ಬೆಂಗಳೂರು, ಜು.3: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಫೀಫಾ ವಿಶ್ವಕಪ್ ಫೀವರ್ ತಗುಲಿಕೊಂಡಿದೆಯಂತೆ. ಇತ್ತೀಚೆಗೆ ಸಮಾರಂಭಗಳಲ್ಲಿ ಸಿದ್ದರಾಮಯ್ಯ ಅವರು ನಿದ್ದೆ ಮೂಡ್ ನಲ್ಲಿ ಕಾಣಿಸಿಕೊಂಡಿದ್ದನ್ನು ಕಂಡು ಜನ ನಕ್ಕಿದ್ದೋ ನಕ್ಕಿದ್ದು, ಆದರೆ, ಫುಟ್ಬಾಲ್ ಮ್ಯಾಚ್ ನೋಡಿ ಅದೇ ಗುಂಗಿನಲ್ಲಿ ಕಚೇರಿಗೆ ಬರುವ ಸಿದ್ದು ಅವರು ತೂಕಡಿಸಿದರೆ ಅದು ಅವರ ತಪ್ಪಲ್ಲ ಬಿಡಿ.
ಈಗ ವಿಷಯಕ್ಕೆ ಬಂದರೆ, ನಮ್ಮ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೇಳಿ ಕ್ರಿಕೆಟ್ ಹಾಗೂ ಕುಸ್ತಿ ಅಭಿಮಾನಿ. ಈಗ ಇದ್ದಕ್ಕಿದ್ದಂತೆ ಯಾಕೋ ಫುಟ್ಬಾಲ್ ಮೇಲೆ ಮೋಹ ಹುಟ್ಟಿಕೊಂಡಿದೆ. ಲೀಗ್ ಪಂದ್ಯಗಳನ್ನು ಮಿಸ್ ಮಾಡಿಕೊಂಡೆ ಆದರೆ, ಪ್ರೀ ಕ್ವಾಟರ್ ಫೈನಲ್ ಪಂದ್ಯಗಳನ್ನು ನೋಡಿದ್ದೇನೆ. ಕ್ವಾಟರ್ ಫೈನಲ್ ಪಂದ್ಯಗಳು ಇನ್ನಷ್ಟು ರೋಚಕವಾಗಿರುತ್ತದೆ ಎಂಬ ನಿರೀಕ್ಷೆಯಿದೆ ಎಂದರು.
ಯಾವ ತಂಡಕ್ಕೆ ನಿಮ್ಮ ಬೆಂಬಲ?: ಸದ್ಯದ ಪರಿಸ್ಥಿತಿ ನೋಡಿದರೆ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಆದರೆ, ಜರ್ಮನಿ ಒಳ್ಳೆ ರಣತಂತ್ರ ಅನುಸರಿಸುತ್ತಿದೆ. ಸಾಂಘಿಕ ಹೋರಾಟ ನಡೆಸಿದೆ. ನನ್ನ ಪ್ರಕಾರ ಜರ್ಮನಿ, ಅರ್ಜೆಂಟಿನಾ ಅಥವಾ ಬ್ರೆಜಿಲ್ ಕಪ್ ಗೆಲ್ಲುವ ಸಾಧ್ಯತೆಯಿದೆ ಎಂದರು.
ಎಲ್ಲಾ ಪಂದ್ಯ ನೋಡುತ್ತಿರಾ?: ಇಲ್ಲಪ್ಪ, ಕೆಲಸದ ಒತ್ತಡದಲ್ಲಿ ಸಮಯ ಸಿಗುವುದಿಲ್ಲ. ರಾತ್ರಿ ಇಡಿ ನಿದ್ದೆಗೆಟ್ಟು ನೋಡೋ ಆಸೆ ಏನೋ ಇದೆ ಆದರೆ ಸದ್ಯಕ್ಕೆ ರಾತ್ರಿ 9.30ಗೆ ಆರಂಭವಾಗೋ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ. ಬೆಳಗ್ಗೆ ಟೈಂ ಸಿಕ್ಕರೆ ಹೈಲೇಟ್ಸ್ ಖಂಡಿತ ನೋಡುತ್ತೇನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಪ್ರತಿನಿಧಿ ಬಳಿ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಕುಸ್ತಿ, ಗರಡಿ ಮನೆ ಕಡೆ ಹೆಚ್ಚಿನ ಒಲವು ಹೊಂದಿರುವ ಸಿದ್ದರಾಮಯ್ಯ ಅವರು ಸಾಹುಕಾರ್ ಚೆನ್ನಯ್ಯ ಅವರ ಗರಡಿಯ ಗಟ್ಟಾಳು. ಸಿದ್ದರಾಮಣ್ಣನ ಹುಂಡಿ ಗ್ರಾಮದಲ್ಲಿದ್ದಾಗ ಕುಣಿತಕ್ಕೆ ಹೆಸರುವಾಸಿಯಾಗಿದ್ದ ಸಿದ್ದರಾಮಯ್ಯ ಮೈಸೂರು, ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಕಳೆದ ನಾಲ್ಕು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಅವಕಾಶ ಸಿಕ್ಕಿದ್ದರೆ ಬ್ರೆಜಿಲ್ ಗೆ ಫೈನಲ್ ಪಂದ್ಯ ನೋಡಲು ಹೋಗುತ್ತಿದ್ದೆ ಎನ್ನುವ ಸಿದ್ದರಾಮಯ್ಯ ಅವರು ಹಾಲೆಂಡ್ ಹಾಗೂ ಸ್ಪೇನ್ ಪಂದ್ಯ ಇಲ್ಲಿತನಕ ಸಕತ್ ಕಿಕ್ ಕೊಟ್ಟ ಪಂದ್ಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ನೆಚ್ಚಿನ ತಂಡಗಳು ಈ ಬಾರಿ ಕಪ್ ಗೆಲ್ಲಬಹುದೇ ಕಾದು ನೋಡೋಣ. [8 ಘಟ್ಟದ ರೋಚಕ ಪಂದ್ಯಗಳ ವೇಳಾಪಟ್ಟಿ]