
ದೋಹಾದ ಜಾಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಸೋಮವಾರ (ಜೂನ್ 7) ನಡೆದ ಫೀಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ 2-0 ಗೋಲುಗಳಿಂದ ಸೋಲಿಸುವುದರ ಮೂಲಕ ಈ ಬಾರಿಯ ಅರ್ಹತಾ ಸುತ್ತಿನಲ್ಲಿ ಮೊದಲನೇ ಜಯವನ್ನು ಸಾಧಿಸಿತು.
ದ್ವಿತೀಯ ಸುತ್ತಿನ ಈ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಭಾರತದ ಚಿಂಗ್ಲೆನ್ಸಾನಾ ಸಿಂಗ್ 35ನೇ ನಿಮಿಷದಲ್ಲಿ ಗೋಲ್ ಬಾರಿಸುವ ಪ್ರಯತ್ನ ಮಾಡಿದರೂ ಸಹ ಯಶಸ್ವಿಯಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಭಾರತದ ನಾಯಕ ಸುನೀಲ್ ಛೇಟ್ರಿ ಎರಡು ಗೋಲುಗಳನ್ನು ಬಾರಿಸುವುದರ ಮೂಲಕ ಭಾರತ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಸುನಿಲ್ ಚೆಟ್ರಿ 79ನೇ ನಿಮಿಷ ಹಾಗೂ ಪಂದ್ಯದ ಕೊನೆಯ 90ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಈ ಮೂಲಕ ಭಾರತ ತಂಡ ಸತತ 11 ಪಂದ್ಯಗಳ ಸೋಲಿನ ನಂತರ ಅಂತಾರಾಷ್ಟ್ರೀಯ ವಿಜಯವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ತಂಡ ತನ್ನ ಏಷ್ಯನ್ ಕಪ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದು ಗ್ರೂಪ್ 'ಇ' ತಂಡಗಳ ಪೈಕಿ 7 ಪಂದ್ಯಗಳಿಂದ 6 ಅಂಕಗಳನ್ನು ಗಳಿಸಿದೆ ಹಾಗೂ ಗ್ರೂಪ್ 'ಇ'ನಲ್ಲಿ ಸದ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.