
ಗೋವಾ, ಫೆಬ್ರವರಿ 5: ಸಂಕಟದಲ್ಲಿ ಸಿಲುಕಿದ್ದ ಬೆಂಗಳೂರು ಎಫ್ ಸಿ ಕೊನೆಗೂ ಜಯದ ಲಯ ಕಂಡುಕೊಂಡಿದೆ. ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ 2-0 ಅಂತರದಲ್ಲಿ ಗೆಲ್ಲುವ ಮೂಲಕ 11 ಪಂದ್ಯಗಳ ಬಳಿಕ ಕ್ಲೀನ್ ಶೀಟ್ ಯಶಸ್ಸು ಕಂಡಿದೆ. ಸತತ ಎಂಟು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾದ ಬೆಂಗಳೂರು ಕೊನೆಗೂ ಯಶಸ್ಸು ಸಾಧಿಸಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾಸ ಹೊಂದಿದೆ.
"ಈಗ ತಂಡದಲ್ಲಿ ಸಾಕಷ್ಟು ಧನಾತ್ಮಕ ಅಂಶ ಕಂಡುಬಂದಿದೆ. ಆಟಗಾರರಲ್ಲಿ ಪರಸ್ಪರ ನಂಬಿಕೆ ಹುಟ್ಟಿಕೊಂಡಿದೆ. ಕಳೆದ 2-3 ಪಂದ್ಯಗಳಲ್ಲಿ ನಾವು ಆಡಿದ ರೀತಿಯನ್ನು ಗಮನಿಸಿದರೆ ಈ ನಂಬಿಕೆ ಈಗ ಹೆಚ್ಚಾಗಿದೆ.," ಎಂದು ಮಧ್ಯಂತರ ಕೋಚ್ ಮೂಸಾ ಹೇಳಿದ್ದಾರೆ. "ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಆ ತಪ್ಪುಗಳು ಪುನರಾವರ್ತನೆಯಾಗುತ್ತಿಲ್ಲ. ಎಲ್ಲರೂ ಎಚ್ಚರಿಕೆಯಲ್ಲಿ ಆಡುತ್ತಿದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ, ಇದನ್ನು ನಾನು ಆಟಗಾರರಲ್ಲಿ ಗಮನಿಸಿದ್ದೇನೆ," ಎಂದರು.
ಶುಕ್ರವಾರದ ಪಂದ್ಯ ಸೆಟ್ ಪೀಸ್ ನಲ್ಲಿ ಯಶಸ್ಸು ಕಾಣುವ ತಂಡದ ವಿರುದ್ಧವಾಗಿದೆ. ಮತ್ತು ಡಿಫೆನ್ಸ್ ವಿಭಾಗದಲ್ಲಿ ಸುರ್ಬಲವಾಗಿರುವ ತಂಡ. ಚೆನ್ನೈಯಿನ್ ತಂಡ ಒಟ್ಟು ಗಳಿಸಿರುವ ಗೋಲುಗಳನ್ನು 50 ಪ್ರತಿಶತ ಗೋಲನ್ನು ಎದುರಾಳಿ ತಂಡಕ್ಕೆ ನೀಡಿದೆ. ಉತ್ತಮ ವಿದೇಶಿ ಆಟಗಾರರಿಂದ ಕೂಡಿರುವ ತಂಡದ ವಿರುದ್ಧ ಕಠಿಣ ಸವಾಲು ಎದುರಾಗಲಿದೆ ಎಂದು ಮೂಸಾ ನಿರೀಕ್ಷಿಸಿದ್ದಾರೆ.
