ಮುಂಬೈ, ಜು. 07: ಭಾರತ ತಂಡದಲ್ಲಿ ಹಿರಿಯ ಆಟಗಾರ, ಕಿರಿಯ ಆಟಗಾರ ಎಂಬ ವ್ಯತ್ಯಾಸಗಳು ಉಳಿದಿಲ್ಲ. ಎಲ್ಲ 15 ಆಟಗಾರರು ಮುಖ್ಯ ಎಂದು ಜಿಂಬಾಬ್ವೆ ಪ್ರವಾಸದಲ್ಲಿ ಭಾರತವನ್ನು ಮುನ್ನಡೆಸಲಿರುವ ಅಂಜಿಕ್ಯ ರಹಾನೆ ಹೇಳಿದ್ದಾರೆ.
ಜುಲೈ 10 ರಿಂದ ಆರಂಭವಾಗಲಿರುವ ಸರಣಿಯಲ್ಲಿ ಭಾರತ ತಂಡದ ನಾವಿಕನಾಗಿ ರಹಾನೆ ಕೆಲಸ ಮಾಡಲಿದ್ದಾರೆ. ಖಾಯಂ ನಾಯಕ ಎಂಸ್ ಧೋನಿ ಮತ್ತು ಉಪನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ರಹಾನೆ ಅವರಿಗೆ ವಹಿಸಲಾಗಿದೆ. ಭಾರತ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಮತ್ತು ಎರಡು ಟಿ-20 ಪಂದ್ಯಗಳನ್ನು ಆಡಲಿದೆ.[ರಹಾನೆ ಹೊರಗಿಟ್ಟ ಧೋನಿ, ಜಡೇಜ ಬೆನ್ನು ತಟ್ಟಿದ್ರು]

ಮಾಧ್ಯಮಗಳೊಂದಿಗೆ ಮಾತನಾಡಿದ ರಹಾನೆ, ನಾವು ಬಾಂಗ್ಲಾದೇಶದ ಸರಣಿ ಸೋಲಿನ ಯೋಚನೆಯನ್ನು ಬಿಟ್ಟಿದ್ದೇವೆ. ನಾಯಕತ್ವದ ಬಗ್ಗೆ ಎಂಎಸ್ ಧೋನಿ ಅವರಿಂದ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಧೋನಿ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ವಾಸ್ತವ ಸ್ಥಿತಿ ಮೇಲೆ ದೃಷ್ಟಿ ಇಟ್ಟಿದ್ದು ಬಾಂಗ್ಲಾ ಕಹಿ ನೆನಪು ಮರೆತಿದ್ದೇವೆ ಎಂದು ಹೇಳಿದರು.[ಜಿಂಬಾಬ್ವೆ ಪ್ರವಾಸದ ಗೈಡ್]
ನನಗೆ 19 ವರ್ಷದ ಒಳಗಿನ ಮುಂಬೈ ತಂಡವನ್ನು ಮುನ್ನಡೆಸಿದ ಅನುಭವವಿದೆ. ಅದು ಜಿಂಬಾಬ್ವೆ ಪ್ರವಾಸಲ್ಲಿ ಇದು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಆಟಗಾರರಿಗೆ ಈ ಪ್ರವಾಸ ಉತ್ತಮ ಅವಕಾಶವಾಗಿದೆ. ಜಿಂಬಾಬ್ವೆ ವಿರುದ್ಧ ಉತ್ತಮ ಆಟ ಪ್ರದರ್ಶನ ನೀಡಿ ಜಯ ಸಾಧಿಸಿ ತವರಿಗೆ ಹಿಂದಿರುಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೀವು ಆರಂಭಿಕರಾಗಿ ಕಣಕ್ಕೆ ಇಳಿಯುತ್ತೀರಾ? ಎಂದು ಕೇಳಿದಕ್ಕೆ, ಈ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಜಿಂಬಾಬ್ವೆ ತಲುಪಿದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.