ಹರಾರೆ, ಜು. 20: ಜಿಂಬಾಬ್ವೆ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಅಂಜಿಕ್ಯ ರಹಾನೆ ಪಡೆ ಸೋಲು ಅನುಭವಿಸಿದೆ. ಭಾರತಕ್ಕೆ ಜಿಂಬಾಬ್ವೆ ನೀಡಿದ್ದ 145 ರನ್ ಗಳ ಸಾಧಾರಣ ಮೊತ್ತ ಚೇಸ್ ಮಾಡಲು ಸಾಧ್ಯವಾಗಲಿಲ್ಲ.
ಭಾರತ 10 ರನ್ ಗಳ ಹೀನಾಯ ಸೋಲು ಅನುಭವಿಸಬೇಕಾಯಿತು. ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡು 145 ರನ್ ಕಲೆ ಹಾಕಿತು. ಉತ್ತಮ ಬ್ಯಾಟಿಂಗ್ ಮಾಡಿದ ಚಿಭಾಬ 51 ಎಸೆತಗಳಲ್ಲಿ 67 ರನ್ ಸಿಡಿಸಿದರು.[ಮೊದಲ ಟಿ-20 ಫಲಿತಾಂಶ]

ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಜತೆಯಾಟ ಬರಲಿಲ್ಲ. ರಾಬಿನ್ ಉತ್ತಪ್ಪ 42 ರನ್ ಗಳಿಸಿದ್ದೇ ಭಾರತದ ಪರ ಅತ್ಯಧಿಕ ಮೊತ್ತ. ಸ್ಟುವರ್ಟ್ ಬಿನ್ನಿ 23 ರನ್ ಗಳಿಸಿ ಉತ್ತಪ್ಪಗೆ ನೆರವಾಗುವ ಯತ್ನ ಮಾಡಿದರಾದರೂ ಕರಾರುವಕ್ಕಾದ ದಾಳಿ ನಡೆಸಿದ ಜಿಂಬಾಬ್ವೆ ಜಯ ಮಾಲೆ ಧರಿಸಿತು.[ರಾಜೀವ್ ಶುಕ್ಲಾ ಕೈಯಲ್ಲಿ ಚೆನ್ನೈ, ರಾಜಸ್ಥಾನ ಭವಿಷ್ಯ]
ಕೈಕೊಟ್ಟ್ ಬ್ಯಾಟ್ಸ್ಮನ್ಗಳು
ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಅಜಿಂಕ್ಯ ರಹಾನೆ (4) ರನ್ಔಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಬಳಿಕ ಮುರಳಿ ವಿಜಯ್ (13) ಹಾಗೂ ರಾಬಿನ್ ಉತ್ತಪ್ಪ (42) 2ನೇ ವಿಕೆಟ್ಗೆ 53 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಗ್ರೇಮ್ ಕ್ರೀಮರ್ (18ಕ್ಕೆ3)ದಾಳಿಗೆ ಶರಣಾದ ಪ್ರಮುಖ ಆಟಗಾರರು ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಭಾರತ 10 ರನ್ ಗಳ ಸೋಲು ಅನುಭವಿಸಬೇಕಾಯಿತು.
ಎರಡು ಟ್ವಿ20 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸರಣಿ ಸಮ ಮಾಡಿಕೊಂಡವು. ಏಕದಿನ ಸರಣಿಯಲಲ್ಲಿ ಭಾರತ ವಿಜಯ ಸಾಧಿಸಿತ್ತು.