
ಬುರಿರಾಮ್, ಜೂನ್ 05: ಕಿಂಗ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ರಾಷ್ಟ್ರೀಯ ಪುರುಷರ ಫುಟ್ಬಾಲ್ ತಂಡ ಅತ್ಯಂತ ಹೀನಾಯ ಸೋಲುಂಡಿದ್ದು, ಸೆಮಿಫೈನಲ್ಸ್ನಲ್ಲಿ ನೀರಸ ಪ್ರದರ್ಶನ ನೀಡಿ ಕುರಾಸೊ ವಿರುದ್ಧ 1-3 ಅಂತರದ ಸೋಲುಂಡಿದೆ.
ಪಂದ್ಯದ ಮೊದಲ ಅವಧಿಯಲ್ಲೇ ವಿಶ್ವ ಶ್ರೇಯಾಂಕದಲ್ಲಿ ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿರುವ ಕುರಾಸೊ ಭರ್ಜರಿ ಆಟವಾಡಿ ಪಂದ್ಯದ ಹಿಡಿತ ಸಾಧಿಸಿದರೆ, ಭಾರತ ತಂಡದ ಪರ ನಾಯಕ ಸುನಿಲ್ ಛೇತ್ರಿ ಪೆನಾಲ್ಟಿ ಸ್ಪಾಟ್ ಕಿಕ್ ಮೂಲಕ ಏಕೈಕ ಗೋಲ್ ತಂದುಕೊಡಲಷ್ಟೇ ಶಕ್ತರಾದರು. ಎದುರಾಳಿ ತಂಡದ ಬಹುತೇಕ ಆಟಗಾರರು ಯುರೋಪಿಯನ್ ಲೀಗ್ಗಳಲ್ಲಿ ಆಡಿದ ಅನುಭವ ಹೊಂದಿರುವದರಿಂದ ಸಹಜವಾಗಿಯೇ ಭಾರತ ತಂಡದ ಎದುರು ಪ್ರಾಬಲ್ಯ ಮೆರೆದರು.
ಪಂದ್ಯದ ಮೊದಲ ಅವಧಿಯಲ್ಲಿ ಕುರಾಸೊ ತಂಡದ ಪರ ಬೊನೆವಾಸಿಯಾ (15ನೇ ನಿ.), ಹೂಯ್ (18ನೇ ನಿ.) ಹಾಗೂ ಬಕೂನಾ (34ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿ ಭಾರತ ತಂಡದ ಸವಾಲನ್ನು ಸುಲಭವಾಗಿ ಮೆಟ್ಟಿನಿಲ್ಲಲು ನೆರವಾದರು. ಭಾರತದ ಅನುಭವಿ ಆಟಗಾರ ಹಾಗೂ ನಾಯಕ ಸುನಿಲ್ ಛೇತ್ರಿ, 32ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಪಾಟ್ ಕಿಕ್ನಲ್ಲಿ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು.
ದಿನದ ಮತ್ತೊಂದು ಸೆಮಿಫೈನಲ್ಸ್ ಪಂದ್ಯದಲ್ಲಿ ವಿಯೇಟ್ನಾಮ್ ತಂಡ 1-0 ಗೋಲ್ಗಳಿಂದ ಆತಿಥೇಯ ಥಾಯ್ಲೆಂಡ್ ವಿರುದ್ಧ ಜಯ ದಾಖಲಿಸಿತು. ಇದೀಗ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿನೂತನ ಕೋಚ್ ಇಗೋ ಸ್ಟಿಮಾಕ್ ಅವರ ನೇತೃತ್ವದ ಭಾರತ ತಂಡ ಜೂನ್ 8ರಂದು ಆತಿಥೇಯ ಥಾಯ್ಲೆಂಡ್ ವಿರುದ್ಧ ಪೈಪೋಟಿ ನಡೆಸಲಿದೆ.