
ಗೋವಾ, ಡಿಸೆಂಬರ್ 10: ಶುಕ್ರವಾರ ಫಟೋರ್ಡಾದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ತಂಡಗಳಾದ ಎಟಿಕೆ ಮೋಹನ್ ಬಾಗನ್ ಮತ್ತು ಹೈದರಾಬಾದ್ ಎಫ್ ಸಿ ತಂಡಗಳು ಮುಖಾಮುಖಿಯಾಗಲಿವೆ.
ಕೇವಲ ಒಬ್ಬ ಆಟಗಾರ ಗಳಿಸಿದ ಗೋಲುಗಳಿಂದ ಯಶಸ್ಸು ಕಂಡಿರುವ (ಎಟಿಕೆಎಂಬಿ ಪರ ರಾಯ್ ಕೃಷ್ಣ ಮತ್ತು ಹೈದರಾಬಾದ್ ಪರ ಅರಿದಾನೆ ಸ್ಯಾಂಟನಾ) ಇತ್ತಂಡಗಳು ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿವೆ (ಕಡಿಮೆ ಗೋಲು ನೀಡಿಕೆಯಲ್ಲಿ ಇತ್ತಂಡಗಳು ಅಗ್ರಸ್ಥಾನದಲ್ಲಿವೆ), ಎರಡೂ ತಂಡಗಳು ಸಮಾನ ಶಕ್ತಿಯನ್ನು ಹೊಂದಿವೆ.
ಐಎಸ್ ಎಲ್ 7ನೇ ಆವೃತ್ತಿಯಲ್ಲಿ ಎಟಿಕೆ ಮೋಹನ್ ಬಾಗನ್ 5 ಗೋಲುಗಳನ್ನು ಗಳಿಸಿದ್ದು. ಅದರಲ್ಲಿ 4 ಗೋಲುಗಳನ್ನು ಕೃಷ್ಣ ಗಳಿಸಿದ್ದಾರೆ. ಎಟಿಕೆಎಂಬಿ ಕೋಚ್ ಅಂಟೋನಿಯೊ ಹಬ್ಬಾಸ್ ಗೋಲು ಗಳಿಕೆಯಲ್ಲಿ ಇನ್ನು ಹೆಚ್ಚಿನ ಆಟಗಾರರು ಕೊಡುಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಸೋಲು ಅನುಭವಿಸಿದ ನಂತರ ಇತರ ಆಟಗಾರರಿಗೆ ಈ ಕರೆ ನೀಡಿದ್ದಾರೆ. "ಎಲ್ಲ ಆಟಗಾರರೂ ಒಂದಾಗಬೇಕು. ಎಲ್ಲ ಆಟಗಾರರೂ ಗೋಲು ಗಳಿಸಬೇಕು. ಆಟಗಾರರು ಉತ್ತಮ ರೀತಿಯಲ್ಲಿ ಸಂಘಟಿತರಾದಾಗ ಹೆಚ್ಚುಗೋಲು ಗಳಿಸಬಹುದು," ಎಂದಿದ್ದಾರೆ.
ಈ ಋತುವಿನಲ್ಲಿ ಓಪನ್ ಪ್ಲೇ ಮೂಲಕ ಗೋಲು ನೀಡದಿರುವ ಏಕೈಕ ತಂಡವೆಂದರೆ ಅದು ಎಟಿಕೆಎಂಬಿ. ಸೆಟ್ -ಪೀಸ್ ಮೂಲಕ ಹೈದರಾಬಾದ್ ಗೆ ಎರಡು ಗೋಲು ಗಳಿಸುವ ಅವಕಾಶ ಮಾಡಿಕೊಟ್ಟಿದ್ದು ಸೋಲಿಗೆ ಕಾರಣವಾಯಿತು. ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ತಮ್ಮ ತಂಡ ಹಿಂದಿನ ಪ್ರಮಾದಗಳನ್ನು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ."ಕಳೆದ ಋತುವಿನಲ್ಲಿ ನಾವು ಸೆಟ್-ಪೀಸ್ ಮೂಲಕ ಪ್ರತಿಯೊಂದು ಪಂದ್ಯದಲ್ಲೂ ಒಂದು ಗೋಲನ್ನು ಎದುರಾಳಿ ತಂಡಕ್ಕೆ ನೀಡಿದ್ದೇವೆ, ಈಗ ನಾವು ಒಂದು ಪಂದ್ಯದಲ್ಲಿ ಎರಡು ಗೋಲು ನೀಡಿದ್ದೇವೆ. ನಾವು ಈ ವಿಭಾಗದಲ್ಲಿ ಸುಧಾರಣೆ ಕಂಡಿದ್ದೇವೆ ಎಂಬ ನಂಬಿಕೆ ಇದೆ. ಎದುರಾಳಿ ತಂಡದಲ್ಲಿ ಈ ಪರಿಸ್ಥಿತಿಯನ್ನು ಎದುರಿಸಲು ಉತ್ತಮ ಆಟಗಾರರಿದ್ದಾರೆ. ನನ್ನ ತಂಡದ ಬಗ್ಗೆ ನನಗೆ ನಂಬಿಕೆ ಇದೆ, ಈ ರೀತಿಯ ಪರಿಸ್ಥಿತಿ ಪುನರಾವರ್ತನೆ ಆಗುವುದಿಲ್ಲ ಎಂಬ ನಂಬಿಕೆ ನನಗಿದೆ," ಎಂದರು.
