
ಗೋವಾ, ಫೆಬ್ರವರಿ 7: ಪ್ಲೇ ಆಫ್ ಸ್ಥಾನ ತಲುಪಲು ನಾಲ್ಕು ಅಂಕಗಳ ಕೊರತೆಯಲ್ಲಿರುವ ಓವೆನ್ ಕೊಯ್ಲ್ ಅವರ ಜೆಮ್ಷೆಡ್ಪುರ ತಂಡಕ್ಕೆ ಭಾನುವಾರದ ಮೊದಲ ಪಂದ್ಯದಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ಎದುರಾಲಿದೆ. ಸತತ ಐದು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾದ ಜೆಮ್ಷೆಡ್ಪುರ ತಂಡ ಅಂತಿಮವಾಗಿ ಒಡಿಶಾ ಎಫ್ ಸಿ ವಿರುದ್ಧ ಜಯ ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಋತುವಿನ ಕೊನೆಯ ತನಕವೂ ಜಯದ ಲಯವನ್ನು ಕಾಯ್ದುಕೊಳ್ಳಬೇಕೆಂಬುದನ್ನು ಕೊಯ್ಲ್ ಪಡೆ ಅರಿತಿರಬೇಕು.
"ನಮ್ಮ ಆಟಗಾರರು ಕಠಿಣವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಧನಾತ್ಮಕವಾಗಿ ಯೋಚಿಸಬೇಕು, ಮತ್ತು ಉತ್ತಮವಾಗಿ ಆಡಬೇಕು, ಇಷ್ಟನ್ನು ಮಾತ್ರ ಮಾಡಬಹುದು," ಎಂದು ಕೊಯ್ಲ್ ಹೇಳಿದ್ದಾರೆ. ಈ ವಿಷಯದಲ್ಲಿ ಕೊಯ್ಲ್ ಅವರು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಡಿಫೆನ್ಸ್. ಜೆಮ್ಷೆಡ್ಪುರ ಮೂರು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಕಾಯ್ದುಕೊಂಡಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಎಂಟು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶಮಾಡಿಕೊಟ್ಟಿತ್ತು. ಇದಕ್ಕಾಗಿ ಉತ್ತಮ ಫಾರ್ಮ್ ಕಾಯ್ದುಕೊಳ್ಳಬೇಕು. ಒಡಿಶಾ ವಿರುದ್ಧದ ಪಂದ್ಯದಲ್ಲಿ ತಂಡ ಗಳಿಸಿದ ಗೋಲು ನಾಲ್ಕು ಪಂದ್ಯಗಳಲ್ಲಿ ಗಳಿಸಿದ ಮೊದಲು ಓಪನ್ ಪ್ಲೇ ಗೋಲಾಗಿದೆ.
ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಈಸ್ಟ್ ಬೆಂಗಾಲ್ ತಂಡ ಕೇವಲ 10 ಮಂದಿ ಆಟಗಾರರಿದ್ದರೂ ಜೆಮ್ಷೆಡ್ಪುರದ ಬೆವರಿಳಿಸಿತ್ತು. ಭಾನುವಾರದ ಪಂದ್ಯದ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದ್ದಾರೆ. "ಕೆಳ ಕ್ರಮಾಂಕದಲ್ಲಿದ್ದರೂ ಈಸ್ಟ್ ಬೆಂಗಾಲ್ ಬಹಳ ಅಪಾಯಕಾರಿ ತಂಡ," ಎಂದಿದ್ದಾರೆ. "ಅವರು ಸಾಕಷ್ಟು ಉತ್ತಮ ಆಟಗಾರರನ್ನು ಖರೀದಿಸಿದ್ದಾರೆ. ಅವರದ್ದೇ ಆದ ಸಮಸ್ಯೆಗಳಿಂದಾಗಿ ಬೆಂಗಳೂರು ವಿರುದ್ಧ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಿರಲಿಲ್ಲ. ಆದ್ದರಿಂದ ನಾಳೆಯ ಪಂದ್ಯದಲ್ಲಿ ಜಯ ಗಳಿಸಿ ಸ್ಪರ್ಧೆಯಲ್ಲಿ ಜೀವಂತಿಕೆಯನ್ನು ಕಾಯ್ದುಕೊಳ್ಳಲು ಯತ್ನಿಸು್ತ್ತಾರೆ, ಅವರಲ್ಲಿರು ಉತ್ತಮ ಗುಣಮಟ್ಟದ ಆಟಕ್ಕೆ ನಮ್ಮ ಗೌರವವಿದೆ. ಅದೇ ರೀತಿ ನಮ್ಮ ಆಟದ ಮೂಲಕ ಅವರನ್ನು ನಿಯಂತ್ರಿಸಲಿದ್ದೇವೆ. ಅದು ಪಂದ್ಯದಲ್ಲಿ ಪ್ರಮುಖ ಅಂಶವೆನಿಸಲಿದೆ," ಎಂದರು.