"ಅವರಲ್ಲಿ ಸೆಂಟ್ರಲ್ ಡಿಫೆಂಡರ್ ಇಲ್ಲದ ಕಾರಣ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ನಾಳೆಯ ಪಂದ್ಯದಲ್ಲಿ ಎಲ್ಲ ವಿದೇಶಿ ಆಟಗಾರರು ಲಭ್ಯರಿದ್ದಾರೆ. ಆದ್ದರಿಂದ ಯಶಸ್ಸು ಅಷ್ಟು ಸುಲಭವಾಗಿರುವುದಿಲ್ಲ.' ಎಂದು ಹೇಳಿರುವ ಮೂಸಾ ಅವರು ಚೆನ್ನೈಯಿನ್ ತಂಡ ನೂತನವಾಗಿ ತಂಡವನ್ನು ಸೇರಿಕೊಂಡಿರುವ ಮಾನ್ವೆಲ್ ಲಾಂಜರೋಟ್ ಅವರು ಆಡುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಬೇಕು ಎಂದು ತಂಡಕ್ಕೆ ಸೂಚಿಸಿದ್ದಾರೆ. "ಈಸ್ಟ್ ಬೆಂಗಾಲ್ ವಿರುದ್ಧ ಆಡಿದಂತೆ ನಾವು ಸಂಘಟಿತರಾಗಿ ಆಡಬೇಕಾಗಿದೆ. ಅಂತಿಮ ಹಂತದಲ್ಲಿ ನೀಡುವ ಪಾಸ್ ಗಳ ಬಗ್ಗೆ ಎಚ್ಚರ ಇರಬೇಕು. ನಾವು ಯಾವ ರೀತಿಯಲ್ಲಿ ಡಿಫೆಂಡ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಅವರಿಗೆ ಗೋಲು ಗಳಿಸಲು ಅವಕಾಶ ನೀಡಬಾರದು, " ಎಂದರು.
ಬಿಎಫ್ ಸಿ ಯು ರಾಹುಲ್ ಭಿಕೆ, ಜುವಾನ್ ಗೊನ್ಸಾಲ್ವೆಸ್ ಮತ್ತು ಲಿಯಾನ್ ಆಗಸ್ಟಿನ್ ಅವರ ಸೇವೆಯಿಂದ ವಂಚಿತವಾಗಲಿದೆ. ಚೆನ್ನೈಯಿನ್ ತಂಡದ ಗುರಿ ಇಲ್ಲದ ಹೊಡೆತ ತಂಡಡದ ಹಿನ್ನಡೆಗೆ ಕಾರಣವಾಗಿದೆ. ಉತ್ತಮ ಅವಕಾಶಗಳಿದ್ದರು ಕಳೆದ ಎಂಟಟು ಪಂದ್ಯಗಳಲ್ಲಿ ತಂಡ ಗೋಲುಗ ಗಳಿಸುವಲ್ಲಿ ವಿಫಲವಾಗಿದೆ ಎಂದು ಕೋಚ್ ಸಾಬಾ ಲಾಜ್ಲೊ ಹೇಳಿದ್ದಾರೆ.
"ನಾವು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಇದು ಒಂದು ರೀತಿಯಲ್ಲಿ ಐದು ಫೈನಲ್ ಇದ್ದಂತೆ. ಬೆಂಗಳೂರು ವಿರುದ್ಧ ನಾವು ಮೊದಲ ಜಯ ಗಳಿಸಲು ಯತ್ನಿಸುವೆವು. ನಾವು ಗೋಲುಗಳನ್ನು ಗಳಿಸಬಲ್ಲೆವು ಎಂಬ ನಂಬಿಕೆ ನನಗಿದೆ, ಏಕೆಂದರೆ, ನಾವು ಸಾಕಷ್ಟು ಅವಕಾಶಗಳನ್ನು ನಿರ್ಮಿಸಿ ಗೋಲು ಗಳಿಸುವಲ್ಲಿ ವಿಫಲವಾಗುತ್ತಿದ್ದೇವೆ. ನಾವು ಪಂದ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ," ಎಂದರು.
"ನಾವಿಲ್ಲಿರುವುದು ಪಂದ್ಯಗಳನ್ನು ಗೆಲ್ಲಲು, ನಾನು ನನ್ನ ಭವಿಷ್ಯದ ಬಗದಗೆ ಯೋಚಿಸುವುದಿಲ್ಲ. ಆದರೆ ಕ್ಲಬ್ ನ ಭವಿಷ್ಯದ ಬಗ್ಗೆ ಯೋಚಿಸುವೆ. ನನ್ನ ಪ್ರಕಾರ ಬೆಂಗಳೂರು ವಿರುದ್ಧದ ಪಂದ್ಯ ನಮ್ಮ ಪಾಲಿಗೆ ಕಠಿಣ ಪಂದ್ಯವೆನಿಸಲಿದೆ. ತಂಡವನ್ನು ಸಜ್ಜುಗೊಳಿಸುವತ್ತ ನನ್ನ ಗಮನ," ಎಂದರು.