
ಪರ್ತ್, ಮೇ 10: ಮುಂಬರುವ ಹಾಕಿ ವಿಶ್ವ ಲೀಗ್ ಫೈನಲ್ಸ್ ಟೂರ್ನಿಗೆ ಭರ್ಜರಿ ಸಿದ್ಧತೆಯಲ್ಲಿರುವ ಭಾರತ ಹಾಕಿ ತಂಡ ಇಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ 'ಎ' ವಿರುದ್ಧದ ಪಂದ್ಯದಲ್ಲಿ 3-0 ಅಂತರದ ಭರ್ಜರಿ ಜಯ ದಾಖಲಿಸಿ, ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶುಭಾರಂಭ ಮಾಡಿದೆ.
ಭಾರತ ತಂಡದ ಪರ ಸೊಗಸಾದ ಆಟವಾಡಿದ ಯುವ ಸ್ಟ್ರೈಕರ್ ಸುಮಿತ್ ಕುಮಾರ್ ಜೂನಿಯರ್ (12 ಮತ್ತು 13ನೇ ನಿ.) ಎರಡೂ ಗೋಲ್ಗಳನ್ನು ದಾಖಲಿಸಿದರೆ, ಡ್ರ್ಯಾಗ್ ಫ್ಲಿಕರ್ ರೂಪಿಂದರ್ಪಾಲ್ ಸಿಂಗ್ (6ನೇ ನಿ.) ಗಾಯದ ಸಮಸ್ಯೆಯಿಂದಾಗಿ 6 ತಿಂಗಳ ಸುದೀರ್ಘಾವಧಿಯ ವಿರಾಮದ ಬಳಿಕ ಮಿಂಚಿನ ಕಮ್ಬ್ಯಾಕ್ ಮಾಡಿದ್ದಾರೆ.
ಪಂದ್ಯದ ಆರಂಭಿಕ ಅವಧಿಯಲ್ಲೇ ಹೆಚ್ಚು ಆಕ್ರಮಣಕಾರಿ ಆಟವಾಡಿದ ಪ್ರವಾಸಿ ಭಾರತ ತಂಡದ ಚೆಂಡಿನ ಹತೋಟಿಯನ್ನು ಅತಿ ಹೆಚ್ಚು ಕಾಲ ತನ್ನಲ್ಲೇ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪರಿಣಾಮ ಮೊದಲ ಕ್ವಾರ್ಟರ್ನಲ್ಲೇ ಭಾರತ ತಂಡ ಮೂರು ಗೋಲ್ಗಳನ್ನು ದಾಖಲಿ ಪಂದ್ಯದ ಸಂಪೂರ್ಣ ಹಿಡಿತವನ್ನು ತನ್ನದಾಗಿಸಿಕೊಂಡಿತು.
ಪೆನಾಲ್ಟಿ ಕಾರ್ನರ್ ಮೂಲಕ ಭಾರತ ತಂಡ ಪಂದ್ಯದಲ್ಲಿ ಖಾತೆ ತೆರೆಯಿತು. 6ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ರೂಪಿಂದರ್ಪಾಲ್ ಸಿಂಗ್ ಅತ್ಯಂತ ವೇಗವಾಗಿ ಶಕ್ತಿಯುತ ಹೊಡೆತದ ಮೂಲಕ ಆಸ್ಟ್ರೇಲಿಯಾ 'ಎ' ತಂಡದ ಗೋಲ್ಕೀಪರ್ ಗೆ ವಂಚಿಸಿ 1-0 ಅಂತರದ ಮುನ್ನಡೆ ಒದಗಿಸಿಕೊಟ್ಟರು.