ಇದೇ ವೇಳೆ ಹೈದರಾಬಾದ್ ಶಿಬಿರದಲ್ಲೂ ಇದೇ ರೀತಿಯ ಕತೆ. ಡಿಫೆನ್ಸ್ ವಿಭಾಗದ ಮೂಲಕ ತಂಡ ಇದುವರೆಗೂ ಒಂದು ಗೋಲನ್ನು ನೀಡಿದೆ. ಅದೇ ರೀತಿ ಇದುವರೆಗೂ ಹೈದರಾಬಾದ್ ಸೋಲು ಕಂಡಿರಲಿಲ್ಲ. ಆದರೆ ತಂಡದ ಆಕ್ರಮಣಕಾರಿ ಆಟದಲ್ಲಿ ಅಷ್ಟು ಬಲವಿಲ್ಲ. ಅರಿದಾನೆ ಸ್ಯಾಂಟನಾ ತಂಡದ ಪರ ಎರಡು ಗೋಲುಗಳನ್ನು ಗಳಿಸಿದ್ದಾರೆ.
"ನಿಜ ನಾವು ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿ ಕಾರ್ಯವನಿರ್ವಹಿಸುತ್ತಿದ್ದೇವೆ. ಆದರೆ ನಾವು ಇನ್ನೂ ಹೆಚ್ಚಿನ ಗೋಲು ಗಳಿಸಬೇಕಾಗಿದೆ. ಅದು ನಮ್ಮ ಗುರಿ. ಎಟಿಕೆಎಂಬಿ ತಂಡ ಪ್ರತಿಯೊಂದು ತಂಡಕ್ಕೂ ಸವಾಲಿನ ತಂಡವಾಗಿದೆ, ಏಕೆಂದರೆ ಆ ತಂಡ ಪ್ರತಿಯೊಂದು ವಿಭಾಗದಲ್ಲೂ ಬಲಿಷ್ಠವೆನಿಸಿದೆ. ನಮಗೆ ಮುಖ್ಯವಾದುದು ಏನೆಂದರೆ ನಾವು ಯಶಸ್ಸು ಕಾಣಲು ಯಾವ ಉತ್ತಮ ಅಂಶಗಳನ್ನು ಮಾಡಬೇಕೊ ಅದನ್ನು ಮಾಡಬೇಕು," ಎಂದು ಹೈದರಾಬಾದ್ ನ ಸಹಾಯಕ ಕೋಚ್ ಐಆಂಗ್ಬೊಯ್ ಸಿಂಗ್ಟೊ ಹೇಳಿದ್ದಾರೆ.
"ಎಟಿಕೆಎಂಬಿ ತಂಡದಲ್ಲಿ ದೌರ್ಬಲ್ಯ ಎಂಬುದು ವಿರಳ, ಅವರ ದೌರ್ಬಲ್ಯಗಳನ್ನು ಬೆಳಕಿಗೆ ತರುವ ಯೋಜನೆ ನಮ್ಮಲ್ಲಿದೆ. ಪ್ರತಿಯೊಬ್ಬ ಆಟಗಾರರೂ ನೂರು ಪ್ರತಿಶತ ಪ್ರದರ್ಶನ ತೋರಿದರೆ ಸಾಕು. ನಿಮ್ಮಲ್ಲಿರುವ ಉತ್ತಮವಾದುದನ್ನು ನೀಡಿಸರೆ ಉತ್ತಮ ಫಲಿತಾಂಶ ಬರುತ್ತದೆ," ಎಂದರು.