ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ. 82 ವರ್ಷದ ಚುನಿ ಗೋಸ್ವಾಮಿ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.1962ರ ಏಷ್ಯಾ ಕಪ್ ಚಿನ್ನದ ಪದಕ ವಿಜೇತ ಭಾರತೀಯ ತಂಡದ ನಾಯಕನಾಗಿದ್ದರು. ಮಾತ್ರವಲ್ಲ ಪಶ್ಚಿಮ ಬಂಗಾಳ ಪ್ರಥಮ ದರ್ಜೆ ಕ್ರಿಕೆಟ್ವನ್ನು ಕೂಡ ಚುನಿ ಗೋಸ್ವಾಮಿ ಪ್ರತಿನಿಧಿಸಿದ್ದರು.
ಕಳೆದ ಕೆಲ ತಿಂಗಳಿನಿಂದ ಚುನಿ ಗೋಸ್ವಾಮಿ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬಂದಿತ್ತು. ಮದುಮೇಹ, ಪ್ರಾಸ್ಟ್ರೇಟ್ ಮತ್ತು ನರಗಳ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಬುಧವಾರ ಅವರನ್ನು ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನದಿಂದ ಏಪ್ರಿಲ್ 30ರಂದು ಸಂಜೆ 5 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.
ಚುನಿ ಗೋಸ್ವಾಮಿ ನೇತೃತ್ವದಲ್ಲಿ ಭಾರತೀಯ ಫುಟ್ಬಾಲ್ ತಂಡ 1962ರಲ್ಲಿ ಏಷ್ಯಾಕಪ್ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. 1964ರಲ್ಲಿ ರನ್ನರ್ಅಪ್ ಸ್ಥಾನವನ್ನು ಭಾರತ ತಂಡ ಪಡೆದುಕೊಂಡಿತ್ತು. ಕ್ಲಬ್ ಫುಟ್ಬಾಲ್ನಲ್ಲಿ ಗೋಸ್ವಾಮಿ ಯಾವಾಗಲೂ ಮೊಹುನ್ ಬಗಾನ್ ತಂಡವನ್ನು ಪ್ರತಿನಿಧಿಸುತ್ತಿದ್ದರು.
ಕಾಲೆಜು ದಿನಗಳಲ್ಲಿ ಚುನಿ ಗೋಸ್ವಾಮಿ ಫುಟ್ಬಾಲ್ ಮತ್ತು ಕ್ರಿಕೆಟ್ ಎರಡು ಕ್ರೀಡೆಗಳಲ್ಲೂ ಕಲ್ಕತ್ತಾ ಯುನಿವರ್ಸಿಟಿಯನ್ನು ಪ್ರತಿನಿಧಿಸುತ್ತಿದ್ದರು. 1957ರಲ್ಲಿ ಅಂತಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನ ಆರಂಭಿಸಿದರು. ಭಾರತ ರಾಷ್ಟ್ರೀಯ ತಂಡದ ದೊಡ್ಡ ತಾರೆಯಾಗಿ ಮಿಂಚಿದ್ದ ಗೋಸ್ವಾಮಿ 1964ರಲ್ಲಿ ತಮ್ಮ 27ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ನಿಮದ ದೂರವಾದರು.
ಫುಟ್ಬಾಲ್ ಮಾತ್ರವಲ್ಲ ಕ್ರಿಕೆಟ್ನಲ್ಲೂ ಚುನಿ ಗೋಸ್ವಾಮಿ ಯಶಸ್ಸು ಸಾಧಿಸಿದರು. 1971-72ರ ಸಾಲಿನ ರಣಜಿ ತಂಡದ ನಾಯಕನಾಗಿ ಚುನಿ ಗೋಸ್ವಾಮಿ ಆಯ್ಕೆಯಾದರು. ಈ ಋತುವಿನಲ್ಲಿ ಬಂಗಾಳ ತಂಡ ಫೈನಲ್ಗೆ ಪ್ರವೇಶವನ್ನು ಪಡೆದುಕೊಳ್ಳಲು ಯಶಸ್ವಿಯಾಗಿತ್ತು ಫೈನಲ್ನಲ್ಲಿ ಬಾಂಬೆ ತಂಡದ ವಿರುದ್ಧ ಸೋತು ರನ್ನರ್ಅಪ್ ಆಗಿತ್ತು.