
ನವದೆಹಲಿ, ಮೇ 3: ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡವನ್ನು ಮುನ್ನಡೆಸಿದ್ದ ಮಿಡ್ ಫೀಲ್ಡರ್ ಮನ್ಪ್ರೀತ್ ಸಿಂಗ್ ಸಹಿತ ಮೂವರು ಆಟಗಾರರ ಹೆಸರನ್ನು ಹಾಕಿ ಇಂಡಿಯಾ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಅರ್ಜುನ ಪ್ರಶಸ್ತಿಗಾಗಿ ಹಾಕಿ ರಾಷ್ಟ್ರೀಯ ಫೆಡರೇಶನ್ ಮಾಡಿರುವ ಶಿಫಾರಸಿನಲ್ಲಿ ಭಾರತದ ಮತ್ತೊಬ್ಬ ಮಿಡ್ ಫೀಲ್ಡರ್ ಧರ್ಮವೀರ್ ಸಿಂಗ್ ಮತ್ತು ವನಿತಾ ತಂಡದ ಗೋಲ್ ಕೀಪರ್ ಸವಿತಾ ಹೆಸರನ್ನೂ ಸೇರಿಸಿದೆ.
'ಜೀವಮಾನದ ಸಾಧನೆಗಾಗಿ ಸಾಂಗೈ ಇಬೆಮ್ಹಾಲ್ ಚಾನು ಮತ್ತು ಪುರುಷ ತಂಡದ ಮಾಜಿ ನಾಯಕ ಭರತ್ ಚೆಟ್ರಿ ಹೆಸರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ' ಎಂದು ಹಾಕಿ ಇಂಡಿಯಾ ಹೇಳಿದೆ.
ಇದಲ್ಲದೆ ಹಾಕಿ ಇಂಡಿಯಾವು ತರಬೇತುದಾರ ಬಿಎಸ್ ಚೌಹಾಣ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಪ್ರಶಸ್ತಿಗಾಗಿ ಪ್ರತಿಭಾನ್ವಿತ ಆಟಗಾರರನ್ನು ಶಿಫಾರಸು ಮಾಡಿರುವ ಬಗ್ಗೆ ಹಾಕಿ ಇಂಡಿಯಾ ಕಾರ್ಯದರ್ಶಿ ಮೊಹಮ್ಮದ್ ಮುಷ್ತಕ್ ಅಹ್ಮದ್ ಮಾತನಾಡಿ, 'ತಮ್ಮ ಅಪೂರ್ವ ಸಾಧನೆ ಮೂಲಕ ಈ ಸಾಧಕರು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದೆ. ಅದಕ್ಕಾಗಿ ಈ ಸಾಧಕರನ್ನು ರಾಷ್ಟ್ರೀಯ ಪ್ರಶಸ್ತಿಗೆ ಸೂಚಿಸಲು ಹರ್ಷವಾಗುತ್ತಿದೆ' ಎಂದರು.