ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದ್ದು ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಎದುರಿಸಲು ಜಿಂಬಾಬ್ವೆ ತಂಡ ಸಕಲ ರೀತಿಯಲ್ಲೂ ಸಜ್ಜಾಗಿದ್ದು ತಂಡದ ಆಟಗಾರ ರಿಯಾನ್ ಬರ್ಲ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಭಾರತದ ವಿರುದ್ಧದ ಸರಣಿಯಲ್ಲಿ ಜಿಂಬಾಬ್ವೆ ಸರಳ ಯೋಜನೆಗಳ ಮೂಲಕ ಕಟ್ಟಿ ಹಾಕುವ ಪ್ರಯತ್ನವನ್ನು ನಡೆಸುತ್ತದೆ ಎಂದಿದ್ದಾರೆ ಜಿಂಬಾಬ್ವೆ ಆಟಗಾರ. ಅಲ್ಲದೆ ಹರಾರೆ ಮೈದಾನದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ತಮಗಿದ್ದು ಇದು ಹೆಚ್ಚಿನ ಲಾಭವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ನಾವು ಅತ್ಯುತ್ತಮ ಎಸೆತಗಳನ್ನು ಎದುರಾಳಿಗಳಿಗೆ ಎಸೆಯುತ್ತೇವೆ. ಈ ಮೂಲಕ ಸವಾಲನ್ನು ಸರಳವಾಗಿಸಲಿದ್ದೇವೆ. ನಾವು ತವರಿನಲ್ಲಿ ಆಡುತ್ತಿದ್ದು ಹಾಗಾಗಿ ತವರಿನ ಪರಿಸ್ಥಿತಿ ನಮಗೆ ಚೆನ್ನಾಗಿ ತಿಳಿದಿರುತ್ತದೆ. ನಾವು ಉತ್ತಮವಾದ ಯೋಜನೆಗಳನ್ನು ಹೊಂದಿದ್ದು ಆಟದ ದಿನದಂದು ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ" ಎಂದಿದ್ದಾರೆ ಜಿಂಬಾಬ್ವೆ ಕ್ರಿಕೆಟ್ ತಂಡದ ಆಟಗಾರ ರಿಯಾನ್ ಬರ್ಲ್.
PAK vs NED: ನೆದರ್ಲೆಂಡ್ಸ್ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್
ಆಗಸ್ಟ್ 22ರಂದು ಈ ಸರಣಿ ಅಂತ್ಯವಾಗಲಿದ್ದು ಈ ಸರಣಿಯಿಂದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಸರಣಿ ಮುಕ್ತಾಯವಾದ ಕೆಲವೇ ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ದ್ರಾವಿಡ್ ಬದಲಿಗೆ ಲಕ್ಷ್ಮಣ್ ಅವರನ್ನು ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ನೇಮಿಸಲಾಗಿದೆ.
ಇನ್ನು ಸುದೀರ್ಘ ಕಾಲ ಗಾಯದ ಕಾರಣದಿಂದಾಗಿ ವಿಶ್ರಾಂತಿಯಲ್ಲಿದ್ದ ಕೆಎಲ್ ರಾಹುಲ್ ಮತ್ತೆ ಆಡಲು ಸಮರ್ಥವಾಗಿದ್ದು ಈ ಸರಣಿಯ ಮೂಲಕ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ತಂಡದ ನಾಯಕತ್ವದ ಹೊಣೆಗಾರಿಕೆ ಕೆಎಲ್ ರಾಹುಲ್ ಹೆಗಲೇರಿದೆ. ಇದಕ್ಕೂ ಮೊದಲು ಜುಲೈ 30ರಂದು ಈ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದಾಗ ಕೆಎಲ್ ರಾಹುಲ್ ಅವರು ಈ ತಂಡದಲ್ಲಿರಲಿಲ್ಲ. ಶಿಖರ್ ಧವನ್ ಅವರನ್ನು ತಂಡದ ನಾಯಕನನ್ನಾಗಿ ಘೋಷಣೆ ಮಾಡಲಾಗಿತ್ತು. ಬಳಿಕ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು ನಾಯಕತ್ವವನ್ನು ಕೂಡ ರಾಹುಲ್ಗೆ ನೀಡಲಾಗಿದೆ, ಧವನ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.
ಇನ್ನು ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳು ಕೂಡ ಒಂದೇ ತಾಣದಲ್ಲಿ ನಡೆಯಲಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಈ ಮೂರು ಪಂದ್ಯಗಳು ಆಯೋಜನೆಯಾಗಲಿದ್ದು ಆಗಸ್ಟ್ 18, 20 ಹಾಗೂ 22ರಂದು ಈ ಪಂದ್ಯಗಳು ನಡೆಯಲಿದೆ.
ರವೀಂದ್ರ ಜಡೇಜಾ ಸಿಎಸ್ಕೆಗೆ ಗುಡ್ಬೈ? : ಆರ್ಸಿಬಿ ಪಾಲಾಗಲಿದ್ದಾರ ಜಡ್ಡು!, ಕಣ್ಣಿಟ್ಟಿವೆ 4 ತಂಡಗಳು
ಟೀಮ್ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ , ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.