ಬೆಂಗಳೂರು, ಜನವರಿ 21: ರಸ್ತೆ ಅಪಘಾತದಲ್ಲಿ ರಾಜ್ಯಮಟ್ಟದ ಯುವ ಫುಟ್ಬಾಲ್ ಆಟಗಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಕೆ.ಆರ್ ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಮೂರ್ತಿ ನಗರ ಮೇಲ್ಸೇತುವೆ ಬಳಿ ನಡೆದಿದೆ.
ಬಾಬುಸಪಾಳ್ಯ ನಿವಾಸಿ ಮೊನೀಶ್. ಕೆ (27) ಮೃತ ಯುವ ಫುಟ್ಬಾಲ್ ಆಟಗಾರನಾಗಿದ್ದಾನೆ. ಶನಿವಾರ ತಡರಾತ್ರಿ 2 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮೊನೀಶ್ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ, ಜನವರಿ 21ರಂದು ಸಾವನ್ನಪ್ಪಿದ್ದಾನೆ.

ಪರಿಕ್ರಮ ಎಫ್ಸಿ. ಡೆಕ್ಕನ್ ಎಫ್ಸಿ, ಯಂಗ್ ಚಾಲೆಂಜರ್ಸ್ ಎಫ್ಸಿ ಸೇರಿದಂತೆ ವಿವಿಧ ಫುಟ್ಬಾಲ್ ಕ್ಲಬ್ಗಳ ಪರ ಮೈದಾನಕ್ಕಿಳಿದಿದ್ದ ಮೊನೀಶ್, ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) - ಡಿ ನಿಂದ 2019ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು.
ಪ್ರಸ್ತುತ ಬೆಂಗಳೂರು ಡಿಸ್ಟ್ರಿಕ್ಟ್ ಫುಟ್ಬಾಲ್ ಅಸೋಸಿಯೇಷನ್ (ಬಿಡಿಎಫ್ಎ) ಎ ಡಿವಿಷನ್ ಲೀಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರು ಈಗಲ್ಸ್ ಎಫ್ಸಿ ಪರ ಆಡುತ್ತಿದ್ದರು.
ಯುವ ಫುಟ್ಬಾಲ್ ಆಟಗಾರ ಮೊನೀಶ್. ಕೆ ಅವರ ಅಕಾಲಿಕ ನಿಧನದ ಕುರಿತು ಸಂತಾಪ ವ್ಯಕ್ತಪಡಿಸಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಂಗಳವಾರ ನಡೆಯಲಿರುವ ಬೆಂಗಳೂರು ಈಗಲ್ಸ್ ಎಫ್ಸಿ ಹಾಗೂ ಬ್ಲಿಟ್ಸ್ ಎಫ್ಸಿ ನಡುವಿನ ಪಂದ್ಯವನ್ನು ಮುಂದೂಡಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ
ರಾಜ್ಯಮಟ್ಟದ ಫುಟ್ಬಾಲ್ ಆಟಗಾರ ಮೊನೀಶ್. ಕೆ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
"ರಾಜ್ಯದ ಖ್ಯಾತ ಫುಟ್ಬಾಲ್ ಆಟಗಾರ ಮೊನೀಶ್. ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ".
"ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.