
ಗೋವಾ, ನವೆಂಬರ್, 24, 2020: ಫುಟ್ಬಾಲ್ ಆಟ ಯಾವ ರೀತಿಯಲ್ಲಿ ರೂಪುಗೊಂಡು ಮುನ್ನಡೆಯುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ ಬುಧವಾರ ಗೋವಾ ಫಟೊರ್ಡಾ ಕ್ರೀಡಾಂಗಣದಲ್ಲಿ ಎಫ್ ಸಿ ಗೋವಾ ಮತ್ತು ಮುಂಬೈ ಸಿಟಿ ಎಫ್ ಸಿ ತಂಡಗಳು ಮುಖಾಮುಖಿಯಾದಾಗ ಅಲ್ಲಿ ಸಾಕಷ್ಟು ಪಾಸ್ ಗಳನ್ನು ಕಾಣಬಹುದು ಎಂಬುಂತೂ ಖಚಿತ.
ಸರ್ಗಿಯೊ ಲೊಬೆರಾ ಅವರ ತರಬೇತಿಯಲ್ಲಿ ಪಳಗಿದ ತಂಡ ಉತ್ತಮ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚೆಂಡನ್ನು ಪಾಸ್ ಮಾಡುವುದು, ಆಟಗಾರರನ್ನು ಸದಾ ಚಲನಶೀಲರನ್ನಾಗಿ ಮಾಡುವುದು ಸಾಮಾನ್ಯ. ಅವರ ಪಂದ್ಯವೊಂದರ ಸರಾಸರಿ 535 ಪಾಸ್ಗಳು.ಅವರು ಮುಂಬೈ ತಂಡಕ್ಕೆ ಬಂದು ಹೆಚ್ಚು ಸಮಯವಾಗಲಿಲ್ಲ. ಆದರೆ ತಮ್ಮ ರಣತಂತ್ರವನ್ನು ತಂಡಕ್ಕೆ ಈಗಾಗಲೇ ಮನದಟ್ಟು ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 0-1 ಗೋಲಿನಿಂದ ಸೋಲು ಅನುಭವಿಸಿದರೂ 10 ಮಂದಿ ಆಟಗಾರರಿಂದ ಕೂಡಿದ್ದ ಮುಂಬೈ ತಂಡ ಶೇ, 60 ರಷ್ಟು ಚೆಂಡನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿತ್ತು. ಇದರಲ್ಲಿ 451 ಪಾಸ್ ಸೇರಿತ್ತು. ಎದುರಾಳಿ ತಂಡ ಕೇವಲ 217 ಪಾಸ್ ಗಳನ್ನು ಮಾಡಿತ್ತು. ಲೀಗ್ ನಲ್ಲಿ ಇದುವರೆಗೂ ಯಾವುದೇ ತಂಡ ಈ ಸಾಧನೆಯನ್ನು ಮಾಡಿರಲಿಲ್ಲ. ಜುವಾನ್ ಫೆರಾಂಡೋ ಅವರ ಗೋವಾ ತಂಡ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ 2-2 ಡ್ರಾ ಸಾಧಿಸಿತ್ತು, ಈ ವೇಳೆ 448 ಪಾಸ್ ಮಾಡಲಾಗಿತ್ತು. ಇದು ಎದುರಾಳಿ ತಂಡಕ್ಕಿಂತ ಎರಡು ಪಟ್ಟು ಹೆಚ್ಚಿನದ್ದು.
