಾಗಲೂ ಬಹುದು ಎಂದು ಯುವಿ ಎಚ್ಚರಿಕೆ ನೀಡಿದ್ದು ಈ ನಿರ್ಧಾರವೇ ತಪ್ಪೆನಿಸಿಕೊಳ್ಳಬಹುದು, ಇದು ತಲೆಕೆಡಿಸಿಕೊಳ್ಳುವಂತೆ ಮಾಡಬಹುದು ಎಂದಿದ್ದಾರೆ.
"ಯುಜುವೇಂದ್ರ ಚಾಹಲ್ ಅವರನ್ನು ಕೈಬಿಟ್ಟಿರುವುದು ತಪ್ಪೆನಿಸಿಕೊಳ್ಳಬಹುದು ಅಲ್ಲದೆ ಅಪಾಯವೂ ಆಗಬಹುದು. ಆತನನ್ನು ಕನಿಷ್ಠ ತಂಡದಲ್ಲಿಯಾದರೂ ಉಳಿಸಿಕೊಳ್ಳಬಹುದಾಗಿತ್ತು. ಚಾಹಲ್ ಅವರಂಥಾ ಲೆಗ್ ಸ್ಪಿನ್ನರ್ ಯಾವಾಗಲೂ ನಿಮಗಾಗಿ ವಿಕೆಟ್ಗಳನ್ನು ಕಬಳಿಸುವ ವ್ಯಕ್ತಿ. ಕುಲದೀಪ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ನಿಜ. ಆದರೆ ಚಾಹಲ್ ಟರ್ನಿಂಗ್ ಟ್ರ್ಯಾಕ್ಗಳಲ್ಲಿ ಮತ್ತು ನಿಧಾನಗತಿಯ ವಿಕೆಟ್ಗಳಲ್ಲಿ ಅಪಾಯಕಾರಿಯಾಗಬಹುದಿತ್ತು. ಹಾರ್ದಿಕ್ ನಿಮಗೆ ಮೂರನೇ ಸೀಮರ್ನ ಬ್ಯಾಲೆನ್ಸ್ ನೀಡಿದರೆ, ನೀವು ಯುಜ್ವೇಂದ್ರ ಚಹಾಲ್ ಅವರನ್ನು ಆಯ್ಕೆ ಮಾಡಬಹುದಿತ್ತು" ಎಂದಿದ್ದಾರೆ ಯುವರಾಜ್ ಸಿಂಗ್.
ವೇಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದು ಒಳ್ಳೆಯ ಸಂಕೇತ ಎಂದು ಅವರು ಹೇಳಿದ್ದು ವಿಶ್ವಕಪ್ಗೆ ಭಾರತ ಉತ್ತಮ ಫಾರ್ಮ್ನಲ್ಲಿದೆ ಎಂದು ಒತ್ತಾಯಿಸಿದ್ದಾರೆ. ದೀರ್ಘಕಾಲದ ಬೆನ್ನುನೋವಿನ ನಂತರ ಬೂಮ್ರಾ ಏಷ್ಯಾಕಪ್ಗೆ ಮುನ್ನ ನಡೆದ ಐರ್ಲೆಂಡ್ ಪ್ರವಾಸದ ವೇಳೆ ತಂಡಕ್ಕೆ ಮರಳಿದ್ದರು. ಗಾಯದ ಕಾರಣದಿಂದಾಗಿ ಅವರು ಸುಮಾರು 11 ತಿಂಗಳುಗಳಿಗಿಂತ ಹೆಚ್ಚು ಕಾಲ ತಂಡದಿಂದ ಹೊರಬಿದ್ದಿದ್ದರು.
ಮೂರು ಪಂದ್ಯಗಳ ODI ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದ ನಂತರ, ಭಾರತವು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅದಾದ ಬಳಿಕ ರೋಹಿತ್ ಶರ್ಮಾ ಪಡೆ ಅಂತಿಮ ಅಭ್ಯಾಸ ಪಂದ್ಯದಲ್ಲಿ ನೆದರ್ಲೆಂಡ್ಸ್ ಅನ್ನು ಎದುರಿಸಲಿದ್ದು, ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ತಮ್ಮ ವಿಶ್ವಕಪ್ 2023ರ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.