ಇನ್ನೊಂದೆಡೆ ಈಸ್ಟ್ ಬೆಂಗಾಲ್ ತಂಡ ಸಂಕಷ್ಟದಲ್ಲಿದೆ. ಭಾನುವಾರದ ಸೋಲು ತಂಡವನ್ನು ಬಹುತೇಕ ಪ್ಲೇ ಆಫ್ ನಿಂದ ಹೊರನಡೆಯುವಂತೆ ಮಾಡಲಿದೆ. ಕಳೆದ ಐದು ಪಂದ್ಯಗಳಲ್ಲಿ ತಂಡ ಜಯ ಕಂಡಿರಲಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೋಲು ಗಳಿಸಿರಲಿಲ್ಲ. ಅಮಾನತುಗೊಂಡ ಕಾರಣ ಕೋಚ್ ರಾಬಿ ಫ್ಲವರ್ ಅವರ ಸೇವೆಯಿಂದ ತಂಡ ವಂಚಿತವಾಗಲಿದೆ. ಆದರೆ ಸಹಾಯಕ ಕೋಚ್ ಟೋನಿ ಗ್ರಾಂಟ್ ಅವರು ತಮ್ಮ ತಂಡ ಇದುವರೆಗೂ ಲೀಗ್ ನಲ್ಲಿ ತೋರಿದ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
"ಪಿಚ್ ನಲ್ಲಿ ನಮ್ಮ ತಂಡ ಕಠಿಣ ಸವಾಲನ್ನು ಎದುರಿಸಲಿದೆ ಎಂದು ನಾನು ನಂಬುತ್ತಿಲ್ಲ. ಐಎಸ್ ಎಲ್ ನ ಪಂದ್ಯಗಳನ್ನು ಅವಲೋಕಿಸಿದಾಗ ಅಂತಿಮ ಕ್ಷಣದಲ್ಲಿ ಯಾವ ತಂಡ ಶ್ರಮವಹಿಸಿದೆಯೋ ಅದು ಯಶಸ್ಸು ಕಂಡಿದೆ. ನಮಗೆ ಋತು ಆರಂಭಗೊಳ್ಳುವುದಕ್ಕೆ ಮುನ್ನ ಕೇವಲ ಎರಡು ವಾರಗಳ ಸಿದ್ಧತೆ ಅವಕಾಶ ಸಿಕ್ಕಿದೆ. ಆದ್ದರಿಂದ ನಮ್ಮ ತಂಡ ಉತ್ತಮ ರೀತಿಯಲ್ಲೇ ಕಾರ್ಯನಿರ್ವಹಿಸಿದೆ," ಎಂದರರು. "ನಾವು ಕೇರಳಕ್ಕಿಂತ ಒಂದು ಅಂಕ ಹಿಂದೆ ಬಿದ್ದಿದ್ದೇವೆ. ಅವರು ಈ ವರ್ಷಕ್ಕಾಗಿ ಹಲವು ವರ್ಷಗಳ ಕಾಲ ಅಭ್ಯಾಸ ಮಾಡಿದ್ದಾರೆ. ಉತ್ತಮ ಹೋರಾಟ ನೀಡುವಲ್ಲಿ ನಮ್ಮ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳ ಶ್ರಮ ಇದೆ. ನಾವು ಆ ಹೋರಾಟವನ್ನು ಮುಂದುವರಿಸಲಿದ್ದೇವೆ,' ಎಂದರು.