ಇನ್ನು ಡಿಫೆಂಡರ್ ಹರ್ಮನ್ಪ್ರೀತ್ ಸಿಂಗ್ ಅವರ ಚಾಕಚಕ್ಯತೆಯ ಫಲವಾಗಿ ಆಸ್ಟ್ರೇಲಿಯಾ "ಎ" ತಂಡಕ್ಕೆ ಎರಡನೇ ಹೊಡೆತ ಎದುರಾಯಿತು. ನಾಯಕ ಮನ್ಪ್ರೀತ್ ಸಿಂಗ್ ಅವರು ನೀಡಿದ ಪಾಸ್ನ ಅದ್ಭುತ ಲಾಭ ಪಡೆದ ಜೂನಿಯರ್ ಸುಮಿತ್ ಕುಮಾರ್ 12ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲ್ ದಾಖಲಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
ಆರಂಭದಲ್ಲೇ ಎರಡು ಗೋಲ್ ಬಿಟ್ಟು ಕೊಡುವ ಮೂಲಕ ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೇವಲ ಒಂದು ನಿಮಿಷ ಅಂತರದಲ್ಲಿ ಮೂರನೇ ಆಘಾತ ಎದುರಾಯಿತು. ಸ್ಟ್ರೈಕರ್ ಆಕಾಶ್ದೀಪ್ ಸಿಂಗ್ ಅವರ ನೆರವಿನಿಂದ ಸುಮಿತ್ ಕುಮಾರ್ ಎರಡನೇ ಗೋಲ್ ದಾಖಲಿಸಿ ಮಿಂಚು ಮೂಡಿಸಿದರು. ಇದೇ ವರ್ಷ ನಡೆದ 28ನೇ ಸುಲ್ತಾನ್ ಅಝ್ಲಾನ್ ಶಾ ಹಾಕಿ ಟೂರ್ನಿಯಲ್ಲೂ ಸುಮಿತ್ ಕುಮಾರ್ ಗಮನಾರ್ಹ ಪ್ರದರ್ಶನ ನಿಡಿದ್ದರು.
ಮೊದಲ ಅವಧಿಯಲ್ಲೇ ಮೂರು ಗೋಲ್ಗಳ ಮುನ್ನಡೆ ಪಡೆದ ಭಾರತ ತಂಡ ಬಳಿಕ ತನ್ನ ಡಿಫೆನ್ಸ್ ವಿಭಾಗವನ್ನು ಹೆಚ್ಚು ಬಲ ಪಡಿಸಿಕೊಳ್ಳುವ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ಗೋಲ್ ಗಳಿಸುವ ಯಾವುದೇ ಅವಕಾಶವನ್ನು ಬಿಟ್ಟುಕೊಡದೆ ಗೆಲುವನ್ನು ತನ್ನದಾಗಿಸಿಕೊಂಡಿತು. ಡಿಫೆನ್ಸ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ಭಾರತದ ಪರ ಭದ್ರಕೋಟೆಯಾಗಿ ನಿಂತು ಎದುರಾಳಿ ಆಟಗಾರರ ಪ್ರಯತ್ನಗಳನ್ನು ವಿಫಲಗೊಳಿಸಿದರು.
ಇನ್ನು ಆಸ್ಟ್ರೇಲಿಯಾ ತಂಡಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲ್ ಗಳಿಸುವ ಏಕೈಕ ಅವಕಾಶ ಲಭ್ಯವಾಗಿತ್ತಾದರೂ, ಭಾರತ ತಂಡದ ಗೋಲ್ಕೀಪರ್ ಕೃಷ್ಣನ್ ಪಾಠಕ್ ಯಶಸ್ವಿಯಾಗಿ ತಡೆದು ನಿಲ್ಲಿಸಿದರು. ಭಾರತ ತಂಡ ಮೇ 13ರಂದು ತನ್ನ ಮುಂದಿನ ಪಂದ್ಯವನ್ನಾಡಲಿದೆ.
"ಆಟದ ಮೂಲ ತಂತ್ರಗಳನ್ನು ಬಳಕೆಗೆ ತಂದ ಪಂದ್ಯದ ಮೊದಲ ಅವಧಿ ಅದ್ಭುತವಾಗಿತ್ತು. ಇಂಥದ್ದೊಂದು ಗೆಲುವಿನ ಅಗತ್ಯವಿತ್ತು. ಇನ್ನೇನಿದ್ದರೂ ಇದೇ ಹಾದಿಯಲ್ಲಿ ಸಾಗುವ ಕಡೆಗೆ ಗಮನ ನೀಡಬೇಕಾಗಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ಕೋಚ್ ಗ್ರಹಾಮ್ ರೀಡ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.