
ಈ ವರ್ಷಾಂತ್ಯದಲ್ಲಿ ಭಾರತ ಟಿ20 ವಿಶ್ವಕಪ್ಗೆ ಆತಿಥ್ಯವನ್ನು ವಹಿಸಲಿದೆ. ಈ ಮಹತ್ವದ ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 9 ತಾಣಗಳನ್ನು ಆಯ್ಕೆ ಮಾಡಿದೆ. ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಲಕ್ನೋ, ಕೊಲ್ಕತ್ತಾ ಹಾಗೂ ಮುಂಬೈನಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಐಸಿಸಿ ಅಂತಿಮ ನಿರ್ಧಾರವನ್ನು ಇನ್ನಷ್ಟೇ ತಿಳಿಸಬೇಕಿದೆ.
ಟೂರ್ನಿಯ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಕೂಡ ಅಂತಿಮವಾಗಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇನ್ನಷ್ಟೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ಮಾಹಿತಿಯ ಪ್ರಕಾರ ಬಿಸಿಸಿಐ ಹಾಗೂ ಐಸಿಸಿ ಟೂರ್ನಿಯ ಆಯೋಜನೆಗೆ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿವೆ. ಇದರ ಜೊತೆಗೆ ಸದ್ಯ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ಅನ್ನು ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತಕ್ಕೆ ಏಪ್ರಿಲ್ 26ರಂದು ಐಸಿಸಿ ತಂಡವೊಂದು ಆಗಮಿಸಿ ಪರಿಸ್ಥಿತಿ ಬಗ್ಗೆ ಅವಲೋಕಿಸುವ ಸಾಧ್ಯತೆಯಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
16 ತಂಡಗಳು ಭಾಗಿಯಾಗಲಿರುವ ಈ ಮಹತ್ವದ ಟೂರ್ನಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಯೋಜನೆಯಾಗಲಿದೆ. ನವೆಂಬರ್ 13ರಂದು ಫೈನಲ್ ಪಂದ್ಯಕ್ಕೆ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಎರಡು ವಾರಗಳ ಹಿಂದೆ ಐಸಿಸಿ ಹಂಗಾಮಿ ಸಿಇಒ ಜೆಫ್ ಅಲಾರ್ಡೈಸ್ ನಿಗದಿಯಂತೆಯೇ ಭಾರತದಲ್ಲಿ ಟೂರ್ನಿ ಆಯೋಜನೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಆಡಳಿತ ಮಂಡಳಿ ಪರ್ಯಾಯ ಯೋಜನೆಯನ್ನು ಕೂಡ ಸಿದ್ಧಪಡಿಸಿಕೊಂಡಿದೆ.
ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದರೂ ವಿಶ್ವಕಪ್ ಆಯೋಜನೆಯ ಸಂದರ್ಭಕ್ಕೆ ಮುನ್ನ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗಿರುತ್ತದೆ. ಜೊತೆಗೆ ಭಾರತ ದೊಡ್ಡ ಪ್ರಮಾಣದಲ್ಲಿ ಕೊರೊನಾ ವೈರಸ್ ಸಂಖ್ಯೆ ಏರಿಕೆ ಮಧ್ಯೆಯೂ ಐಪಿಎಲ್ಅನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿರುವುದು ಬಿಸಿಸಿಐನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.