
ಗೋವಾ, ಜನವರಿ 3: ಆಂಟೊನಿ ಪಿಲ್ಕಿಂಗ್ಟನ್ (12ನೇ ನಿಮಿಷ) , ಜಾಕ್ವಿಸ್ ಮಘೋಮಾ (39ನೇ ನಿಮಿಷ) ಮತ್ತು ಬ್ರೈಟ್ ಎನೋಬಾಖರೆ (88ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಒಡಿಶಾ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಯಶಸ್ಸು ಕಂಡ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ತನ್ನಮೊದಲ ಜಯ ದಾಖಲಿಸಿ ಸಂಭ್ರಮಿಸಿತು.
ನೈಜೀರಿಯಾ ಮೂಲದ ಆಟಗಾರ ಬ್ರೈಟ್ ಎನೊಬಾಖರೆ ಆಡಿದ ಮೊದಲ ಪಂದ್ಯದಲ್ಲೇ ಗೋಲು ಗಳಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪ್ರಥಮಾರ್ಧದಲ್ಲಿ ಈಸ್ಟ್ ಬೆಂಗಾಲ್ 2-0 ಅಂತರದಲ್ಲಿ ಮುನ್ನಡೆಕಾಯ್ದುಕೊಂಡಿತ್ತು. ಒಡಿಶಾ ಪರ ಡಿಗೋ ಮೌರಿಸಿಯೊ (90ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
2-0 ಮುನ್ನಡೆದ ಈಸ್ಟ್ ಬೆಂಗಾಲ್ : ಒಡಿಶಾ ವಿರುದ್ಧದ ಪ್ರಥಮಾರ್ಧದಲ್ಲಿ 2-0 ಗೋಲುಗಳಿಂದ ಮೇಲುಗೈ ಸಾಧಿಸಿದ ಎಸ್ ಸಿ ಈಸ್ಟ್ ಬೆಂಗಾಲ್ ನಿರೀಕ್ಷೆಯಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆಂಟೊನಿ ಪಿಲ್ಕಿಂಗ್ಟನ್ (12ನೇ ನಿಮಿಷ) ಹಾಗೂ ಜಾಕ್ವಿಸ್ ಮಘೋಮಾ (39ನೇ ನಿಮಿಷ) ಗಳಿಸಿದ ಗೋಲು ಈಸ್ಟ್ ಬೆಂಗಾಲ್ ತಂಡಕ್ಕೆ ಮೊದಲ ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಾಣ ಮಾಡಿತು. 12ನೇ ನಿಮಿಷದಲ್ಲಿ ಬಲಭಾಗದಿಂದ ಬಂದ ಪಾಸ್ ಗೋಲ್ ಬಾಕ್ಸ್ ವಲಯದಲ್ಲಿ ಪಿಲ್ಕಿಂಗ್ಟನ್ ಅವರ ನಿಯಂತ್ರಣಕ್ಕೆ ಸಿಕ್ಕಿತು.
ಹೆಡರ್ ಮೂಲಕ ದಾಖಲಾದ ಈ ಗೋಲು ಒಡಿಶಾ ತಂಡದ ಡಿಫೆನ್ಸ್ ವಿಭಾಗವನ್ನು ಕಂಗೆಡಿಸಿತು. 39ನೇ ನಿಮಿಷದಲ್ಲಿ ಮಾಟ್ಟಿ ಸ್ಟನ್ಮನ್ ನೀಡಿದ ಪಾಸ್ ಮೂಲಕ ಒಡಿಶಾದ ಡಿಫೆನ್ಸ್ ವಿಭಾಗವನ್ನು ಒಂಟಿಯಾಗಿಯೇ ಭೇದಿಸಿದ ಮಘೋಮಾ ತಂಡದ ಜಯಕ್ಕೆ ಅಗತ್ಯವಿರುವ ಎರಡನೇ ಗೋಲು ಗಳಿಸಿದರು. ಇದರೊಂದಿಗೆ ಈಸ್ಟ್ ಬೆಂಗಾಲ್ ಎಸ್ ಸಿ ಪ್ರಥಮಾರ್ಧದಲ್ಲಿ ಮೊದಲ ಬಾರಿಗೆ 2-0 ಮುನ್ನಡೆ ಕಂಡಿತು.
ಕೆಳಕ್ರಮಾಂಕದ ಹೋರಾಟ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸೋಲಿನ ಮೇಲೆ ಸೋಲುಂಡು ಕಂಗಾಲಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಹೊಂದಿರುವ ಎಸ್ ಸಿ ಈಸ್ಟ್ ಬೆಂಗಾಲ್ ಹಾಗೂ ಒಡಿಶಾ ಎಫ್ ಸಿ ತಂಡಗಳು ಭಾನುವಾರದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು. ಎರಡೂ ತಂಡಗಳು ಋತುವಿನ ಮೊದಲ ಜಯದ ನಿರೀಕ್ಷೆಯಲ್ಲಿವೆ. ಈಸ್ಟ್ ಬೆಂಗಾಲ್ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಆದರೆ ಜಯವನ್ನೂ ಕಾಣದೆ ಡ್ರಾದಲ್ಲಿ ಪಂದ್ಯ ಅಂತ್ಯಗೊಂಡಿತ್ತು. ರಾಬಿ ಫ್ಲವರ್ಸ್ ಪಡೆ ಕಳೆದ ಮೂರು ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿತ್ತು. ಮಿಡ್ ಫೀಲ್ಡರ್ ಮಾಟ್ಟಿ ಸ್ಟೈನ್ಮನ್ ಹಾಗೂ ಜಾಕ್ವಿಸ್ ಮಘೋಮಾ ಎಸ್ ಸಿ ಇಬಿ ಪರ ತಲಾ ಎರಡು ಗೋಲುಗಳನ್ನು ಗಳಿಸಿದ್ದಾರೆ.
ನೈಜೀರಿಯಾದ ಯುವ ಆಟಗಾರ ಬ್ರೈಟ್ ಎನೋಬಾಖರೆ ಅವರನ್ನು ಸೇರಿಸಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಒಡಿಶಾ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಒಡಿಶಾ ತಂಡ ಕೂಡ ಐದು ಗೋಲುಗಳನ್ನು ಗಳಿಸಿದೆ. ಎಲ್ಲ ಗೋಲುಗಳನ್ನೂ ವಿದೇಶಿ ಆಟಗಾರರು ಗಳಿಸಿದ್ದಾರೆ. ಡಿಗೋ ಮೌರಿಸಿಯೋ ಮೂರು ಗೋಲುಗಳನ್ನು ಗಳಿಸಿ ತಂಡದ ಗೌರವ ಕಾಪಾಡಿದ್ದಾರೆ. ಬ್ರೆಜಿಲ್ ಮೂಲದ ಆಟಗಾರ ಮಾರ್ಸಿಲೊ ಪೆರೆರಾ ತಮ್ಮ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಗಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಈ ಪಂದ್ಯದಲ್ಲಾದರೂ ತಮ್ಮ ತಂಡ ಜಯದ ಖಾತೆ ತೆರೆಯಬಹುದು ಎಂಬುದು ಸ್ಟುವರ್ಟ್ ಬಾಕ್ಸ್ಟರ್ ಅವರ ಆಶಯವಾಗಿದೆ.