
ನವದೆಹಲಿ, ಜು. 1: ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾಟದಲ್ಲಿ ಭಾರತ ಪುರುಷರ ತಂಡ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ 1-3ರ ಸೋಲಿನೊಂದಿಗೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ.
ಚಾಂಪಿಯನ್ಸ್ ಟ್ರೋಫಿ 37ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತ ಸಾಕಷ್ಟು ಸಾರಿ ಪ್ರಶಸ್ತಿ ಬಾಚಿಕೊಳ್ಳುವ ಪ್ರಯತ್ನ ಮಾಡಿತು. ಆದರೆ ಆಸ್ಟ್ರೇಲಿಯಾ ಗೋಲ್ ಕೀಪರ್ ಟಾಯ್ಲರ್ ಲವೆಲ್ ಅವರು ಭಾರತದ ಗೋಲ್ ಪ್ರಯತ್ನಕ್ಕೆಲ್ಲ ತಡೆಯೊಡ್ಡಿದರು.
ಪಂದ್ಯದ ಕಾಲಾವಧಿ ಮುಕ್ತಾಯಕ್ಕೆ ಇತ್ತಂಡಗಳು 1-1ರ ಸಮಬಲ ಸಾಧಿಸಿದ್ದವು. ಹಾಗಾಗಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಈ ವೇಳೆ ಆಸ್ಟ್ರೇಲಿಯಾದ ಗೋಲ್ ಕೀಪರ್ ಅಮೋಘ ಆಟ ಪ್ರದರ್ಶಿಸಿದರು. ಸರ್ದಾರ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ ಅವರ ಗೋಲ್ ಪ್ರಯತ್ನವನ್ನು ಎದುರಾಳಿ ಗೋಲ್ ಕೀಪರ್ ತಡೆದರು. ಹಾಗಾಗಿ ಮನ್ ಪ್ರೀತ್ ಸಿಂಗ್ ಒಬ್ಬರೇ ಭಾರತ ಪರ ಗೋಲ್ ಬಾರಿಸುವಂತಾಯ್ತು.
ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವರು ಆಸ್ಟ್ರೇಲಿಯಾದ ಎರಡು ಶೂಟ್ ಗಳನ್ನು ತಡೆದರಾದರೂ ಅರಾನ್ ಝಲೆವಿಸ್ಕಿ, ಡೇನಿಯಮ್ ಬಿಯಾಲೆ ಮತ್ತು ಜೆರೆಮಿ ಎಡ್ವರ್ಡ್ಸ್ ಸಿಡಿಸಿದ ಗೋಲ್ ಆಸ್ಟ್ರೇಲಿಯಾಕ್ಕೆ ಗೆಲುವನ್ನು ತಂದಿತು.