
ಗೋವಾ, ಜನವರಿ 10: ಕಳೆದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರವೇ ಗೆದ್ದಿರುವ ಚೆನ್ನೈಯಿನ್ ಎಫ್ಸಿ ತಂಡದ ಮುಂದಿನ ಹಾದಿ ಬಹಳಾ ಕಠಿಣವಾದಂತಿದೆ. ಅದರಲ್ಲಿ ತಂಡದ ನಾಯಕ ರಫಾಯೆಲ್ ಕ್ರಿವೆಲಾರೊ ಗಾಯದ ಸಮಸ್ಯೆ ಕಾರಣ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಹೀಗಿರುವಾಗ ಹೊಸ ಆರಂಭ ಕಂಡುಕೊಳ್ಳಲು ಕೋಚ್ ಸಾಬಾ ಲಾಝ್ಲೋಗೆ ಬೇರೆ ಮಾರ್ಗ ಕಾಣಿಸದಂತ್ತಾಗಿದೆ ಎನ್ನಬಹುದು.
ಹೀಗಾಗಿ ಭಾನುವಾರ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ತನ್ನ ಮೊದಲ ಗೆಲುವಿನ ರುಚಿ ನೋಡಿರುವ ಒಡಿಶಾ ಎಫ್ಸಿ ಎದುರು ಜಯ ದಕ್ಕಿಸಿಕೊಳ್ಳಲು ಚೆನ್ನೈಯಿನ್ ಎಫ್ಸಿ ತಂಡ ಹೊಸ ಸ್ಫೂರ್ತಿ ಕಂಡುಕೊಳ್ಳುವ ಅಗತ್ಯವಿದೆ.
ಅಂದಹಾಗೆ ಹೈದರಾಬಾದ್ ಎಫ್ಸಿ ವಿರುದ್ಧದ ಪಂದ್ಯದಲ್ಲಿ ಚೆನ್ನಯಿನ್ ಎಫ್ಸಿ ತಂಡದ ಪುಟಿದೇಳುವ ಆತ್ಮವಿಶ್ವಾಸವೆಲ್ಲಾ ಅಡಗಿ ಹೋಗಿತ್ತು. ಟೂರ್ನಿಯ ಆರಂಭಿಕ ದಿನಗಳಲ್ಲಿ ಚೆನ್ನೈ ತಂಡ ಪ್ರದರ್ಶಿಸಿದ್ದ ಗಮನಾರ್ಹ ಆಟ ಇದೀಗ ಮಂಕಾದಂತ್ತೆ ಕಾಣಿಸುತ್ತಿದ್ದು, ಹೈದರಾಬಾದ್ ಎದುರು 4 ಗೋಲ್ ಬಿಟ್ಟುಕೊಟ್ಟು ಕಂಗಾಲಾಯಿತು. ಚೆನ್ನೈ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲೂ ಇಷ್ಟೂ ಗೋಲ್ಗಳನ್ನು ಬಿಟ್ಟುಕೊಟ್ಟಿತ್ತು. ಈ ಮೂಲಕ ಗೋಲ್ ಸರಾಸರಿ ಹೊಂದಿಸಲು ಚೆನ್ನೈ ತಂಡ ಹೆಚ್ಚುವರಿ 8 ಗೋಲ್ಗಳನ್ನು ಗಳಿಸುವ ಅಗತ್ಯವಿದೆ.
"ಕಳೆದ ಪಂದ್ಯದಲ್ಲಿ ನಮ್ಮ ತಂಡ ನೀಡಿದ ಪ್ರದರ್ಶನ ಅತ್ಯಂತ ಹೀನಾಯವಾಗಿತ್ತು. ಇದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ತಂಡ ಸಾಕಷ್ಟು ತಪ್ಪುಗಳನ್ನು ಮಾಡಿತ್ತು. ಈ ಪಂದ್ಯದ ಬಗ್ಗೆ ನಮ್ಮ ತಂಡದ ಪ್ರತಿಯೊಬ್ಬರು ಕೂಡ ಆಲೋಚನೆ ಮಾಡುವ ಅಗತ್ಯವಿದೆ. ಪಂದ್ಯದ ಆರಂಭದಿಂದ ಅಂತ್ಯದ ವರೆಗೂ ನಮ್ಮ ತಂಡ ಸ್ಪರ್ಧೆಯಲ್ಲಿ ಇರಲಿಲ್ಲ. ಬದಲಾವಣೆಯ ಅಗತ್ಯವಿದೆ. ತಪ್ಪನ್ನು ಸರಿಪಡಿಸಿಕೊಂಡು ನಮ್ಮ ಸಹಜ ಸ್ಥಿತಿಗೆ ಮರಳುವ ಅವಶ್ಯಕತೆ ಇದೆ," ಎಂದಿದ್ದಾರೆ.
