ಇಪೋ (ಮಲೇಷ್ಯಾ), ಮೇ 6: ಪ್ರತಿಷ್ಠಿತ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಸಫಲವಾಗಿದೆ.
ಟೂರ್ನಿಯ ಮೂರು ಹಾಗೂ ನಾಲ್ಕನೇ ಸ್ಥಾನಗಳಿಗಾಗಿ ಶನಿವಾರ ನಡೆದ ಹಣಾಹಣಿಯಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿ, ಕಂಚಿನ ಪದಕ ಗೌರವಕ್ಕೆ ಪಾತ್ರವಾಯಿತು.
ಶುಕ್ರವಾರ ನಡೆದಿದ್ದ ಸೆಮಿಫೈನಲ್ ಸರಿಸಮಾನ ಪಂದ್ಯದಲ್ಲಿ ಭಾರತ, ಆತಿಥೇಯ ಮಲೇಷ್ಯಾ ತಂಡದ ವಿರುದ್ಧ 0-1 ಗೋಲಿನ ಅಂತರದಲ್ಲಿ ಸೋಲು ಕಂಡಿತ್ತು. ಇದರಿಂದಾಗಿ, ಫೈನಲ್ ಗೆ ಸಾಗುವ ಅವಕಾಶದಿಂದ ವಂಚಿತವಾಗಿತ್ತು.[ರಾಜೀವ್ ಖೇಲ್ ರತ್ನ ಪ್ರಶಸ್ತಿಗೆ ಸರ್ದಾರ್ ಸಿಂಗ್ ಹೆಸರು ಶಿಫಾರಸು]

ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು ಎದುರಾಳಿಗಳ ಮೇಲೆ ಹಿಡಿತ ಸಾಧಿಸಿದರು. ಮೊದಲ ಕ್ವಾರ್ಟರ್ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ, ಆನಂತರದ ಕ್ವಾರ್ಟರ್ ನಲ್ಲಿ ರೂಪಿಂದರ್ ಸಿಂಗ್ ಅವರು ತಮಗೆ ಒದಗಿ ಬಂದ ಎರಡು ಪೆನಾಲ್ಟಿ ಕಾರ್ನರ್ ಗಳಲ್ಲಿ ಭರ್ಜರಿ ಗೋಲು ದಾಖಲಿಸಿ ಭಾರತಕ್ಕೆ 2-0 ಗೋಲುಗಳ ಮುನ್ನಡೆ ಒದಗಿಸಿಕೊಟ್ಟರು.[ಚಾಲೆಂಜ್ ಕಪ್ ನಲ್ಲಿ ಭಾರತಕ್ಕೆ 2ನೇ ಸ್ಥಾನ, ಹೆಮ್ಮೆಯ ಸಾಧನೆ]
ಆದರೆ, ಮೂರನೇ ಕ್ವಾರ್ಟರ್ ನಲ್ಲಿ ನ್ಯೂಜಿಲೆಂಡ್ ಉತ್ತಮ ಪೈಪೋಟಿ ನೀಡಿದ್ದರಿಂದಾಗಿ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ನಾಲ್ಕನೇ ಕ್ವಾರ್ಟರ್ ನಲ್ಲಿ ಭಾರತದ ಪಾಲಿಗೆ ಮತ್ತೆರಡು ಗೋಲುಗಳು ಬಂದವು. ಕನ್ನಡಿಗ ಎಸ್.ವಿ. ಸುನಿಲ್ ಹಾಗೂ ತಲ್ವಿಂದರ್ ಸಿಂಗ್ ಅವರು ತಲಾ ಒಂದೊಂದು ಗೋಲು ದಾಖಲಿಸಿ ಭಾರತದ ಜಯಕ್ಕೆ ಮತ್ತಷ್ಟು ಮೆರುಗು ತಂದರು.