ಗೋವಾ,ಜನವರಿ 24: ಸೋಮವಾರ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಯಾವ ರೀತಿಯಲ್ಲಿ ಜಯ ಗಳಿಸುವುದು ಎಂಬ ಚಿಂತೆ ಚೆನ್ನೈಯಿನ್ ತಂಡದ ಕೋಚ್ ಸಾಬಾ ಲಾಜ್ಲೊ ಅವರನ್ನು ಕಾಡಿದೆ. 13 ಪಂದ್ಯಗಳ ನಂತರವೂ ಚೆನ್ನೈಯಿನ್ ತಂಡ ಗೋಲು ಗಳಿಸಲು ಒದ್ದಾಟ ನಡೆಸುತ್ತಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ತಂಡ ಇದುವರೆಗೂ ಗಳಿಸಿದ್ದು ಕೇವಲ 10 ಗೋಲುಗಳು.
ಇದು ಎಲ್ಲಾ ಋತುಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಎಂದರೆ ತಪ್ಪಾಗಲಾರದು. ಈ ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಸೋಲುವ ಮೂಲಕ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲವಾದಂತಾಗಿದೆ. ಇತರ ಯಾವುದೇ ತಂಡ ಈ ರೀತಿಯ ಕಳಪೆ ಪ್ರದರ್ಶನ ತೋರಿಲ್ಲ.
ಐಎಸ್ಎಲ್: ಅಂಕ ಹಂಚಿಕೊಂಡ ಕೇರಳ ಬ್ಲಾಸ್ಟರ್ಸ್ ಮತ್ತು ಗೋವಾ
ಈಗ ಎರಡು ಬಾರಿ ಚಾಂಪಿಯನ್ ತಂಡವೆನಿಸಿರುವ ಚೆನ್ನೈ 11 ಪಂದ್ಯಗಳಲ್ಲಿ ಸೋಲು ಕಾಣದೆ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧ ಪಂದ್ಯವನ್ನಾಡಲಿದೆ. ಮುಂಬೈ ತಂಡ ಇದುವರೆಗೂ ನೀಡಿದ್ದು ಕೇವಲ ನಾಲ್ಕು ಗೋಲುಗಳು. ಲಾಜ್ಲೋ ಅವರು ತಂಡ ಈ ರೀತಿಯ ತಪ್ಪಿನ ಗುರಿಯನ್ನು ಕೈ ಬಿಟ್ಟು ಗೋಲು ಗಳಿಸುವ ಕಡೆಗೆ ಗಮನ ಹರಿಸಬೇಕು ಎಂದಿದ್ದಾರೆ.
"ನಮ್ಮ ಫಾರ್ವರ್ಡ್ ಆಟಗಾರರು ಅವಕಾಶ ಸಿಕ್ಕಲ್ಲೆಲ್ಲ ಗೋಲು ಗಳಿಸಬೇಕು. ಅದು ಪ್ರಮುಖವಾದ ಅಂಶ, ನಾವು ಹಲವಾರು ಅವಕಾಶಗಳನ್ನು ನಿರ್ಮಿಸಿದ್ದೇವೆ, ಆದರೆ ದುರಾದೃಷ್ಟವಶಾತ್ ಅದು ಗೋಲಾಗಿ ಪರಿವರ್ತನೆಗೊಂಡಿಲ್ಲ. ಅವರಿಗೆ ಅವಕಾಶ ಹೇಗೆ ನಿರ್ಮಿಸಬೇಕು ಎಂಬುದನ್ನು ನಾನು ಹೇಳಿಕೊಡಲಾರೆ, ಆದರೆ ಚೆಂಡನ್ನು ನೆಟ್ ಗೆ ತಲುಪಿಸುವುದು ಅವರ ಜವಾಬ್ದಾರಿ. ನಾಳೆಯ ಪಂದ್ಯವೂ ಅದೇ ರೀತಿಯದ್ದು, ನಾವು ನಾಳೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ನಮ್ಮಲ್ಲಿ ಏಕಾಗ್ರತೆ ಬೇಕು, ಗೋಲು ಗಳಿಸುವ ಹಸಿವು ಬೇಕು," ಎಂದು ಚೆನ್ನೈಯಿನ್ ಕೋಚ್ ಹೇಳಿದರು.
ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈಯಿನ್ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿತ್ತು. ಆದರೆ ಅಂದು ಚೆನ್ನೈಯಿನ್ ತಂಡ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತ್ತು, ಮತ್ತು ಸಾಕಷ್ಟು ಅವಕಾಶಗಳನ್ನು ನಿರ್ಮಿಸಿತ್ತು. ಆದರೆ ಸ್ಕೋರ್ ಲೈನ್ ನಲ್ಲಿ ಮಾತ್ರ ವಿರುದ್ಧ ದಿಕ್ಕಿನಲ್ಲಿತ್ತು. ಸೋಮವಾರವೂ ತಮ್ಮ ತಂಡ ಅದೇ ರೀತಿಯ ಪ್ರದರ್ಶನ ತೋರಲಿದೆ ಎಂಬುದು ಲಾಜ್ಲೋ ಅವರ ಆಶಯ.
"ನಾವು ಅವರನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೆವು. ನಾವು ಮೊದಲ ಪಂದ್ಯದಲ್ಲಿ ತೋರಿದ ರಣತಂತ್ರವನ್ನು ನಾಳೆಯೂ ತೋರಬೇಕಾಗಿದೆ. ನಾವು ಯಶಸ್ಸಿನ ಸಮೀಪ ತಲುಪಿದ್ದೆವು, ಆದರೆ ಅದೃಷ್ಟ ಇರಲಿಲ್ಲ," ಎಂದರು. ಇದೇ ವೇಳೆ ಎಲ್ಲ 5 ಅಂಕಗಳಿಂದ ಸ್ಪಷ್ಟವಾಗಿ ಮೇಲುಗೈ ಸಾಧಿಸಿರುವ ಮುಂಬೈ ಅಗ್ರ ಸ್ಥಾನವನ್ನು ಗಳಿಸುವ ಫೇವರಿಟ್ ಎನಿಸಿದೆ. ಸರ್ಗಿಯೋ ಲೊಬೆರಾ ಅವರಿಗೆ ತಮ್ಮ ತಂಡದ ಶಕ್ತಿಯ ಬಗ್ಗೆ ಅರಿವಿದ್ದರೂ ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಗಬಹುದು ಎಂದು ತಂಡವನ್ನು ಎಚ್ಚರಿಸಿದ್ದಾರೆ.
"ಸಿಟಿ ಫುಟ್ಬಾಲ್ ಗ್ರೂಪ್ ಮತ್ತು ಮುಂಬೈ ಸಿಟಿ ತಂಡದೊಂದಿಗೆ ನಿತ್ಯವೂ ಕೆಲಸ ಮಾಡುತ್ತಿದ್ದೇನೆ. ನಮ್ಮ ಶೈಲಿಗೆ ಅನುಗುಣವಾಗಿರುವ ಆಟಗಾರರನ್ನು ಹೊಂದಿ ಪ್ರತಿ ಸಂದರ್ಭದಲ್ಲೂ ಗೆಲ್ಲುವ ತಂಡವನ್ನು ಕಟ್ಟುವುದು ನನ್ನ ಗುರಿಯಾಗಿದೆ. ನಾವು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ನನಗೆ ಸಂತಸವಾಗಿದೆ. ಋತುವಿನ ಕೊನೆಯಲ್ಲಿ ಇದನ್ನು ಕಾಯ್ದುಕೊಳ್ಳುವುದು ಪ್ರಮುಖವಾಗಿದೆ. ನಾವು ಉತ್ತಮವಾಗಿಯೇ ಆಡುತ್ತಿದ್ದೇವೆ, ನಮ್ಮ ತಂಡ ಉತ್ತಮ ಅಂಕಿಅಂಶವನ್ನು ಹೊಂದಿದೆ. ಉತ್ತಮ ನಂಬರ್ ಇದೆ. ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ, ಮುಂದಿನ ಏಳು ದಿನಗಳಲ್ಲಿ ಏನುಬೇಕಾದರೂ ಆಗಬಹದು. 10 ದಿನಗಳಲ್ಲಿ 3 ಪಂದ್ಯಗಳಿವೆ, ಅಂಕಗಳನ್ನು ಕಳೆದುಕೊಳ್ಳಲೂಬಹುದು, ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ," ಎಂದು ಮುಂಬೈ ಸಿಟಿ ಕೋಚ್ ಹೇಳಿದರು.