
ಶುಕ್ರವಾರ ನಡೆದ ಇಂಡಿಯನ್ ಸೂಪರ್ ಲೀಗ್ನ ಎಲಿಮಿನೇಷನ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ಸಿ ಸೆಮಿಫೈನಲ್ ಪ್ರವೇಶಿಸಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಷನ್ ಪಂದ್ಯದಲ್ಲಿ ಬೆಂಗಳೂರು ಕೇರಳ ವಿರುದ್ಧ ಅಜೇಯ ಓಟವನ್ನು ಮುಂದುವರೆಸಿತು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ರೋಚಕ ಕಾಳಗ ನಡೆಯಿತು.
ಪಂದ್ಯದ ನಿಗದಿತ ಸಮಯದಲ್ಲಿ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ, ಹೆಚ್ಚುವರಿ 30 ನಿಮಿಷಗಳಿಗೆ ಆಟವನ್ನು ವಿಸ್ತರಿಸಲಾಯಿತು. ಹೆಚ್ಚುವರಿ ಆಟದ ಸಮಯದಲ್ಲಿ ಭಾರತದ ಶ್ರೇಷ್ಠ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ಬೆಂಗಳೂರು ಎಫ್ಸಿಗೆ ಗೋಲು ಗಳಿಸಿಕೊಟ್ಟರು.
ಆದರೆ, ಸುನಿಲ್ ಛೆಟ್ರಿ ಗೋಲು ಗಳಿಸಿದ್ದು ವಿವಾದಕ್ಕೆ ಕಾರಣವಾಯಿತು. ಕೇರಳ ಬ್ಲಾಸ್ಟರ್ಸ್ ಮೈದಾನದಿಂದಲೇ ಹೊರನಡೆದ ಘಟನೆ ನಡೆಯಿತು. ಬೆಂಗಳೂರು ಎಫ್ಸಿ ಹೊಡೆದ ಫ್ರೀ ಕಿಕ್ ಕಾನೂನು ಬಾಹಿರವಾದದ್ದು ಎಂದು ಕೇರಳ ತಂಡದ ಆಟಗಾರರು ವಾದಿಸಿದರು.
ಕೇರಳ ಬ್ಲಾಸ್ಟರ್ಸ್ ತಂಡದ ಮ್ಯಾನೇಜರ್ ಇವಾನ್ ವುಕೊಮಾನೋವಿಕ್ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ತಂಡದ ಆಟಗಾರರನ್ನು ಮೈದಾನದಿಂದ ಹೊರಗೆ ಕರೆದರು, ಪಂದ್ಯದ ನಡುವಿನಲ್ಲೇ ಕೇರಳ ಆಟಗಾರರು ಮೈದಾನದಿಂದ ಡ್ರೆಸ್ಸಿಂಗ್ ರೂಮ್ಗೆ ಹೋದರು.
ನಂತರ ಪಂದ್ಯವನ್ನು ಮುಕ್ತಾಯವಾಗಿದೆ ಎಂದು ತಿಳಿಸಲಾಯಿತು. ಬೆಂಗಳೂರು ಎಫ್ಸಿ ತಂಡವನ್ನು ಜಯಶಾಲಿ ಎಂದು ಘೋಷಿಸಿದರು. ಈ ಗೆಲುವಿನೊಂದಿ ಬೆಂಗಳೂರು ಸೆಮಿಫೈನಲ್ಗೆ ಪ್ರವೇಶಿಸಿತು.

ಯಾಕೆ ವಿವಾದ? ಆಗಿದ್ದಾದರೂ ಏನು?
ಹೆಚ್ಚುವರಿ ಆಟದ ಸಮಯದಲ್ಲಿ ಬೆಂಗಳೂರು ಎಫ್ಸಿ ತಂಡಕ್ಕೆ ಫ್ರೀ ಕಿಕ್ ಅವಕಾಶ ಸಿಕ್ಕಿತ್ತು, ಈ ಸಂದರ್ಭದಲ್ಲಿ ಸುನಿಲ್ ಛೆಟ್ರಿ ಫ್ರೀ ಕಿಕ್ ಹೊಡೆಯಲು ಬಂದರು. ಛೆಟ್ರಿ ಬಲ ಭಾಗದಿಂದ ಚೆಂಡನ್ನು ಹೊಡೆದು ಗೋಲು ಪೆಟ್ಟಿಗೆಗೆ ನುಗ್ಗಿಸುವಲ್ಲಿ ಯಶಸ್ವಿಯಾದರು. ಗೋಲು ಗಳಿಸುತ್ತಿದ್ದಂತೆ ಕೇರಳ ಬ್ಲಾಸ್ಟರ್ಸ್ ಆಫ್ ಸೈಡ್ ಎಂದು ಕೂಗಿದರು.
