
ಗೋವಾ, ಡಿಸೆಂಬರ್ 11: ಎಟಿಕೆ ಮೋಹನ್ ಬಾಗನ್ ಪರ ಮನ್ವೀರ್ ಸಿಂಗ್ (54ನೇ ನಿಮಿಷ) ಹಾಗೂ ಹೈದರಾಬಾದ್ ಪರ ಪೆನಾಲ್ಟಿ ಮೂಲಕ ವಿಕ್ಟರ್ ಬ್ರೂನೊ (65ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 24ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ಈ ಫಲಿತಾಂಶದಿಂದ ಹೈದರಾಬಾದ್ 5ನೇ ಸ್ಥಾನಕ್ಕೇರಿದರೆ ಎಟಿಕೆಎಂಬಿ ಎರಡನೇ ಸ್ಥಾನಕ್ಕೆ ಜಿಗಿಯಿತು.
ಗೋಲಿಲ್ಲದ ಪ್ರಥಮಾರ್ಧ: ಬಹಳ ನಿರೀಕ್ಷೆ ಮೂಡಿಸಿದ್ದ ಎಟಿಕೆ ಮೋಹನ್ ಬಾಗನ್ ಹಾಗೂ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಇತ್ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಹೈದರಾಬಾದ್ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಸಿತ್ತು. ಇತ್ತಂಡಗಳಿಗೂ ಸಮಾನ ಅವಕಾಶ ಸಿಕ್ಕಿತ್ತು. ಎಟಿಕೆ ಗೋಲು ಗಳಿಸಲು ಹತ್ತಿರವಾಗಿದ್ದರೂ ಅಂತಿಮ ಕ್ಷಣದಲ್ಲಿ ವಿಫಲವಾಯಿತು. ಹೈದರಾಬಾದ್ ನ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು.
ಆಟದ ಬಿರುಸಿನಲ್ಲಿ ಇತ್ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದ ಕ್ಷಣಗಳು ಕಂಡುಬಂದವು. ಪ್ರಥಮಾರ್ಧ ಮುಗಿಯುತ್ತಿದ್ದಂತೆ ಎಟಿಕೆ ಮೋಹನ್ ಬಾಗನ್ ನ ಗೋಲ್ ಕೀಪರ್ ಮತ್ತು ಹೈದರಾಬಾದ್ ನ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ರೆಫರಿ ಹಾಗು ಕೋಚ್ ಗಳ ಪ್ರವೇಶದೊಂದಿಗೆ ಪರಿಸ್ಥಿತಿ ಶಾಂತವಾಯಿತು. ದ್ವಿತಿಯಾರ್ಧದ ಆರಂಭದಲ್ಲೇ ಎಟಿಕೆ ಮೋಹನ್ ಬಾಗನ್ ಬದಲಾವಣೆ ಮಾಡಿ ಬ್ರಾಡೆನ್ ಇನ್ಮಾನ್ ಬದಲಿಗೆ ಡೇವಿಡ್ ವಿಲಿಯಮ್ಸ್ ಅವರನ್ನು ಅಂಗಣಕ್ಕಿಳಿಸಿತು.
ಕುತೂಹಲ ಕಾದಿದೆ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವ ಎಟಿಕೆ ಮೋಹನ್ ಬಾಗನ್ ಮತ್ತು ಹೈದರಾಬಾದ್ ಎಫ್ ಸಿ ತಂಡಗಳು ಇದುವರೆಗೂ ತೋರಿರುವ ಪ್ರದರ್ಶನವನ್ನು ಗಮನಿಸಿದಾಗ ಪಂದ್ಯ ಕತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಸತತ ಜಯದೊಂದಿಗೆ ಮುನ್ನುಗ್ಗುತ್ತಿದ್ದ ಮರಿನರ್ಸ್ ಪಡೆ ಜೆಮ್ಷೆಡ್ಪುರ ವಿರುದ್ಧ ಸೋಲನುಭವಿಸಿತ್ತು. ಆದರೆ ಆ ಸೋಲಿನ ಬಗ್ಗೆ ಹೆಚ್ಚಿನ ಗಮನ ಹರಿಸದೆ ತಂಡ ಮುಂದಿನ ಹೋರಾಟದ ಬಗ್ಗೆ ಯೋಚಿಸಿದೆ. ಬಲಿಷ್ಠ ಆಟಗರರನ್ನು ಹೊಂದಿರುವ ಎಟಿಕೆ ಮೋಹನ್ ಬಾಗನ್, ಮತ್ತೆ ಜಯದ ಲಯಕ್ಕೆ ಮರಳುವ ಆತ್ಮವಿಶ್ವಾಸವನ್ನು ಹೊಂದಿದೆ. ರಾಯ್ ಕೃಷ್ಣ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ, ಎಡು ಗಾರ್ಸಿಯಾ, ಮನ್ವೀರ್ ಸಿಂಗ್ ಮತ್ತು ಡೇವಿಡ್ ವಿಲಿಯಮ್ಸ್ ಅವರು ಯಾರ್ ಕೃಷ್ಣಗೆ ಉತ್ತಮ ರೀತಿಯಲ್ಲಿ ನೆರವಾಗುತ್ತಿದ್ದಾರೆ.
ತಿರಿ, ಸಂದೇಶ್ ಜಿಂಗಾನ್ ಮತ್ತು ಪ್ರೀತಮ್ ಕೊತಾಲ್ ಅವರಿಂದ ಕೂಡಿದ ಡಿಫೆನ್ಸ್ ವಿಭಾಗ ಕೋಲ್ಕತಾ ಪಡೆಯ ಭದ್ರ ಕೋಟೆ ಎನಿಸಿದೆ. ಹೈದರಾಬಾದ್ ಕೂಡ ಡಿಫೆನ್ಸ್ ವಿಭಾಗದಲ್ಲಿ ಬಲಿಷ್ಠವೆನಿಸಿದೆ. ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಒಂದು ಗೋಲನ್ನು ನೀಡಿರುವ ಹೈದರಾಬಾದ್ ಗೆ ಇಂದಿನ ಪಂದ್ಯ ನಿಜವಾಗಿಯೂ ದೊಡ್ಡ ಪರೀಕ್ಷೆಯಾಗಿದೆ. ಮೆನ್ವೆಲ್ ಮಾರ್ಕ್ವೆಜ್ ಪಡೆ ಹೆಚ್ಚಾಗಿ ಅರಿದಾನೆ ಸ್ಯಾಂಟನಾ ಅವರ ಮೇಲೆ ಆಧರಿಸಿದೆ. ಗಾಯದ ಕಾರಣ ಲೂಯಿಸ್ ಸಾಸ್ಟರ್ ಮತ್ತು ಜೊಯೆಲ್ ಚೈನಿಸ್ ಅವರ ಸೇವೆಯಿಂದ ತಂಡ ವಂಚಿತವಾಗಲಿದೆ. ಆದರೆ ಲಿಸ್ಟನ್ ಕೊಲ್ಯಾಕೊ ಮತ್ತು ಹಾಲಿಚರಣ್ ನಾರ್ಜೆ ಅವರ ಅನುಪಸ್ಥಿತಿಯನ್ನು ತುಂಬಲಿದ್ದಾರೆ.