ಅವಮಾನಕರ ಘಟನೆಗೆ ಕಠಿಣ ಪ್ರತಿಕ್ರಿಯೆಯಾಗಿ, ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ತನ್ನ ಕಾರ್ಯಕಾರಿ ಸದಸ್ಯ ದೀಪಕ್ ಶರ್ಮಾ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
ಇತ್ತೀಚಿಗೆ ಗೋವಾದಲ್ಲಿ ನಡೆದ ಇಂಡಿಯನ್ ವುಮೆನ್ಸ್ ಲೀಗ್-2 (ಐಡಬ್ಲ್ಯುಎಲ್ 2) ವೇಳೆ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಮೇಲೆ ದೀಪಕ್ ಶರ್ಮಾ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಬಳಿಕ ಅಮಾನತುಗೊಳಿಸಲಾಗಿದೆ.

ಖಾಡ್ ಎಫ್ಸಿ ತಂಡದ ಇಬ್ಬರು ಫುಟ್ಬಾಲ್ ಆಟಗಾರ್ತಿಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಗೋವಾ ಪೊಲೀಸರು ದೀಪಕ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ನಂತರ, ಜಾಮೀನಿನ ಮೇಲೆ ದೀಪಕ್ ಶರ್ಮಾ ಅವರನ್ನು ಬಿಡುಗಡೆ ಮಾಡಲಾಯಿತು. ಮುಂದಿನ ಆದೇಶ ಬರುವವರೆಗೆ ದೀಪಕ್ ಶರ್ಮಾ ಅವರನ್ನು ಫುಟ್ಬಾಲ್ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಮಾನತುಗೊಳಿಸಿದೆ.
ಹಿಮಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಮತ್ತು ಎಐಎಫ್ಎಫ್ನ ಸ್ಪರ್ಧಾ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ದೀಪಕ್ ಶರ್ಮಾ, ಆರೋಪಗಳ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಎಐಎಫ್ಎಫ್ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದರಿಂದ ಅಮಾನತುಗೊಂಡರು.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, "ಘಟನೆ ಬಗ್ಗೆ ದೀಪಕ್ ಶರ್ಮಾ ವಿರುದ್ಧ ಸಲ್ಲಿಸಲಾದ ದೂರುಗಳ ಬಗ್ಗೆ ಚರ್ಚಿಸಲು ಏಪ್ರಿಲ್ 1, 2024ರಂದು ತುರ್ತು ಸಮಿತಿ ಸಭೆಯನ್ನು ಕರೆಯಲಾಗಿತ್ತು. ಬಳಿಕ ಶಿಸ್ತು ಕ್ರಮವನ್ನು ನಿರ್ಧರಿಸಲು ತುರ್ತು ಕಾರ್ಯಕಾರಿ ಸಮಿತಿಯ ಸಭೆಯನ್ನು ಏಪ್ರಿಲ್ 2, 2024ರಂದು ನಿಗದಿಪಡಿಸಲಾಗಿತ್ತು,'' ಎಂದು ತಿಳಿಸಿದೆ.
ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ, ಮಹಿಳಾ ಫುಟ್ಬಾಲ್ಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ಬೆಳೆಸುವ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.
ಮಹಿಳಾ ಫುಟ್ಬಾಲ್ಗಾಗಿ ಎಐಎಫ್ಎಫ್ ತನ್ನ ಅಭಿವೃದ್ಧಿಯ ಪ್ರಯತ್ನಗಳಲ್ಲಿ ಅಚಲವಾಗಿದೆ ಮತ್ತು ಅದರ ಉದ್ದೇಶಗಳನ್ನು ಮರೆಮಾಡಲು ಇಂತಹ ಘಟನೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.
"ಎಐಎಫ್ಎಫ್ ಸುರಕ್ಷಿತ ಮತ್ತು ಸಕ್ರಿಯಗೊಳಿಸುವ ವಾತಾವರಣದಲ್ಲಿ ಮಹಿಳಾ ಫುಟ್ಬಾಲ್ ಉತ್ತೇಜಿಸಲು ನಿರ್ಧರಿಸಿದೆ ಮತ್ತು ಇದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ," ಎಂದು ಕಲ್ಯಾಣ್ ಚೌಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಐಡಬ್ಲ್ಯುಎಲ್ 2ರ ಸಂದರ್ಭದಲ್ಲಿ ಗೋವಾದಲ್ಲಿ ನಡೆದ ಘಟನೆಯನ್ನು ಮಹಿಳಾ ಫುಟ್ಬಾಲ್ನಲ್ಲಿ ಎಐಎಫ್ಎಫ್ನ ಅಭಿವೃದ್ಧಿಯ ಪ್ರಯತ್ನಗಳನ್ನು ದುರ್ಬಲಗೊಳಿಸಲು ಬಳಸಿಕೊಳ್ಳಬಾರದು. ನಿರ್ದಿಷ್ಟ ಪ್ರಕರಣವನ್ನು ಈಗ ಶಿಸ್ತು ಸಮಿತಿಗೆ ಉಲ್ಲೇಖಿಸಲಾಗಿದೆ ಮತ್ತು ತುರ್ತು ವಿಚಾರಣೆಯನ್ನು ತೆಗೆದುಕೊಳ್ಳಲಾಗುವುದು," ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ದೂರುದಾರರ ಸುರಕ್ಷತೆ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಐಎಫ್ಎಫ್ ಭರವಸೆ ನೀಡಿದೆ ಮತ್ತು ಅವರ ಸ್ವಗ್ರಾಮಕ್ಕೆ ಮರಳಲು ಅನುಕೂಲ ಕಲ್ಪಿಸಲಾಗಿದೆ.
ಈ ಘಟನೆಯು ದೇಶದೆಲ್ಲೆಡೆ ಭಾರೀ ಆಕ್ರೋಶವನ್ನು ಹುಟ್ಟುಹಾಕಿತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ವಿವಿಧ ವಲಯಗಳಿಂದ ತ್ವರಿತ ಖಂಡನೆಗೆ ಗುರಿಯಾಯಿತು. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವ ಅನುರಾಗ್ ಠಾಕೂರ್ ಕೂಡಲೇ ಎಐಎಫ್ಎಫ್ಗೆ ಆದೇಶಿಸಿದರು