ಸೋಲಿನ ನಡುವೆಯೂ ಕೋಚ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸೂಕ್ತ ಸಮಯದಲ್ಲಿ ಗೋಲು ಗಳಿಸಬಹುದು, ''ಇದುವರೆಗೂ ಉತ್ತಮ ರೀತಿಯಲ್ಲಿ ಚೆಂಡನ್ನು ಅತಿ ಹೆಚ್ಚು ಪಾಸ್ ಮಾಡಿದ ತಂಡಗಳಲ್ಲಿ ನಾವು ಅಗ್ರ ಸ್ಥಾನದಲ್ಲಿದ್ದೇವೆ. ಕೇವಲ ಗುರಿಯ ಕಡೆಗೆ ಹೊಡೆದದ್ದನ್ನು ಮಾತ್ರ ಪರಿಗಣಿಸಿದರೆ ಸಾಲದು, ಫಾರೂಖ್ ಚೌಧರಿ ಹಾಗೂ ಸಾರ್ಥಕ್ ಗೌಲಿ ಅವರಿಗೆ ಉತ್ತಮ ರೀತಿಯ ಅವಕಾಶ ಇದ್ದಿತ್ತು. ನಾವು ಉತ್ತಮ ರೀತಿಯಲ್ಲಿ ಆಡಿದೆವು. ನಾವು ಹತ್ತು ಮಂದಿ ಆಟಗಾರರೊಂದಿಗೆ ಆಡಿದೆವು, ಆದರೂ ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು. ಆದರೂ ನಾವು ಸುಧಾರಣೆ ಕಂಡುಕೊಳ್ಳಬೇಕಾಗಿದೆ.'' ಎಂದು ಲೊಬೆರಾ ಹೇಳಿದರು.
ಮುಂಬೈ ತಂಡ ನಾಳೆಯ ಪಂದ್ಯದಲ್ಲಿ ಅಹಮ್ಮದ್ ಜಹೌವಾ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಆದರೆ ಅವರಿಲ್ಲದೆ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಆತ್ಮವಿಶ್ವಾಸ ಕೋಚ್ ಗೆ ಇದೆ. ''ಕೋಚ್ ಆಗಿ ನನ್ನೊಂದಿಗೆ ಉತ್ತಮ ಆಟಗಾರರಿದ್ದಾರೆ, ಒಬ್ಬ ಅದರಲ್ಲಿ ಕೆಲವರ ಸೇವೆಯಿಂದ ವಂಚಿತನಾದರೂ ವಿಚಲಿತನಾಗುವುದಿಲ್ಲ,'' ಎಂದು ಹೇಳಿದರು.
ಇಬ್ಬರು ಬದಲಿ ಆಟಗಾರರ ಮೂಲಕ ಬೆಂಗಳೂರು ಎಫ್ ಸಿ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ ಫೆರಾಂಡೊಗೆ ಎದುರಾಳಿ ತಂಡ ಏನು ಮಾಡಲಿದೆ ಎಂಬುದರ ಬಗ್ಗೆ ಯೋಚಿಸುವುದು ಸಮಯ ವ್ಯಯ ಮಾಡಿದಂತೆ. '' ನನ್ನ ಗಮನ ನನ್ನ ತಂಡದ ಕಡೆಗೆ, ನಾನು ಎದುರಾಳಿ ತಂಡದ ಕಡೆಗೆ ಗಮನ ಹರಿಸುವುದಿಲ್ಲ. ಯಾವಾಗಲೂ ಧನಾತ್ಮಕವಾಗಿ ಇರುವುದಕ್ಕೆ ಪ್ರಾಶಸ್ತ್ಯ ನೀಡಬೇಕು. ಸ್ಪರ್ಧಾತ್ಮಕವಾಗಿರಬೇಕು ಮತ್ತು ಮೂರು ಅಂಕಗಳನ್ನು ಗಳಿಸುವ ಕಡೆಗೆ ಗಮನ ಹರಿಸಬೇಕು. ಮುಂಬೈ ಇರಲಿ ಅಥವಾ ಯಾವುದೇ ತಂಡವಿರಲಿ ನಮ್ಮ ಮನಸ್ಥಿತಿ ಮಾತ್ರ ಒಂದೇ ಆಗಿರುತ್ತದೆ...ಅದು ಮೂರು ಅಂಕ ಗಳಿಸುವುದು,'' ಎಂದರು.