14 ವರ್ಷದ ಬಳಿಕ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಭಾರತಕ್ಕೆ ಬಂದಿದ್ದರು. ಇವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಹಲವು ಗಣ್ಯರನ್ನು ಭೇಟಿ ಆದರು. ಅಲ್ಲದೆ ಕೋಲ್ಕತ್ತಾ, ಹೈದರಾಬಾದ್, ಮುಂಬೈ, ದೆಹಲಿ ನಗರಗಳಿಗೆ ಭೇಟಿ ನೀಡಿ ಅಭಿಮಾನಿಗಳನ್ನು ರಂಜಿಸಿದರು. ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಅಭಿಮಾನಿಗಳ ಗದ್ದಲಕ್ಕೆ ಕಾರಣವಾಯಿತು. ಈ ಕಾರ್ಯಕ್ರಮದಲ್ಲಿ ಲಿಯೊನೆಲ್ ಮೆಸ್ಸಿ ಅವರು ಮೈದಾನದಿಂದ ಬೇಗನೆ ಹೊರ ನಡೆದರು, ಅಭಿಮಾನಿಗಳು ದಾಂಧಲೆ ನಡೆಸಿದರು. ಈ ಕಾರ್ಯಕ್ರಮ ಆಯೋಜಕ ಸತಾದ್ರು ದತ್ತಾ ಅವರನ್ನು ಬಂಧಿಸಲಾಗಿದೆ. ಇದೇ ವೇಳೆ ಬಂಧಿತರು ಮೆಸ್ಸಿಗೆ ಭಾರತಕ್ಕೆ ಬರಲು ನೀಡಿದ್ದ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಸ್ಥೆಯ ವರದಿಯ ಪ್ರಕಾರ ಮೆಸ್ಸಿ ಭಾರತಕ್ಕೆ ಬರಲು ಸುಮಾರು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದರಲ್ಲಿ 11 ಕೋಟಿ ಭಾರತ ಸರ್ಕಾರಕ್ಕೆ ತೆರಿ ಗೆಯ ರೂಪದಲ್ಲಿ ಪಾವತಿಸಲಾಗಿದೆ. ಇನ್ನು ಈ ಪ್ರವಾಸದ ವೇಳೆ ಮೆಸ್ಸಿ ಕೈ ಸೇರಿದ್ದು ಬರೋಬ್ಬರಿ 89 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಬಂಧಿತ ದತ್ತಾ ಅವರು ತನಿಖಾ ತಂಡಕ್ಕೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಮೆಸ್ಸಿಗೆ ನೀಡಿದ 30 ಪ್ರತಿಶತ ಹಣ ಪ್ರಾಯೋಜಕರಿಂದ ಬಂದರೆ, ಶೇಕಡಾ 30 ರಷ್ಟನ್ನು ಟಿಕೆಟ್ ಖರೀದಿಯಿಂದ ಹರಿದು ಬಂದಿದೆ.

ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತದ ಪ್ರವಾಸ ಕೋಲ್ಕತ್ತಾದಿಂದ ಆರಂಭವಾಯಿತು. ಈ ವೇಳೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಇದೇ ವೇಳೆ ಮೈದಾನದಲ್ಲಿ ಪ್ರತಿಷ್ಠಾಪಿಸಲಾದ ತಮ್ಮದೇ 70 ಅಡಿ ಉದ್ದದ ಪ್ರತಿಮೆಯನ್ನು ಸಹ ಅನಾವರಣ ಮಾಡಿದರು. ಮೆಸ್ಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಜನರು ಅವರನ್ನು ಸುತ್ತುವರೆದರು. ಇದರಿಂದ ಬೇಸತ್ತ ಮೆಸ್ಸಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮೈದಾನ ತೊರೆದರು. ಇದರಿಂದ ಬೇಸತ್ತ ಅಭಿಮಾನಿಗಳು ಮೈದಾನದಲ್ಲಿ ಗದ್ದಲ ನಡೆಸಿದರು.
ಮೆಸ್ಸಿ ಅವರನ್ನು ಕಣ್ಣು ತುಂಬಿಕೊಳ್ಳಲು ದೂರದ ಊರುಗಳಿಂದ ಅಭಿಮಾನಿಗಳು ಕೋಲ್ಕತ್ತಾಗೆ ಬಂದಿದ್ದರು. ಮೆಸ್ಸಿ ಅವರನ್ನು ಸರಿಯಾಗಿ ನೋಡಲು ಆಗದೇ ಇದ್ದಾಗ ಅಭಿಮಾನಿಗಳು ಗದ್ದಲ ಮಾಡಿದರು. ಇದೇ ವೇಳೆ ಅಭಿಮಾನಿಗಳು ಮೈದಾನದಲ್ಲಿದ್ದ ಕುರ್ಚಿಗಳನ್ನು ಕಿತ್ತೆಸೆದರು. ಬಳಿಕ ಮೈದಾನಕ್ಕೆ ನುಗ್ಗಿ ವೇದಿಕೆಯನ್ನು ಸಹ ಧ್ವಂಸ ಮಾಡಿದರು. ಈ ಗಲಾಟೆಯನ್ನು ತಡೆಯಲು ಪೊಲೀಸರು ಹೆಣಗಾಟ ನಡೆಸಿದರು. ಬಳಿಕ ಲಘುಲಾಠಿ ಪ್ರಹಾರವನ್ನು ಸಹ ನಡೆಸಲಾಯಿತು. ಆ ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಈ ಘಟನೆಯ ತನಿಖೆಗೆ ಒಂದು ಸಮಿತಿಯನ್ನು ರಚಿಸಿತು.

ಕೋಲ್ಕತ್ತಾ ಕಾರ್ಯಕ್ರಮದಿಂದ ಮೆಸ್ಸಿ ಹೈದರಾಬಾದ್ಗೆ ತೆರಳುವೇಳೆ ಆಯೋಜಕ ಸತಾದ್ರು ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದರು. ಇವರ ವಿಚಾರಣೆಯ ವೇಳೆ ಅವರಿಗೆ ನೀಡಿದ ಹಣದ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲದೆ ಎಸ್ಐಟಿ ಅಧಿಕಾರಿಗಳು ದತ್ತಾ ಅವರ ಬ್ಯಾಂಕ್ ಖಾತೆಗಳಿಂದ ₹20 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.