ಭಾರತ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ವಿಚ್ಛೇದನ ವಂದತಿಗಳು ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿವೆ. ಇದರ ನಡುವೆ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುಜ್ವೇಂದ್ರ ಚಹಾಲ್ ವೃತ್ತಿಜೀವನದ ಮೇಲೂ ಹಲವು ಪ್ರಶ್ನೆಗಳು ಎದ್ದಿವೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಚಹಾಲ್ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಯುಜ್ವೇಂದ್ರ ಚಹಾಲ್ ಟಿ20 ವಿಶ್ವಕಪ್ 2024ರ ವೇಳೆ ಭಾರತ ತಂಡದ ಆಟಗಾರರಾಗಿದ್ದರು. ಆದರೆ ಅಂದಿನಿಂದ ಅವರು ಟೀಮ್ ಇಂಡಿಯಾ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ. ಅವರನ್ನು ಸತತವಾಗಿ ಭಾರತ ಟಿ20 ಅಥವಾ ಏಕದಿನ ತಂಡಗಳಲ್ಲಿ ಆಯ್ಕೆ ಮಾಡದ ಕಡಗಣನೆ ಮಾಡಲಾಗುತ್ತಿದೆ.ಇದೀಗ ಅವರು ನಿರಂತರವಾಗಿ ಆಯ್ಕೆಯಾಗದಿರುವ ಬಗ್ಗೆ ಚರ್ಚೆ ಆರಂಭವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗಾಗಿ ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಇದೀಗ ಚಹಾಲ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಟೀಮ್ ಮ್ಯಾನೇಜ್ಮೆಂಟ್ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಚಹಾಲ್ ವೃತ್ತಿಜೀವನವನ್ನು ಕೊನೆಗೊಳಿಸಿದೆ ಎಂದು ಆಕಾಶ್ ಚೋಪ್ರಾ ಆರೋಪ ಮಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಯುಜ್ವೇಂದ್ರ ಚಹಾಲ್ ಅವರ ಪ್ರದರ್ಶನವು ಕಳಪೆಯಾಗದಿದ್ದರೂ ಸಹ, ದೀರ್ಘಕಾಲದವರೆಗೆ ಭಾರತ ಏಕದಿನ ತಂಡದಿಂದ ಹೊರಗುಳಿದಿರುವುದನ್ನು ಚರ್ಚೆ ಮಾಡಿದ್ದಾರೆ. ಚಹಾಲ್ ಸಂಪೂರ್ಣವಾಗಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಅವರ ಫೈಲ್ ಅನ್ನು ಕ್ಲೋಸ್ ಮಾಡಲಾಗಿದೆ. ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ಇದನ್ನು ಏಕೆ ಮಾಡಿದರು ಎಂದು ನನಗೆ ತಿಳಿದಿಲ್ಲ. ಇದೊಂದು ಕುತೂಹಲಕಾರಿ ಪ್ರಕರಣ. ಅವರು ಕೊನೆಯ ಬಾರಿಗೆ ಜನವರಿ 2023 ರಲ್ಲಿ ಆಡಿದರು. ಹಾಗಾಗಿ ಅವನಿಗೆ ಎರಡು ವರ್ಷಗಳು ಕಳೆದಿವೆ. ಅವರ ಪ್ರದರ್ಶನ ತುಂಬಾ ಚೆನ್ನಾಗಿದೆ. ಅವರು ಸಾಕಷ್ಟು ವಿಕೆಟ್ಗಳನ್ನು ಕಬಳಿಸಿ ಸ್ಥಿರ ಪ್ರದರ್ಶನ ನೀಡುತ್ತಿದ್ದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಯುಜ್ವೇಂದ್ರ ಚಹಾಲ್ ಭಾರತದ ಪರ ಆಡಿರುವ ಕೇವಲ 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಆಗಸ್ಟ್ 2023 ರಿಂದ ಯಾವುದೇ ಸ್ವರೂಪದಲ್ಲಿ ಭಾರತಕ್ಕಾಗಿ ಆಡಿಲ್ಲ. ವಿಜಯ್ ಹಜಾರೆ ಟ್ರೋಫಿಯನ್ನು ಚಹಾಲ್ ಕಳೆದುಕೊಂಡಿದ್ದಾರೆ. ಹೀಗಾಗಿ ಎರಡು ವರ್ಷಗಳ ಕಾಲ ಆಡದ ಕಾರಣ ಚಾಂಪಿಯನ್ಸ್ ಟ್ರೋಫಿ 2025ರ ತಂಡಕ್ಕೆ ಅವರನ್ನು ಎಂದಿಗೂ ಸ್ಪರ್ಧಿ ಎಂದು ಪರಿಗಣಿಸಲಾಗಿಲ್ಲ ಎಂದು ಚೋಪ್ರಾ ತಿಳಿಸಿದ್ದಾರೆ.