ಬೆಂಗಳೂರು, ಸೆ 14 : ಕಾವೇರಿ ವಿವಾದದಿಂದಾಗಿ ನಗರದಲ್ಲಿ ಬಿಗುವಿನ ವಾತಾವರಣವಿದೆ. ಇದರ ನಡುವೆಯೂ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಎಎಫ್ ಸಿ ಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಗಪುರದ ತಂಪೈನ್ಸ್ ರೋವರ್ಸ್ ಎದುರು ಪೈಪೋಟಿ ನಡೆಸಲಿದೆ.
ಸೆ.14 ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ ನಾಲ್ಕು ಗಂಟೆಗೆ ಈ ಪಂಧ್ಯ ಆರಂಭವಾಗಲಿದೆ. ದುರದೃಷ್ಟವೆಂದರೆ ಈ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿದೆ. ಕ್ರೀಡಾಂಗಣದ ಎಲ್ಲಾ ದ್ವಾರಗಳನ್ನು ಮುಚ್ಚಿ ಪಂದ್ಯ ನಡೆಸಲಾಗುವುದು ಎಂದು ಬಿಎಫ್ ಸಿ ತಿಳಿಸಿದೆ. [ತಾರೆಗಳ ನೆಚ್ಚಿನ ಐಎಸ್ಎಲ್ ಲೀಗ್ ಫುಲ್ ವೇಳಾಪಟ್ಟಿ]

ಇದರಿಂದ ಫುಟ್ಬಾಲ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಅಭಿಮಾನಿಗಳು ಇಲ್ಲದೇ ಪಂದ್ಯವನ್ನು ನಡೆಸುವುದು ಕಷ್ಟ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆಟಗಾರರ ಭದ್ರತೆಯ ದೃಷ್ಟಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಫುಟ್ಬಾಲ್ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿಷೇಧಿಸಲಾಗಿದೆ. [ಕೊಹ್ಲಿ ತಂಡವನ್ನು ಮಣಿಸಿ ಕಪ್ ಗೆದ್ದ ಧೋನಿ ಟೀಂ!]
ಆಟಗಾರರು ಹಾಗೂ ಅಧಿಕಾರಿಗಳು ಮಾತ್ರ ಇರಲಿದ್ದಾರೆ ಎಂದು ಬಿಎಫ್ ಸಿ ಸಮಿತಿ ತಿಳಿಸಿದೆ. ಇದರಿಂದ ತವರಿನ ತಂಡ ಆಡುವ ಪಂದ್ಯವನ್ನು ವೀಕ್ಷಿಸಿಸಲು ಅವಕಾಶ ನೀಡದಿರುವುದಕ್ಕೆ ಫುಟ್ಬಾಲ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದ ಕಾರಣ ಪಂದ್ಯ ನಡೆಸುವುದೇ ಅನುಮಾನವಿತ್ತು. ಬಿಎಫ್ ಸಿ ಮತ್ತು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ಹಲವು ಬಾರಿ ಸಭೆ ನಡೆಸಿ ಕ್ರೀಡಾಂಗಣದ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ ಪಂದ್ಯ ನಡೆಸಲು ತೀರ್ಮಾನಿಸಿದೆ.