ತಾವು ರಕ್ಷಣಾ ಗೋಡೆಯನ್ನು ಇನ್ನೂ ನಿರ್ಮಿಸುತ್ತಿದ್ದಾಗಲೇ ಛೆಟ್ರಿ ಗೋಲು ಹೊಡೆದಿದ್ದಾರೆ, ಇದನ್ನು ಅಮಾನ್ಯ ಮಾಡಬೇಕು ಎಂದು ಅವರು ವಾದಿಸಿದರು. ಆದರೆ, ರೆಫರಿ ಸೂಚನೆ ನೀಡಿದ ನಂತರವೇ ಗೋಲು ಗಳಿಸಿದ್ದು ಎಂದು ಸುನಿಲ್ ಛೆಟ್ರಿ ಹೇಳಿದರು.
ರೆಫರಿ ಕ್ರಿಸ್ಟಲ್ ಜಾನ್ ಗೋಲು ನ್ಯಾಯಯುತವಾಗಿದೆ ಎಂದು ಹೇಳಿದರು. ಕೇರಳ ಬ್ಲಾಸ್ಟರ್ಸ್ ತಂಡದ ಮ್ಯಾನೇಜರ್ ಇವಾನ್ ವುಕೊಮಾನೋವಿಕ್ ಕೋಪದಿಂದ ಮೈದಾನಕ್ಕೆ ಬಂದು ಜಾನ್ಗೆ ಕಿರುಚಲು ಪ್ರಾರಂಭಿಸಿದರು. ರೆಫರಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿದ ನಂತರ ಅವನು ತನ್ನ ತಂಡಕ್ಕೆ ಮೈದಾನದಿಂದ ಹೊರನಡೆಯಲು ಹೇಳಿದರು.

ಸೆಮಿಫೈನಲ್ನಲ್ಲಿ ಮುಂಬೈ ಎದುರಾಳಿ
ನಿಗದಿತ ಸಮಯದ ನಂತರ, ಪಂದ್ಯವನ್ನು ಮುಕ್ತಾಯಗೊಳಿಸಲಾಯಿತು ಮತ್ತು ಫ್ರೀ ಕಿಕ್ನಿಂದ 1-0 ಮುನ್ನಡೆ ಸಾಧಿಸಿದ್ದ ಬೆಂಗಳೂರು ತಂಡವನ್ನು ಜಯಶಾಲಿ ಎಂದು ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಕೇರಳ ಬ್ಲಾಸ್ಟರ್ಸ್ನಿಂದ ಅಧಿಕೃತ ಹೇಳಿಕೆಯಾಗಲಿ ಅಥವಾ ಎಐಎಫ್ಎಫ್ ಹೇಳಿಕೆಯಾಗಲಿ ಬಿಡುಗಡೆಯಾಗಿಲ್ಲ. ಅಧಿಕೃತ ಪ್ರಸಾರಕರು ಮತ್ತು ಆಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಛೆಟ್ರಿ ಹೊಡೆದ ಗೋಲು ನಿಯಮದ ಪ್ರಕಾರವೇ ಇದೆ ಎಂದು ಹೇಳಿದರು.
ಬೆಂಗಳೂರು ಎಫ್ಸಿ ತಂಡ ಐಎಸ್ಎಲ್ ಪ್ಲೇಆಫ್ನ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಮಾರ್ಚ್ 7 ಮತ್ತು 12 ರಂದು, ಅವರು ಮುಂಬೈ ಸಿಟಿ ಎಫ್ಸಿ ವಿರುದ್ಧ ಸೆಮಿಫೈನಲ್ನಲ್ಲಿ ಆಡಲಿದ್ದಾರೆ.