ಢಾಕಾ, ಸೆಪ್ಟೆಂಬರ್ 15: ಟೂರ್ನಿಯದ್ದಕ್ಕೂ ಅಜೇಯರಾಗಿ ಉಳಿದಿರುವ ಏಳು ಬಾರಿಯ ಚಾಂಪಿಯನ್ಸ್ ಭಾರತ ಫುಟ್ಬಾಲ್ ತಂಡ, ಇಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ.
ಒಬ್ಬ ಆಟಗಾರನನ್ನು ಹೊರತುಪಡಿಸಿ ಭಾರತದ ಸಂಪೂರ್ಣ ತಂಡ 23 ವರ್ಷದೊಳಗಿನ ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಟೂರ್ನಿಯಲ್ಲಿ ಭಾರತ ಒಂದೂ ಪಂದ್ಯವನ್ನು ಸೋತಿಲ್ಲ. ಹೀಗಾಗಿ ಎಂಟನೇ ಬಾರಿ ಚಾಂಪಿಯನ್ಸ್ ಆಗುವ ಭರವಸೆ ಮೂಡಿಸಿದೆ.
ಭಾರತ ಟೂರ್ನಿಯಲ್ಲಿ ಶ್ರೀಲಂಕಾ (2-0), ಮಾಲ್ಡೀವ್ಸ್ (2-0) ಮತ್ತು ಸೆಮಿಫೈನಲ್ಸ್ನಲ್ಲಿ ಪಾಕಿಸ್ತಾನ (3-1) ತಂಡವನ್ನು ಮಣಿಸಿದೆ.

ಸಾಫ್ ಟೂರ್ನಿಯ 12ನೇ ಆವೃತ್ತಿಯಲ್ಲಿ ತನ್ನ ಎಂಟನೇ ಕಿರೀಟದ ಮೇಲೆ ಭಾರತ ಕಣ್ಣಿಟ್ಟಿದೆ. ಪ್ರಾದೇಶಿಕ ಟೂರ್ನಿಯಲ್ಲಿ ಪ್ರಬಲವಾಗಿರುವ ಭಾರತ ಹ್ಯಾಟ್ರಿಕ್ ಸಾಧನೆಯ ಗುರಿ ಹೊಂದಿದೆ.
ಕಳೆದ ಮೂರು ಆವೃತ್ತಿಗಳಲ್ಲಿ ಮಾಲ್ಡೀವ್ಸ್ ಫೈನಲ್ಗೆ ಬಂದಿರುವುದು ಇದೇ ಮೊದಲು. ಪ್ರತಿ ಬಾರಿಯೂ ಅದು ಸೆಮಿಫೈನಲ್ಸ್ನಲ್ಲಿ ಸೋಲು ಅನುಭವಿಸುತ್ತಿದೆ. ಇನ್ನೊಂದೆಡೆ ಭಾರತ 2003ಅನ್ನು ಹೊರತುಪಡಿಸಿ ಎಲ್ಲ 11 ಆವೃತ್ತಿಗಳಲ್ಲಿಯೂ ಫೈನಲ್ಗೆ ಪ್ರವೇಶಿಸಿದೆ.
2009ರಲ್ಲಿ ಇದೇ ಬಂಗಬಂಧು ಕ್ರೀಡಾಂಗಣದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ಮುಖಾಮುಖಿಯಾಗಿದ್ದವು. ಆಗ ಉಭಯ ತಂಡಗಳು ಹೆಚ್ಚುವರಿ ಅವಧಿಯಲ್ಲಿಯೂ ಒಂದೂ ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ಕೊನೆಗೆ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ ಜಯಭೇರಿ ಭಾರಿಸಿತ್ತು.
ಮಾಲ್ಡೀವ್ಸ್ ಗುಂಪು ಹಂತದಲ್ಲಿ ಗೋಲು ಗಳಿಸಿಲು ಹೆಣಗಾಡಿದ್ದರೂ, ಅದನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಕೋಚ್ ಸ್ಟೀಫನ್ ಕಾನ್ಸ್ಟಂಟೈನ್ ಹೇಳಿದ್ದಾರೆ.
ನೇಪಾಳದ ವಿರುದ್ಧ ಮಾಲ್ಡೀವ್ಸ್ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ನೇಪಾಳದ ಮೇಲೆ 3-0 ಅಂತರದ ಗೆಲುವು ಸಾಧಿಸುವುದು ಸುಲಭವಲ್ಲ. ಗುಂಪು ಹಂತದಲ್ಲಿ ನಾವು ಅವರ ವಿರುದ್ಧ ಗೆದ್ದಿದ್ದರೂ, ಅವರ ಮೂರು ಪ್ರಮುಖ ಆಟಗಾರರು ಆ ಪಂದ್ಯದಲ್ಲಿ ಆಡಿರಲಿಲ್ಲ ಎನ್ನುವುದನ್ನು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಇಲ್ಲಿ ಉತ್ತಮ ಆಟ ಪ್ರದರ್ಶಿಸುವ ಆಟಗಾರರು ಏಷ್ಯಾ ಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಲಿದ್ದಾರೆ.
ಲೀಗ್ ಹಂತದಲ್ಲಿ ಕಷ್ಟಪಟ್ಟರೂ, ನಾವು ಫೈನಲ್ ಪ್ರವೇಶಿಸಿದ್ದೇವೆ. ಇದು ನಮಗೆ ಅತಿ ದೊಡ್ಡ ಅವಕಾಶ. ಒಂಬತ್ತು ವರ್ಷಗಳಿಂದ ನಾವು ಫೈನಲ್ ಆಡಿಲ್ಲ. ನಾವು ಹೆಚ್ಚು ಸಿದ್ಧತೆ ನಡೆಸಿದ್ದೇವೆ. ಟೂರ್ನಿಯಲ್ಲಿ ಗೆಲ್ಲಲು ಹೋರಾಟ ನಡೆಸುತ್ತೇವೆ ಎಂದು ಮಾಲ್ಡೀವ್ ತಂಡದ ನಾಯಕ ಅಕ್ರಮ್ ಅಬ್ದುಲ್ ತಿಳಿಸಿದ್ದಾರೆ.
ಪಂದ್ಯವು ಸಂಜೆ 6 ಗಂಟೆಗೆ ಆರಂಭವಾಗಲಿದ್ದು, ಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.