
ಟೋಕಿಯೋ, ಆಗಸ್ಟ್ 5: ಟೋಕಿಯೋ ಒಲಿಂಪಿಕ್ಸ್ನ ಪ್ಲೇಆಫ್ ಪಂದ್ಯದಲ್ಲಿ ಜರ್ಮನಿ ತಂಡವನ್ನು ಭರ್ಜರಿಯಾಗಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಹಾಕಿ ಸುದೀರ್ಘ ಕಾಲದಿಂದ ಅನುಭವಿಸುತ್ತಿದ್ದ ಒಲಿಂಪಿಕ್ಸ್ ಪದಕದ ಕನಸನ್ನು ನೀಗಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಿನ್ನೆಡೆಯನ್ನೇ ಕಾಣುತ್ತಾ ಬಂದಿದ್ದ ಭಾರತೀಯ ಹಾಕಿ ತಂಡ ಈಗ ಅತ್ಯಂತ ದೊಡ್ಡ ಯಶಸ್ಸನ್ನು ಸಾಧಿಸಿದೆ. ಈ ಯಶಸ್ಸಿಗೆ ಇಡೀ ದೇಶವೇ ಸಂಭ್ರಮಿಸಿಸುತ್ತಿದೆ. ಹಾಕಿ ತಂಡದ ಆಟಗಾರರ ಸಾಧನೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಒಲಿಂಪಿಕ್ಸ್ನಲ್ಲಿ ಭಾರತೀಯ ಹಾಕಿ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹರ್ಷವನ್ನು ವ್ಯಕ್ತಪಡಿಸಿದ್ದು ಅತ್ಯುನ್ನತ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್ನಲ್ಲಿ ಭಾರತ ಸಾಧಿಸಿದ ಸಾಧನೆಗೆ ಹೋಲಿಕೆ ಮಾಡಿರುವ ಗೌತಮ್ ಗಂಭೀರ್ ಕ್ರಿಕೆಟ್ನ ಎಲ್ಲಾ ಸಾಧನೆಗಳಿಗಿಂತ ಹಾಕಿ ತಂಡ ಗೆದ್ದ ಈ ಕಂಚಿನ ಪದಕದ ಸಾಧನೆ ಅತ್ಯಂತ ದೊಡ್ಡದು ಎಂದಿದ್ದಾರೆ. ಈ ಮೂಲಕ ಹಾಕಿ ಆಟಗಾರರ ಸಾಧನೆಗೆ ಮುಕ್ತಕಂಠದಿಂದ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ನಲ್ಲಿ ಭಾರತ ಗೆದ್ದಿರುವ ಮೂರು ವಿಶ್ವಕಪ್ನ ಸಾಧನೆಯ ವರ್ಷಗಳನ್ನು ಉಲ್ಲೇಖಿಸಿ ಈ ಪ್ರಶಂಸೆಯನ್ನು ಮಾಡಿದ್ದಾರೆ ಗಂಭೀರ್. "1983, 2007 ಅಥವಾ 2011 ಎಲ್ಲವನ್ನೂ ಮರೆತುಬಿಡಿ. ಹಾಕಿಯಲ್ಲಿ ಈ ಪದಕ ಎಲ್ಲಾ ವಿಶ್ವಕಪ್ಗಳಿಗಿಂತ ದೊಡ್ಡದು" ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಹಾಕಿಯಲ್ಲಿ ಭಾರತದ ಸಾಧನೆಗೆ ಭಾರೀ ಪ್ರಮಾಣದಲ್ಲಿ ಮುಕ್ತ ಕಂಠದ ಪ್ರಶಂಶೆಗಳು ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತ ಹಾಕಿ ತಂಡದ ಸಾಧನೆಯನ್ನು ಟ್ವಿಟ್ಟರ್ನಲ್ಲಿ ಹಾಡಿಹೊಗಳಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಟ್ವೀಟ್ನಲ್ಲಿ "ಐತಿಹಾಸಿಕ, ಈ ದಿನ ಎಲ್ಲಾ ಭಾರತೀಯರ ಪಾಲಿಗೆ ಸ್ಮರಣಿಯವಾಗಿರುವ ದಿನವಾಗಿರಲಿದೆ. ಕಂಚಿನ ಪದಕವನ್ನು ತವರಿಗೆ ನೀಡಿದ್ದಕ್ಕಾಗಿ ಭಾರತದ ಪುರುಷರ ಹಾಕಿ ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ಈ ಸಾಧನೆಯೊಂದಿಗೆ ಇಡೀ ದೇಶದ ಅದರಲ್ಲೂ ವಿಶೇಷವಾಗಿ ಯುವಕರ ಕಲ್ಪನೆಯನ್ನು ನಿಜವಾಗಿಸಿದ್ದಾರೆ. ನಮ್ಮ ಹಾಕಿ ತಂಡದ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ" ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಅವರಿಂದ ಹಿಡಿದು ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ವರೆಗೆ ಸಾಕಷ್ಟು ದಿಗ್ಗಜರು ಹಾಕಿ ತಂಡದ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾರತೀಯ ಹಾಕಿ ತಂಡದ ಯಶಸ್ಸನ್ನು ಇಡೀ ದೇಶವೇ ಕೊಂಡಾಡತೊಡಗಿದೆ.
ಹಾಕಿಯಲ್ಲಿ ಭಾರತ 12ನೇ ಪದಕ: ಇದು ಒಲಿಂಪಿಕ್ಸ್ ಕ್ರೀಡೆಯಲ್ಲಿ ಹಾಕಿ ತಮಡದ 12ನೇ ಪದಕವಾಗಿದೆ. ಭಾರತ ಒಟ್ಟು 8 ಚಿನ್ನದ ಪದಕವನ್ನು ಈವರೆಗೆ ಹಾಕಿಯಲ್ಲಿ ಗೆದ್ದುಕೊಂಡು ದಾಖಲೆಹೊಂಡಿದೆ. ಇಂದು ಗೆದ್ದ ಈ ಸಾಧನೆ ಭಾರತೀಯ ಹಾಕಿ ತಂಡ ಕಳೆದ 41 ವರ್ಷಗಳಲ್ಲಿ ದಾಖಲಿಸಿದ ಅತ್ಯನ್ನತ ಸಾಧನೆಯೆನಿಸಿದೆ.
ಸೆಮಿಫೈನಲ್ನಲ್ಲಿ ಗೆದ್ದು ನಿರಾಸೆ ಅನುಭವಿಸಿದ್ದ ಭಾರತ: ಭಾರತ ಸೆಮಿಫೈನಲ್ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಗೆದ್ದು ಫೈನಲ್ ಹಂತಕ್ಕೇರುವ ಗುರಿಯನ್ನು ಹೊಂದಿತ್ತು. ಆದರೆ ಭಾರತ ತಂಡ ಬೆಲ್ಜಿಯಂ ವಿರುದ್ಧ 5-2 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಆದರೆ ಕಂಚಿನ ಪದಕ ಗೆಲ್ಲುವ ಹೋರಾಟದಲ್ಲಿ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗುವ ಮೂಲಕ ಇಡೀ ದೇಶ ಸಂಭ್ರಮಿಸುವಂತೆ ಮಾಡಿದೆ.