
ಒಡಿಶಾದಲ್ಲಿ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಭಾರೀ ಅನಾಹುತ ನಡೆದಿದೆ. ಸುಂದರ್ಗರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಮಿಂಚಿನ ದಾಳಿಗೆ ಕನಿಷ್ಠ ಇಬ್ಬರು ಬಲಿಯಾಗಿದ್ದು 21 ಜನರು ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಒಡಿಶಾದ ರಾಜಧಾನಿ ಭುವನೇಶ್ವರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ನುಗಾಂವ್ ಬ್ಲಾಕ್ನ ಬನೆಲಾಟಾ ಎಂಬಲ್ಲಿ ಸ್ಥಳೀಯ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಒಬ್ಬರು ಫುಟ್ಬಾಲ್ ಆಟಗಾರ ಎನ್ನಲಾಗಿದ್ದು ಗಾಯಗೊಂಡವರಲ್ಲಿ ಹೆಚ್ಚಿನವರು ಪ್ರೇಕ್ಷಕರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಈ ದುರ್ಘಟನೆ ನಡೆದಿದೆ.
ಮೋಡ ಕವಿದ ವಾತಾವರಣವಿದ್ದರೂ ಆ ಪ್ರದೇಶದಲ್ಲಿ ಮಳೆಯಾಗಿರಲಿಲ್ಲ ಆದರೆ ದಿಢೀರ್ ಆಗಿ ಭಾರೀ ಪ್ರಮಾಣದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಈ ದುರಂತ ನಡೆದಿದೆ. ಇಬ್ಬರು ವ್ಯಕ್ತಿಗಳನ್ನು ಹತಿಬರಿ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್ಸಿ) ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಗಾಯಗೊಂಡ 17 ಜನರನ್ನು ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ನಾಲ್ವರು ಹತಿಬರಿ ಸಿಎಚ್ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆ ಎರಡು ದಿನಗಳ ಕಾಲ ಒಡಿಶಾ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕಟಕ್, ಖುರ್ದಾ, ಪುರಿ, ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ವಿಜ್ಞಾನಿ ಉಮಾಶಂಕರ್ ದಾಶ್ ಮಾಹಿತಿ ನೀಡಿದ್ದಾರೆ.
ಬಾಲಸೋರ್, ಭದ್ರಕ್, ಜಾಜ್ಪುರ್, ಕೇಂದ್ರಪಾರಾ, ಕಟಕ್, ಖುರ್ದಾ, ಜಗತ್ಸಿಂಗ್ಪುರ್, ಪುರಿ, ನಯಾಗಢ, ಗಂಜಾಂ, ಗಜಪತಿ, ಧೆಂಕನಲ್, ಮಯೂರ್ಭಂಜ್, ಕಿಯೋಂಜಾರ್, ಅಂಗುಲ್, ಕಂಧಮಲ್, ಬೌಧ್, ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಯಗಡ, ಮಲ್ಕನಗಿರಿ, ಮತ್ತು ಕೊರಾಪುಟ್ ಸೋಮವಾರ ಬೆಳಗಿನವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂಡೋನೇಷ್ಯಾ ಫುಟ್ಬಾಲ್ ಮೈದಾನದಲ್ಲಿ ಸ್ಥಳೀಯ ಪಂದ್ಯದಲ್ಲಿ ಭಾರೀ ಕಾಲ್ತುಳಿತ ನಡೆದು 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ದುರಂತ ನಡೆದ ಕೆಲವೇ ದಿನಗಳಲ್ಲಿ ಈ ದುರಂತ ನಡೆದಿದೆ.