ಚೆನ್ನೈಯಿನ್ ಎಫ್ಸಿ ತಂಡದಲ್ಲಿ ಇರುವ ವಿದೇಶಿ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿಲ್ಲ. ಈ ಆಟಗಾರರು ಒಟ್ಟಾಗಿ ಕೇವಲ 3 ಗೋಲ್ ಮಾತ್ರವೇ ಗಳಿಸಿದ್ದಾರೆ. ಟೂರ್ನಿಯಲ್ಲಿ ಉಳಿದೆಲ್ಲಾ ತಂಡಗಳ ವಿದೇಶಿ ಆಟಗಾರರ ಸರಾಸರಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾದುದ್ದಾಗಿದೆ. ಹೀಗಾಗಿ ಒಡಿಶಾ ವಿರುದ್ಧದ ಪಂದ್ಯದಲ್ಲಿ ಚೆನ್ನೈಯಿನ್ ತಂಡದ ವಿದೇಶಿ ಆಟಗಾರರು ಮಿಂಚಲಿ ಎಂಬುದು ಕೋಚ್ ಲಾಝ್ಲೋ ಹೆಬ್ಬಯಕೆಯಾಗಿದೆ.
ಮತ್ತೊಂದೆಡೆ ಸ್ಟುವರ್ಟ್ ಬ್ಯಾಕ್ಸ್ಟರ್ ಮಾರ್ಗದರ್ಶನದ ಒಡಿಶಾ ಎಫ್ಸಿ ತಂಡ ಕೇರಳ ಬ್ಲಾಸ್ಟರ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಟೂರ್ನಿಯಲ್ಲಿ ತನ್ನ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಆದರೂ ಕೂಡ ಅಂಕಪಟ್ಟಿಯ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗಿಲ್ಲ. ಹೀಗಾಗಿ ಚೆನ್ನೈಯಿನ್ ಎಫ್ಸಿ ವಿರುದ್ಧವೂ ಅಂಥದ್ದೇ ಪ್ರದರ್ಶನ ನೀಡಿ ಜಯ ದಕ್ಕಿಸಿಕೊಳ್ಳುವಲ್ಲಿ ಒಡಿಶಾ ಯಶಸ್ವಿಯಾದರೆ, ಅಂಕಪಟ್ಟಿಯ ಕೊನೆಯ ಸ್ಥಾನದಿಂದ ಮೇಲೇರಿ 2 ಅಂಕಗಳ ಮುನ್ನಡೆಯೊಂದಿಗೆ 10ನೇ ಸ್ಥಾನ ಪಡೆಯುವ ಸಾಧ್ಯತೆ ಇದೆ.
"ತಂಡ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಲು ಬೇಕಿರುವ ಆತ್ಮವಿಶ್ವಾಸ ಕಂಡುಕೊಳ್ಳಲು ಮುಂದಿನ ಪಂದ್ಯದಲ್ಲಿ 3 ಅಂಕಗಳನ್ನು ಗಳಿಸುವ ಅಗತ್ಯವಿದೆ. ಫಲಿತಾಂಶಗಳು ನಮ್ಮ ವಿರುದ್ಧವಾಗಿ ಬಂದಿದ್ದರೂ ಕೂಡ ಆಟಗಾರರು ಆತ್ಮವಿಶ್ವಾಸ ಕಳೆದುಕೊಳ್ಳದೇ ಹೋದದ್ದು ಪ್ರಶಂಸಾರ್ಹ. ಆದರೆ ನಮಗೀಗ ಗೆಲುವಿನ ಹಾದಿ ಸಿಕ್ಕಿದ್ದು, ಇದನ್ನೇ ಕಾಯ್ದುಕೊಳ್ಳುವ ಅಗತ್ಯವಿದೆ," ಎಂದು ಒಡಿಶಾ ತಂಡದ ಕೋಚ್ ಹೇಳಿದ್ದಾರೆ.